Karnataka: ಕಾಂತರಾಜ ಆಯೋಗದ ವರದಿ ಅಂಶಗಳು ಸೋರಿಕೆ ಆಗಿದ್ದು ನಿಜ: ಡಾ| ಜಿ. ಪರಮೇಶ್ವರ್
Team Udayavani, Feb 6, 2024, 11:19 PM IST
ಬೆಂಗಳೂರು: ಸರಕಾರದಲ್ಲಿ ಒಂದೊಂದು ಸಲ ಅಧಿಕೃತವಾಗಿ ಹೊರಗಡೆ ಬರುವುದಕ್ಕಿಂತಲೂ ಮೊದಲೇ ಚುರ್ ಚುರ್ ಮಾಹಿತಿ ಗೊತ್ತಾಗಿಬಿಡುತ್ತೆ. ಅದೇ ರೀತಿಯಲ್ಲಿ ನನಗೆ ಗೊತ್ತಿರುವ ಮಾಹಿತಿಯಂತೆ ಕಾಂತರಾಜ ಆಯೋಗದ ವರದಿಯ ಕೆಲವು ಅಂಶಗಳ ಸೋರಿಕೆ ಆಗಿರುವುದು ನಿಜ. ಆ ರೀತಿ ಬಂದ ಕೆಲವು ಮಾಹಿತಿಗಳ ಪ್ರಕಾರ ಕೆಲವು ಜಾತಿಗಳು ಹೆಚ್ಚಿವೆ, ಕೆಲವು ಜಾತಿಗಳು ಕಡಿಮೆ ಆಗಿದೆ ಎಂಬ ಹೇಳಿಕೆಗಳು ಬಂದಿವೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹೇಳಿದರು. ರಾಜ್ಯ ಸವಿತಾ ಕಲಾ ಸಂಘ ಮಂಗಳವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸವಿತಾ ಕಲಾ ಸಮ್ಮೇಳನ ಮತ್ತು ದಿ| ಕರ್ಪೂರಿ ಠಾಕೂರ್ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
168 ಕೋಟಿ ರೂ. ವ್ಯಯ
ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಸಣ್ಣ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ 168 ಕೋಟಿ ರೂ. ಖರ್ಚು ಮಾಡಿ ಕಾಂತರಾಜ ಆಯೋಗ ವರದಿ ಸಿದ್ಧಪಡಿಸಿದರು. ಆದರೆ ಆ ವರದಿಯ ಕೆಲವು ಅಂಶಗಳ ಲೀಕ್ ಆಗಿದೆ ಎಂಬ ಮಾಹಿತಿ ಬಂದ ಕೂಡಲೇ ಕಾಂತರಾಜ ಆಯೋಗದ ವರದಿ ಒಪ್ಪಬೇಡಿ, ಅದನ್ನು ಬಿಡುಗಡೆ ಮಾಡಬೇಡಿ ಎಂದು ಹೇಳುವ ಕೆಲವು ಶಕ್ತಿಗಳು ಹುಟ್ಟುಕೊಂಡಿವೆ ಎಂದು ವಾಗ್ಧಾಳಿ ನಡೆಸಿದರು.
ವರದಿ ಶೀಘ್ರ ಪ್ರಕಟಿಸಬೇಕು
ಒಂದು ಸಮುದಾಯ ಹಿಂದಿದೆ ಎಂದಾದರೆ ಸರಕಾರ ಆ ಸಮುದಾಯಕ್ಕೆ ಯೋಜನೆ ಮತ್ತು ಕಾರ್ಯಕ್ರಮ ರೂಪಿಸಿ ಸರಕಾರ ಶಕ್ತಿ ತುಂಬುವ ಕೆಲಸ ಮಾಡಲಿದೆ. ಆ ಹಿನ್ನೆಲೆಯಲ್ಲಿ ಶೀಘ್ರವೇ ಮುಖ್ಯಮಂತ್ರಿಗಳು ಕಾಂತರಾಜ ಆಯೋಗದ ವರದಿ ಸ್ವೀಕಾರ ಮಾಡಿ ಪ್ರಕಟ ಮಾಡಬೇಕು ಎಂದು ಆಗ್ರಹಿಸಿದರು.
ವರದಿ ಶೀಘ್ರ ಸಲ್ಲಿಕೆ: ಜಯಪ್ರಕಾಶ್ ಹೆಗ್ಡೆ
ರಾಜ್ಯ ಸರಕಾರಕ್ಕೆ ಕಾಂತರಾಜ ಆಯೋಗದ ವರದಿ ಶೀಘ್ರ ಕೊಡುತ್ತೇವೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಕಾಂತರಾಜ ವರದಿಯನ್ನು ಯಾವ ರೀತಿಯಲ್ಲಿ ಕೊಡುತ್ತೇವೆ ಎಂಬುದನ್ನು ಹೇಳಲಿಕ್ಕಾಗದು ಎಂದರು.