Madhya Pradesh: ನಾವೂ ಸಿಲಿಂಡರ್,ವಿದ್ಯುತ್ ಕೊಡ್ತೇವೆ- ಪ್ರಣಾಳಿಕೆಯಲ್ಲಿ BJP ವಾಗ್ಧಾನ
Team Udayavani, Nov 11, 2023, 11:35 PM IST
ಭೋಪಾಲ/ಜೈಪುರ: ಪ್ರಧಾನಮಂತ್ರಿ ಉಜ್ವಲ ಮತ್ತು ಲಾಡ್ಲಿ ಬೆಹೆನ್ ಯೋಜನೆ ಫಲಾನುಭವಿಗಳಿಗೆ 450 ರೂ.ಗೆ ಅಡುಗೆ ಅನಿಲ ಸಿಲಿಂಡರ್, ಪ್ರತೀ ಕ್ವಿಂಟಾಲ್ ಗೋಧಿ ಖರೀದಿಸಲು 2,700 ರೂ., ಪ್ರತೀ ಕ್ವಿಂಟಾಲ್ ಭತ್ತ ಖರೀದಿಗೆ 3,100 ರೂ., ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರ ಪದವಿ ವರೆಗೆ ಉಚಿತ ಶಿಕ್ಷಣ…
– ಇದು ನ.17ರಂದು ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಶನಿವಾರ ಬಿಡುಗಡೆ ಮಾಡಿದ “ಸಂಕಲ್ಪ ಪತ್ರ’, ಪ್ರಣಾಳಿಕೆಯ ಪ್ರಮುಖ ಅಂಶಗಳು. ಒಟ್ಟು 96 ಪುಟಗಳಿರುವ ಸಂಕಲ್ಪ ಪತ್ರವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅನಾವರಣಗೊಳಿಸಿದರು.
ಮಧ್ಯಪ್ರದೇಶದಲ್ಲಿ ಐಐಟಿ, ಏಮ್ಸ್ಗಳಂಥ ಉನ್ನತ ಮಟ್ಟದ ತಾಂತ್ರಿಕ ಮತ್ತು ವೈದ್ಯಕೀಯ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುವ ವಾಗ್ಧಾನವನ್ನು ಮಾಡಲಾಗಿದೆ. ಬುಡಕಟ್ಟು ಸಮುದಾಯದವರ ಅಭಿವೃದ್ಧಿಗಾಗಿ 3 ಲಕ್ಷ ಕೋಟಿ ರೂ. ಮೊತ್ತವನ್ನು ಮೀಸಲಾಗಿ ಇರಿಸಲಾಗುತ್ತದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ಮುಖ್ಯಮಂತ್ರಿ ಕಿಸಾನ್ ಕಲ್ಯಾಣ್ ಯೋಜನೆ ಮುಂದುವರಿಯಲಿದೆ. ಅದರಂತೆ ರೈತರಿಗೆ ಪ್ರತೀ ವರ್ಷ 12 ಸಾವಿರ ರೂ. ನೀಡ ಲಾಗುತ್ತದೆ ಎಂದು ಬಿಜೆಪಿ ವಾಗ್ಧಾನ ಮಾಡಿದೆ. 12ನೇ ತರಗತಿವರೆಗೆ ಉಚಿತ ಶಿಕ್ಷಣ, ಪ್ರತೀ ವಿದ್ಯಾರ್ಥಿಗೆ 1,200 ರೂ. ಮೊತ್ತವನ್ನು ಸಮವಸ್ತ್ರಕ್ಕಾಗಿ ನೀಡಲಿದೆ. ಕಾಂಗ್ರೆಸ್ನಂತೆ ಬಿಜೆಪಿಯು ಅಟಲ್ ಗೃಹ ಯೋಜನೆಯಡಿ 100 ರೂ.ಗೆ 100 ಯುನಿಟ್ ವಿದ್ಯುತ್ ನೀಡಲಿದೆ.
ಬಿಜೆಪಿ ಮಾತ್ರ: ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಜೆ.ಪಿ.ನಡ್ಡಾ “ಚುನಾವಣೆ ಅವಧಿಯಲ್ಲಿ ಬಿಡುಗಡೆ ಮಾಡಿದ ಪ್ರಣಾಳಿಕೆಯ ಪ್ರತಿಯೊಂದು ಅಂಶವನ್ನು ಚಾಚೂ ತಪ್ಪದೆ ಈಡೇರಿಸುವ ಒಂದೇ ಒಂದು ಪಕ್ಷವೆಂದರೆ ಬಿಜೆಪಿ. ಸರಕಾರದ ಮೂಲಕ ಅವುಗಳ ಅನುಷ್ಠಾನಕ್ಕೆ ಸೂಕ್ತ ಮೇಲುಸ್ತುವಾರಿ ವಹಿಸಿ ಲೋಪ ಆಗದಂತೆ ನೋಡಿಕೊಳ್ಳಲಾಗುತ್ತದೆ’ ಎಂದರು.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, “ನರಕ ಚತುರ್ದಶಿಯಂದೇ ಪ್ರಣಾಳಿಕೆಯ ನ್ನೇಕೆ ಬಿಡುಗಡೆ ಮಾಡುತ್ತೇವೆ ಎಂಬುದು ಕಾಂಗ್ರೆಸ್ಗೆ ಅರ್ಥವಾಗಿಲ್ಲ. ನರಕಾಸುರನ ವಶದಲ್ಲಿದ್ದ 16 ಸಾವಿರ ಸ್ತ್ರೀಯರನ್ನು ಕೃಷ್ಣ ಬಿಡುಗಡೆ ಮಾಡಿದ ದಿನ. ಇದು ಕಾಂಗ್ರೆಸ್ಗೆ ಅರ್ಥವಾಗದು’ ಎಂದು ಟೀಕಿಸಿದರು.
ನಾನು ಕ್ಷಮೆ ಕೋರಲು ಬಂದಿರುವೆ
“ತೆಲಂಗಾಣದಲ್ಲಿ ಎಸ್ಸಿ ಸಮುದಾಯಕ್ಕೆ ಸೇರಿರುವ ಮಾದಿಗರಿಗೆ ಎಲ್ಲ ರಾಜಕೀಯ ಪಕ್ಷಗಳು ಅವಮಾನ ಮಾಡಿವೆ. ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಿಕಂದರಾಬಾದ್ನಲ್ಲಿ ಶನಿವಾರ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಅವರು “ನಾನು ಇಲ್ಲಿ ಏನನ್ನೂ ಕೇಳಲು ಬಂದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನದಿಂದ ನಿಮಗೆ ಮೋಸ ಮಾಡಿವೆ. ಹೀಗಾಗಿ ನಿಮ್ಮಲ್ಲಿ ಕೈಮುಗಿದು ಕ್ಷಮೆ ಕೋರುತ್ತಿದ್ದೇನೆ” ಎಂದರು. ಇದೇ ವೇಳೆ ಎಸ್ಸಿ ಸಮುದಾಯಕ್ಕೆ ಮೀಸಲು ನೀಡುವ ನಿಟ್ಟಿನಲ್ಲಿ ಮತ್ತು ಅವರ ಅಭಿವೃದ್ಧಿಗೆ ವಿಶೇಷ ಸಮಿತಿ ರಚಿಸುವುದಾಗಿ ಭರವಸೆ ನೀಡಿದ್ದಾರೆ.
ತೆಲಂಗಾಣದಲ್ಲಿರುವ ಸರಕಾರ ಹತ್ತು ವರ್ಷಗಳಿಂದ ಮಾದಿಗ ಸಮುದಾಯದ ಮತ್ತು ರಾಜ್ಯದ ಜನರ ಕನಸು ಈಡೇರಿಸು ವಲ್ಲಿ ವಿಫಲವಾಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು. ತೆಲಂಗಾಣ ರಾಜ್ಯ ಕ್ಕಾಗಿ ಹೋರಾಟ ನಡೆಸಿದ ಮಾದಿಗ ಸಮು ದಾಯಕ್ಕೆ ಕಾಂಗ್ರೆಸ್ ಯಾವ ರೀತಿ ತಡೆಯೊಡ್ಡಿದೆ ಎನ್ನುವುದನ್ನು ಮರೆಯುಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ಗೆ ಅವಮಾನ: ಹೊಸ ಸಂವಿಧಾನ ರಚನೆಯಾಗಬೇಕು ಎಂದು ತೆಲಂ ಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಆಗ್ರಹಿಸಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇ ಡ್ಕರ್ ಅವರಿಗೆ ಅವಮಾನ ಮಾಡಿ ದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಸಿಕಂದರಾಬಾದ್ನಲ್ಲಿ ಮಾತನಾಡಿದ ಅವರು ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್)ನಷ್ಟೇ ಕಾಂಗ್ರೆಸ್ ಕೂಡ ತೆಲಂಗಾಣದಲ್ಲಿ ದಲಿತ ವಿರೋಧಿಯಾಗಿದೆ ಎಂದು ಮೋದಿ ಆರೋಪಿಸಿದ್ದಾರೆ.
ಪ್ರಧಾನಿ ಸಮಾಧಾನ ಹೇಳಿದ ಫೋಟೋ ವೈರಲ್
ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆಯೇ ಅಲ್ಲಿ ಇದ್ದ ಮಾದಿಗ ಮೀಸಲು ಹೋರಾಟ ಸಮಿತಿ (ಎಂಆರ್ಪಿಎಸ್) ಸಮಿತಿಯ ನಾಯಕ ಮಂದಕೃಷ್ಣ ಮಾದಿಗ ಗದ್ಗದಿತರಾದರು. ಕೂಡಲೇ ಪ್ರಧಾನಿಯವರು ಅವರನ್ನು ಸಮಾಧಾನಪಡಿಸಿದರು. ಧೈರ್ಯ ತಂದುಕೊಳ್ಳಿ. ನಿಮ್ಮ ಜತೆಗೆ ನಾವಿದ್ದೇವೆ ಎಂದು ಅವರಿಗೆ ಧೈರ್ಯ ತುಂಬಿದರು. ಈ ಕ್ಷಣದ ಫೋಟೋ ಮತ್ತು ವೀಡಿಯೋ ವೈರಲ್ ಆಗಿದೆ.
ರಾಜಸ್ಥಾನದ ಶೇರ್ಗಾಂವ್ ಗ್ರಾಮದಲ್ಲಿ ದೂರನಿಯಂತ್ರಿತ ಮತದಾನ
ರಾಜಸ್ಥಾನದ ಅಭು- ಪಿಂದ್ವಾರಾ ವಿಧಾನಸಭಾ ಕ್ಷೇತ್ರದ ಶೇರ್ಗಾಂವ್ ಗ್ರಾಮದ ಜನರು ನ.25ರಂದು ಮತಗಟ್ಟೆಗೆ ತೆರಳದೆಯೇ ಮತದಾನ ಮಾಡಲಿದ್ದಾರೆ. ಮೊದಲ ಬಾರಿಗೆ ಇಂಥ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ ಎಂದು ರಾಜಸ್ಥಾನದ ಮುಖ್ಯ ಚುನಾವಣಾಧಿಕಾರಿ ಪ್ರವೀಣ್ ಗುಪ್ತಾ ಹೇಳಿದ್ದಾರೆ. ಸಿರೋಹಿ ಜಿಲ್ಲೆಯಲ್ಲಿರುವ ಈ ಗ್ರಾಮ 4,921 ಅಡಿ ಎತ್ತರದಲ್ಲಿ ಇದೆ. ಅಲ್ಲಿ ಒಟ್ಟು 117 ಮತದಾರರು ವಾಸಿಸುತ್ತಿದ್ದಾರೆ. ಹಿಂದಿನ ವಿಧಾನಸಭೆ ಚುನಾವಣೆ ವೇಳೆ ಉತ್ರಾಜ್ ಎಂಬ ಗ್ರಾಮಕ್ಕೆ ಹೋಗಿ ಮತ ಚಲಾಯಿಸಬೇಕಾಗಿತ್ತು. ಪಾಕಿಸ್ಥಾನಕ್ಕೆ ಹೊಂದಿಕೊಂಡಿರುವ ಭಾರತ ಮತ್ತು ಪಾಕಿಸ್ಥಾನ ಅಂತಾರಾಷ್ಟ್ರೀಯ ಗಡಿ ಇರುವ ಬಾರ್ಮರ್ನ ಗ್ರಾಮವೊಂದರಲ್ಲಿ 35 ಮತದಾರರು ಇದ್ದಾರೆ. ಅವರಿಗಾಗಿ ಮತಗಟ್ಟೆ ನಿರ್ಮಿಸಲಾಗಿದೆ ಎಂದರು. ಇದಲ್ಲದೆ 50 ಮಂದಿ ಮೀರದ ಗ್ರಾಮಗಳು ಇರುವಲ್ಲಿ ಕೂಡ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.