ಅವಧಿಗಿಂತ ಮುನ್ನವೇ ಲಾಕ್ಡೌನ್ ಸಡಿಲಿಕೆ
Team Udayavani, Apr 26, 2020, 7:53 PM IST
ಮಣಿಪಾಲ : ಜೆಕ್ ಗಣರಾಜ್ಯದಲ್ಲಿ ಆಶಾದಾಯಕ ಬೆಳವಣಿಗೆಯಾಗಿದ್ದು, ನಿರೀಕ್ಷೆ ಮಟ್ಟಕ್ಕೂ ಮೀರಿ ಮಾರ್ಚ್ 14ರ ನಂತರ ದೇಶದಲ್ಲಿ ಸೋಂಕು ಪ್ರಸರಣ ಪ್ರಮಾಣ ಕುಸಿದಿದೆ.
ಈ ಹಿನ್ನಲೆಯಲ್ಲಿ ವಿದೇಶಿ ಪ್ರಯಾಣಿಕರ ಪ್ರವೇಶಾತಿಗೆ ಅನುಮತಿ ನೀಡಿದ್ದು, ತನ್ನ ಗಡಿ ಭಾಗಗಳನ್ನು ತೆರೆಯುವ ಮೂಲಕ ವಿಮಾನಯಾನವನ್ನು ಪ್ರಾರಂಭಿಸಿದೆ. ಹಾಗೆ ನೋಡುವುದಾದರೆ ಲಾಕ್ಡೌನ್ ತರುವಾಯ ಅಂತಾರಾಷ್ಟ್ರೀಯ ವಿಮಾನ ಯಾನ ಮತ್ತೆ ಆರಂಭಿಸಿ ವಿದೇಶಿಗರಿಗೆ ಪ್ರವೇಶ ನೀಡಿರುವ ಕೆಲವೇ ದೇಶಗಳಲ್ಲಿ ಜೆಕ್ ಸಹ ಒಂದಾಗಿದೆ. ಚೀನದಲ್ಲೂ ಇನ್ನೂ ಸಂಪೂರ್ಣವಾಗಿ ವಿದೇಶಿಗರ ಪ್ರಯಾಣಕ್ಕೆ ತೆರವಾಗಿಲ್ಲ.
ಗುರುವಾರ ತಡರಾತ್ರಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಸಚಿವ ಆಡಮ್ ವೊಜಾrಚ್ ಲಾಕ್ ಡೌನ್ ಸಡಿಲಿಕೆ ಹಿಂದಿನ ಉದ್ದೇಶವನ್ನು ವಿವರಿಸಿದರು. ಜತೆಗೆ ಕೆಲವು ನಿರ್ದಿಷ್ಟ ನಿಯಮಗಳ ಪಾಲನೆಯ ಅಗತ್ಯವನ್ನೂ ಪ್ರತಿಪಾದಿಸಿದರು.
ನಿಯಮಗಳೇನು ?
ದೇಶಕ್ಕೆ ಭೇಟಿ ನೀಡುವ ಪ್ರಯಾಣಿಕರು ಆರೋಗ್ಯ ವರದಿಯನ್ನು ಅಧಿಕೃತ ಅಧಿಕಾರಿಗಳಿಗೆ ನೀಡಬೇಕಿದ್ದು, ಅವರು ಸೋಂಕು ಮುಕ್ತರಾಗಿದ್ದರೆ ಮಾತ್ರ ಪ್ರಯಾಣ ಅವಕಾಶ ಕಲ್ಪಿಸಲಾಗುವುದು. ಜತೆಗೆ ಯಾವ ಪ್ರಯಾಣಿಕರು 14 ದಿನಗಳ ಕ್ವಾರೆಂಟೇನ್ ಆಗಲು ಸಿದ್ಧರಿರುತ್ತಾರೆಯೋ ಅಂಥವರೂ ಪ್ರಯಾಣ ಬೆಳೆಸಬಹುದಾಗಿದ್ದು, ಪ್ರತಿಯೊರ್ವ ಪ್ರಯಾಣಿಕನು ಕಡ್ಡಾಯವಾಗಿ 14 ದಿನಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೀಗೆ ವೈದ್ಯಕೀಯ ಪರೀಕ್ಷೆಗಳ ವರದಿಯನ್ನು ನೀಡುವ ಮೂಲಕ ಸರಕಾರದ ನಿಯಮಗಳನ್ವಯ ವಿಮಾನ ಪ್ರಯಾಣ ಮಾಡಬಹುದಾಗಿದೆ.
ಮುಂಗಡವಾಗಿ ನಿಯಮ ಸಡಿಲಿಕೆ
ಮುಂದಿನ ಹಂತವಾಗಿ ಲಾಕ್ಡೌನ್ ಸಡಿಲಿಕೆ ಯೋಜನೆಯು ರೂಪುರೇಷೆಗೊಂಡಿದ್ದು, ಜೂನ್ ತಿಂಗಳವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊರ್ವ ಪ್ರಜೆಯೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಹಾಗೇ ದೇಶದಲ್ಲಿ ನಿಬಂಧನೆಗಳಲ್ಲಿ ವಿನಾಯಿತಿ ಘೋಷಿಸಲಾಗಿದ್ದು, ಕನಿಷ್ಠ 10 ಮಂದಿಯನ್ನು ಒಳಗೊಂಡ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ.
ಕಳೆದ ವಾರ ಘೋಷಿಸಿದ ಐದು-ಹಂತದ ಪುನರಾರಂಭದ ಯೋಜನೆಕ್ಕಿಂತ ಎರಡು ವಾರಗಳ ಮುಂಚಿತವಾಗಿ ಅಂದರೆ ಮೇ 25 ರಂದು ರೆಸ್ಟೋರೆಂಟ್ಗಳು ಮತ್ತು ಪಬ್ಗಳನ್ನು ಸಂಪೂರ್ಣವಾಗಿ ತೆರೆಯಲು ಅನುಮತಿ ನೀಡಲಾಗಿದೆ. ಲಾಕ್ಡೌನ್ ತೆರವಿಗೆ ನಿಗದಿಸಿದ ದಿನಾಂಕಕ್ಕಿಂತ ಒಂದು ತಿಂಗಳು ಮುಂಚಿತವಾಗಿ ಕೆಲವು ವ್ಯಾಪಾರ ಚಟುವಟಿಕೆಗಳನ್ನು, ಖಾಸಗಿ ವ್ಯವಹಾರ ಕೇಂದ್ರಗಳನ್ನು, ಮೃಗಾಲಯಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಭರಪೂರ ಟೀಕೆ
ಜನರ ಒತ್ತಾಯಕ್ಕೆ ಮಣಿದು ತುರ್ತು ಕ್ರಮಗಳಲ್ಲಿ ಕೆಲ ರಿಯಾಯಿತಿಗಳನ್ನು ಸರಕಾರ ಘೋಷಿಸಿದೆ. ಆದರೆ ಈ ನಿಯಮ ಸಡಿಲಿಕೆಗಳು ಗೊಂದಲ ಮೂಡಿಸುತ್ತಿದ್ದು, ಯಾವ ಸಮಯದಿಂದ ಯಾವ ವಿಧಾನದಲ್ಲಿ ವಿದೇಶಿ ಪ್ರಯಾಣಿಕರನ್ನು ದೇಶದೊಳಗೆ ಬಿಡುತ್ತಿದ್ದಾರೆ ಎಂಬ ಮಾಹಿತಿಯನ್ನು ಸರಕಾರ ನೀಡಿಲ್ಲ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಸ್ಪಷ್ಟತೆ ಎಂಬುದೇ ಈ ನಿಯಮಗಳಲ್ಲಿ ಇಲ್ಲ ಎಂದೂ ಟೀಕಿಸಲಾಗುತ್ತಿದೆ.
ಈ ಕುರಿತು ? ರಾಜಕೀಯ ವಿಶ್ಲೇಷಕರೂ “ಸರಕಾರವು ಗಡಿಗಳನ್ನು ಜೆಕ್ ನಾಗರಿಕರಿಗೆ ತೆರೆದಿದೆಯೋ ಅಥವಾ ಜೆಕ್ ಗಣರಾಜ್ಯಕ್ಕೆ ಬರಲು ಬಯಸುವ ವಿದೇಶಿಯರಿಗೆ ಮಾತ್ರ ತೆರೆದಿದೆಯೇ? ಎಂದು ಪ್ರಶ್ನಿಸುತ್ತಿದ್ದಾರೆ.
ಮಾರ್ಚ್ 16ರಂದು ತನ್ನ ಗಡಿಭಾಗವನ್ನು ಮುಚ್ಚಿದ ಯುರೋಪ್ ಖಂಡದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಈ ದೇಶ ಪಾತ್ರವಾಗಿತ್ತು.