Politics: ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ ಕೇಂದ್ರ?
-ಸಾಮಾಜಿಕ ಜಾಲತಾಣದಲ್ಲಿ ಆನ್ಸರ್ ಮಾಡಿ ಮೋದಿ ಅಭಿಯಾನ ಮುಂದುವರಿಸಿದ ಸಿಎಂ
Team Udayavani, Oct 29, 2023, 10:08 PM IST
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಭಿಯಾನ ಮುಂದುವರಿಸಿರುವ ಸಿಎಂ, ಕರ್ನಾಟಕದ ಮೇಲೆ ಏಕೆ ಪ್ರೀತಿಯಿಲ್ಲ? ಉತ್ತರಿಸಿ ಮೋದಿ ಅವರೇ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಪ್ರಾಯೋಜಕತ್ವದ ಯೋಜನೆಗಳಲ್ಲಿ ಅನ್ಯಾಯ-ರಾಜ್ಯದ ಪಾಲಿನ ಅನುದಾನಕ್ಕೆ ಕೊಕ್ಕೆ ಎನ್ನುವ ಶೀರ್ಷಿಕೆಯೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭಾವಚಿತ್ರ ಬಳಸಿ ಪೋಸ್ಟ್ ಮಾಡಲಾಗಿದ್ದು, 2021-22 ರ ಬಜೆಟ್ನಲ್ಲಿ 20,986 ಕೋಟಿ ರೂ. ಅನುದಾನ ಕೊಟ್ಟಿದ್ದ ಕೇಂದ್ರ ಸರ್ಕಾರವು, 2023-24 ರ ಬಜೆಟ್ನಲ್ಲಿ 13,005 ಕೋಟಿ ರೂ. ಅನುದಾನ ಒದಗಿಸಿದೆ ಎನ್ನುವ ಮೂಲಕ 7 ಸಾವಿರ ಕೋಟಿ ರೂ.ಗೂ ಅಧಿಕ ಪ್ರಮಾಣದ ಅನುದಾನಕ್ಕೆ ಕೊಕ್ಕೆ ಹಾಕಲಾಗಿದೆ ಎಂದಿದ್ದಾರೆ.
ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ 14ನೇ ಹಣಕಾಸು ಆಯೋಗವು ಶೇ.4.72 ರಷ್ಟು ತೆರಿಗೆ ಪಾಲನ್ನು ಕರ್ನಾಟಕಕ್ಕೆ ನಿಗದಿಪಡಿಸಿದ್ದರೆ, ಎನ್ಡಿಎ ಸರ್ಕಾರವು 15ನೇ ಹಣಕಾಸು ಆಯೋಗದ ಮೂಲಕ ಶೇ.3.64 ಕ್ಕೆ ಇಳಿಸಿದೆ. ಕಳೆದ 4 ವರ್ಷಗಳಲ್ಲಿ ನಮ್ಮ ತೆರಿಗೆ ಪಾಲಿನಲ್ಲಿ 45 ಸಾವಿರ ಕೋಟಿ ರೂ. ನಷ್ಟವಾಗಿದೆ. ಇದು ತೆರಿಗೆ ಪಾಲಲ್ಲಿ ರಾಜ್ಯಕ್ಕೆ ಆಗಿರುವ ವಂಚನೆ ಹಾಗೂ ಉತ್ತರ ಭಾರತದ ಪಾಲಾಗುತ್ತಿದೆ ಕನ್ನಡಗರ ಬೆವರಿನ ಹಣ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಕರ್ನಾಟಕ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ ಕೇಂದ್ರದ ಬಿಜೆಪಿ ಸರ್ಕಾರ ಎನ್ನುವ ಪ್ರಶ್ನೆಯನ್ನೂ ಇಟ್ಟಿದ್ದಾರೆ.