ದೀರ್ಘಕಾಲೀನ ಅಭಿವೃದ್ಧಿಯ ಮುನ್ನೋಟ: ಬಿಎಸ್ವೈ ಶ್ಲಾಘನೆ
Team Udayavani, Feb 18, 2023, 6:30 AM IST
ಬೆಂಗಳೂರು: ಕೋವಿಡ್, ಜಾಗತಿಕ ಆರ್ಥಿಕ ಹಿಂಜರಿತದ ಮಧ್ಯೆಯೂ ಕೇಂದ್ರ ಹಾಗೂ ರಾಜ್ಯ ಸರಕಾರ ತೆಗೆದುಕೊಂಡ ಸಕಾಲಿಕ ದಿಟ್ಟ ಕ್ರಮಗಳಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿ ದೀರ್ಘಕಾಲಿನ ಅಭಿವೃದ್ಧಿಯ ಮುನ್ನೋಟದೊಂದಿಗೆ ಮುಖ್ಯಮಂತ್ರಿ ಬೊಮ್ಮಾಯಿ ಈ ಬಜೆಟ್ ಮಂಡಿಸಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಶ್ಲಾಘಿಸಿದ್ದಾರೆ.
ನಮ್ಮ ಪಕ್ಷದ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸಲು ಹಲವಾರು ಕ್ರಮಗಳನ್ನು ಈ ಬಜೆಟ್ನಲ್ಲಿ ಕೈಗೊಳ್ಳಲಾಗಿದೆ. ರಾಜ್ಯದ ಬಡವರು, ದುರ್ಬಲ ವರ್ಗ, ಮಹಿಳೆಯರು, ಶೋಷಿತರ ಹಾಗೂ ಯುವ ಜನರ ಶ್ರೇಯೋಭಿವೃದ್ಧಿಗೆ ಹಲವು ಉಪ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೂಲಸೌಕರ್ಯಗಳಿಗೆ ಒತ್ತು ನೀಡುವುದನ್ನು ಈ ಆಯವ್ಯಯದಲ್ಲಿ ಮುಂದುವರಿಸಿದ್ದು, ಇದರಿಂದ ರಾಜ್ಯವು ದೇಶದಲ್ಲಿಯೇ ಹೂಡಿಕೆದಾರರ ನೆಚ್ಚಿನ ತಾಣವಾಗಿ ಮುಂದುವರಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ನಗರದ ಅಭಿವೃದ್ಧಿ ನಮ್ಮ ಪಕ್ಷದ ಆದ್ಯತೆಯಾಗಿದ್ದು, ಅದರಂತೆ 2023-24 ನೇ ಸಾಲಿಗೆ ರೂ.9,698 ಕೋಟಿ ಅನುದಾನವನ್ನು ಒದಗಿಸಲು ಉದ್ದೇಶಿಸಿರುವುದು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ರೈತರ ಬದುಕಿಗೆ ಭದ್ರತೆ ಒದಗಿಸಲು ರೂ.180 ಕೋಟಿ ವೆಚ್ಚದಲ್ಲಿ ಜೀವನ ಜ್ಯೋತಿ ವಿಮಾ ಯೋಜನೆ ಜಾರಿಗೆ ತರಲಾಗಿದೆ. ರೈತರ ಕೃಷಿ ಉತ್ಪನ್ನಗಳನ್ನು ಪೋ›ತ್ಸಾಹಿಸಿ ಬೆಲೆ ಬರುವಂತಾಗಲು ಕೊಯ್ಲೋತ್ತರ ತಂತ್ರಜ್ಞಾನಕ್ಕೆ ರೂ.100 ಕೋಟಿ ರೂ.ಯೋಜನೆ ರೂಪಿಸಿದೆ.
ಬೆಂಬಲ ಬೆಲೆ ಯೋಜನೆ ಅಡಿ ಆವರ್ತ ನಿಧಿಯಡಿ 5,000 ಕೋ.ರೂ. ಅನುದಾನ ಹೆಚ್ಚಿಸಿರುವ ಐತಿಹಾಸಿಕ ನಿರ್ಧಾರದಿಂದ ಕೃಷಿ ಉತ್ಪನ್ನಗಳ ಬೆಲೆ ಸ್ಥಿರತೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.