ಸರ್ಕಾರದ ಯೋಜನೆ ಅರ್ಹರಿಗೆ ತಲುಪಲಿ : ಎಚ್.ವಿ. ಶಿವಶಂಕರ್
Team Udayavani, Nov 10, 2020, 1:00 PM IST
ಗದಗ: ಸರ್ಕಾರದ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈ ಪ್ರಕ್ರಿಯೆಯಲ್ಲಿ ಇರುವ ಸಮಸ್ಯೆ ಸವಾಲುಗಳ ಕುರಿತು ಪರಿಹಾರ ಸಿಗದಿದ್ದಲ್ಲಿ ಆಯೋಗದ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್.ವಿ. ಶಿವಶಂಕರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಆಹಾರ ಆಯೋಗ ನ.13ರ ವರೆಗೆ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ, ಯೋಜನೆಗಳ ಅನುಷ್ಠಾನ ಕುರಿತು ದಾಖಲೆ ಪರಿಶೀಲಿಸಲಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ನ್ಯಾಯಬೆಲೆ ಅಂಗಡಿ, ಆಹಾರ ಧಾನ್ಯ ಸಗಟು ಮಳಿಗೆ, ಅಂಗನವಾಡಿ ಕೇಂದ್ರ, ಎಂಎಸ್ಪಿಟಿಸಿ,
ಮಧ್ಯಾಹ್ನದ ಉಪಾಹಾರ ಯೋಜನೆ, ಜಿಲ್ಲಾಸ್ಪತ್ರೆಯಲ್ಲಿರುವ ಎನ್.ಆರ್.ಸಿ. ಘಟಕ, ಕೃಷಿ ಇಲಾಖೆ, ವಿಕಲಚೇತನ, ಹಿರಿಯ
ನಾಗರಿಕರ ಸಬಲೀಕರಣ ಇಲಾಖೆ, ಸಾಮಾಜಿಕ ಭದ್ರತೆ, ಪಿಂಚಣಿ ಇಲಾಖೆ ಮತ್ತು ಜಿಲ್ಲೆಯ ಸರ್ಕಾರಿ ವಸತಿ ನಿಲಯಗಳಿಗೆ ಭೇಟಿ
ನೀಡಿ ಅಲ್ಲಿರುವ ವ್ಯವಸ್ಥೆ ಕುರಿತು ಪರಿಶೀಲಿಸಲಾಗುವುದು. ಈ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು ಹಾಜರಿದ್ದು, ಮಾಹಿತಿ
ಒದಗಿಸಬೇಕೆಂದು ಸೂಚಿಸಿದರು.
ಇದನ್ನೂ ಓದಿ:ಬೆಂಗಳೂರು: ಹೊಸಗುಡ್ಡದಹಳ್ಳಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ
ಆಯೋಗದ ಸದಸ್ಯ ಬಿ.ಎ. ಮಹ್ಮದ ಅಲಿ, ಮಂಜುಳಾ ಸಾತನೂರ ಮಾತನಾಡಿ, ಆಯೋಗವು ನ.13ರಂದು 11ಕ್ಕೆ ಗದಗ ಡಿಸಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದೆ. ನಂತರ 12.30ಕ್ಕೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ
ಯೋಜನೆಗಳ ಅನುಷ್ಠಾನ ಬಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದೆ ಎಂದರು.
ಈ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ, ಸಹಾಯಕ ನಿರ್ದೇಶಕಿ ಗಿರಿಜಮ್ಮ,
ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸತೀಶ್ ಬಸರಿಗಿಡದ, ಸಮಾಜ ಕಲ್ಯಾಣ
ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನ್ನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಬಿ.ಐ. ಅಸುಂಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಅಧಿಕಾರಿ ಆರ್. ಹೊಸಮನಿ, ಕೆಎಸ್ಎಫ್ಸಿ ಅಧಿಕಾರಿ ವಿನೋದ ಕುಮಾರ ಇದ್ದರು.