Power: ಕೇಂದ್ರದಿಂದ ವಿದ್ಯುತ್ ಬಂದರೆ ಲೋಡ್ಶೆಡ್ಡಿಂಗ್ ಸ್ಥಗಿತ: ರಾಮಲಿಂಗಾ ರೆಡ್ಡಿ
Team Udayavani, Oct 12, 2023, 8:26 PM IST
ರಾಮನಗರ: ಬರ ಪರಿಸ್ಥಿತಿಯಿಂದಾಗಿ ಜಲಾಶಯಗಳಲ್ಲಿ ನೀರು ಕಡಿಮೆಯಾಗಿದೆ. ಆದಕಾರಣ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದು, ಸ್ವಲ್ಪ ಲೋಡ್ಶೆಡ್ಡಿಂಗ್ ಮಾಡಲಾಗುತ್ತಿದೆ. ಹೆಚ್ಚಿನ ವಿದ್ಯುತ್ಗಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ. ಕೇಂದ್ರದಿಂದ ವಿದ್ಯುತ್ ಬಂದರೆ ಲೋಡ್ಶೆಡ್ಡಿಂಗ್ ನಿಲ್ಲಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಸಮಸ್ಯೆ ನಿಯಂತ್ರಿಸಲು ನಮ್ಮ ಸರಕಾರ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ. ಕೇಂದ್ರದಿಂದ ರಾಜ್ಯಕ್ಕೆ ದೊರೆಯಬೇಕಿರುವ ವಿದ್ಯುತ್ ಲಭ್ಯವಾದಲ್ಲಿ ಅಗತ್ಯವಿರುವಷ್ಟು ವಿದ್ಯುತ್ ಪೂರೈಕೆ ಮಾಡಬಹುದಾಗಿದೆ ಎಂದರು.
ಮುನಿರತ್ನ ಹಿಂದಿನದ್ದನ್ನು ನೆನೆಸಿಕೊಳ್ಳಲಿ
ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಿದ್ದಾರೆಂದು ಹೇಳುವ ಶಾಸಕ ಮುನಿರತ್ನ ಅವರು 5 ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ನೆನೆಸಿಕೊಳ್ಳಲಿ. 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ನನ್ನ ಕ್ಷೇತ್ರಕ್ಕೆ 400 ಕೋಟಿ ರೂ. ನೀಡಿದ್ದರು. ಬಳಿಕ ಬಂದ ಬಿಜೆಪಿ ಸರಕಾರ 260 ಕೋಟಿ ರೂ. ಕಡಿತ ಮಾಡಿತ್ತು. ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ನೀಡಿದ್ದ 7 ಸಾವಿರ ಕೋಟಿ ರೂ. ಅನುದಾನದ ಪೈಕಿ 5 ಸಾವಿರ ಕೋಟಿ ರೂ. ಅನ್ನು ಕಡಿತ ಮಾಡಿದ್ದರು ಎಂದು ಪ್ರತಿಕ್ರಿಯಿಸಿದರು.
ಪಠ್ಯಪುಸ್ತಕ ರಚನೆಗೆ ಹೊರ ರಾಜ್ಯದವನ್ನು ನೇಮಿಸಿಕೊಂಡಿರುವ ವಿಚಾರ ನನಗೆ ಗೊತ್ತಿಲ್ಲ. ಈ ಹಿಂದೆ ಬಿಜೆಪಿಯವರು ಯಾರನ್ನು ಸಮಿತಿಗೆ ನೇಮಕ ಮಾಡಿದ್ದರು ಎಂದು ಎಲ್ಲರಿಗೂ ಗೊತ್ತಿದೆ. ಹಿಂದೆ ದೊಡ್ಡ ವ್ಯಕ್ತಿಯನ್ನೇ ನೇಮಕ ಮಾಡಿದ್ದರು. ನಮ್ಮ ರಾಜ್ಯದವರನ್ನೇ ಬಿಜೆಪಿಯವರು ನೇಮಕ ಮಾಡಿದ್ದರಲ್ಲ, ಅಂದು ಏನೆಲ್ಲ ಆಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಲೇವಡಿ ಮಾಡಿದರು.