ಜಾಧವ ಮಾನನಷ್ಟ ಮೊಕದ್ದಮೆ ಹಾಕಲಿ
Team Udayavani, May 6, 2019, 3:03 AM IST
ಕಲಬುರಗಿ: “ಬಿಜೆಪಿಗೆ ಮಾರಾಟವಾಗಿದ್ದಾರೆಂದು ಹೇಳಿದ್ದಕ್ಕೆ ಮಾಜಿ ಶಾಸಕ ಡಾ| ಉಮೇಶ ಜಾಧವ ನಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾದರೆ ಹಾಕಲಿ. ನಾವೂ ಮೊಕದ್ದಮೆ ಹೂಡುತ್ತೇವೆ. ನಮಗೂ ಕಾನೂನು ಗೊತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, “ಚಿಂಚೋಳಿ ಮಾನವನ್ನು ಉಮೇಶ ಜಾಧವ ಹರಾಜು ಹಾಕಿದ್ದಾರೆ. ಆಪರೇಷನ್ ಕಮಲ ಮಾಡಿದ್ದೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಸದನದಲ್ಲಿ ಚರ್ಚೆಯಾಗಿದೆ.
ಚಿಂಚೋಳಿ ಉಪಚುನಾವಣೆ ಯಾಕೆ ನಡೆಯುತ್ತಿದೆ ಮತ್ತು ರಾಜೀನಾಮೆ ಯಾಕೆ ಕೊಟ್ರಾ ಎನ್ನೋದರ ಬಗ್ಗೆ ಚಿಂಚೋಳಿ ಜನತೆಗೆ ಜಾಧವ ಉತ್ತರ ಕೊಡಲಿ. ಚಿಂಚೋಳಿಗೆ ಹೋಗಬೇಕಾದರೆ ಈ ಮೊದಲು ನಾವು ವೀಸಾ ತೆಗೆದುಕೊಂಡು ಹೋಗಬೇಕಾಗಿತ್ತು. ಚಿಂಚೋಳಿಗೆ ಬರುತ್ತೇನೆ ಎಂದರೂ ಜಾಧವ ಬೇಡ ಅಂತಿದ್ದರು’ ಎಂದರು.