ಉಗ್ರರು ಸ್ವಾತಂತ್ರ್ಯ ಕಲಿಗಳು- ಪ್ಯಾಲೇಸ್ಥಿನ್ ಸ್ಥಿತಿಯನ್ನು ಕಾಶ್ಮೀರಕ್ಕೆ ಹೋಲಿಸಿದ ಪಾಕ್
Team Udayavani, Oct 25, 2023, 11:25 PM IST
ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸದಾ ಒಂದಲ್ಲ ಒಂದು ತಕರಾರು ತೆಗೆಯುವ ಪಾಕಿಸ್ಥಾನ, ಇದೀಗ ಪ್ಯಾಲೇಸ್ಥಿನ್ ಪರಿಸ್ಥಿತಿಯನ್ನು ಕಾಶ್ಮೀರದೊಂದಿಗೆ ಹೋಲಿಸಿದೆ. ಇದೇ ವೇಳೆ ಉಗ್ರರನ್ನು “ಸ್ವಾತಂತ್ರ್ಯ ಹೋರಾಟಗಾರರು’ ಎಂದು ಅದು ವ್ಯಾಖ್ಯಾನಿಸಿದೆ. ಈ ಮೂಲಕ ನೇರವಾಗಿ ಭಯೋತ್ಪಾದನೆಯನ್ನು ಪಾಕ್ ಬೆಂಬಲಿಸಿದೆ.
ವಿಶ್ವಸಂಸ್ಥೆಗೆ ಪಾಕಿಸ್ಥಾನದ ಕಾಯಂ ಪ್ರತಿನಿಧಿ ಮುನೀರ್ ಅಕ್ರಮ್ ಮಾತನಾಡಿ, “ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ, ಸ್ವಯಂ ನಿರ್ಣಯ ಮತ್ತು ರಾಷ್ಟ್ರ ವಿಮೋಚನೆಗಾಗಿ ವಿದೇಶಿ ಆಕ್ರಮಣದಲ್ಲಿ ವಾಸಿಸುವ ಜನರ ಹೋರಾಟವು ನ್ಯಾಯಸಮ್ಮತವಾಗಿದೆ. ಇದನ್ನು ಭಯೋತ್ಪಾದನೆಯೊಂದಿಗೆ ಸಮೀಕರಿಸಲು ಆಗುವುದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ. ಇದೇ ವೇಳೆ ಪ್ಯಾಲೇಸ್ಥಿನ್ ಪರಿಸ್ಥಿತಿಯನ್ನು ಕಾಶ್ಮೀರದೊಂದಿಗೆ ಅವರು ಹೋಲಿಸಿದ್ದಾರೆ. ಅಕ್ರಮ್ ಅವರ ಹೇಳಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. “ಇಸ್ರೇಲ್-ಗಾಜಾ ಪರಿಸ್ಥಿತಿ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ವೇಳೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನದ ಈ ಹೇಳಿಕೆಯನ್ನು ಪ್ರಸ್ತಾವಿಸಲಾಗುವುದು. ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದ ಕುರಿತು ಅಸಂಬದ್ಧ ಹೇಳಿಕೆಗಳನ್ನು ಕೊಡುವುದು ಪಾಕಿಸ್ಥಾನಕ್ಕೆ ಚಾಳಿಯಾಗಿದೆ’ ಎಂದು ವಿಶ್ವಸಂಸ್ಥೆಗೆ ಭಾರತದ ಕಾಯಂ ಉಪ ಪ್ರತಿನಿಧಿ ಆರ್.ರವೀಂದ್ರನ್ ಕಿಡಿಕಾರಿದ್ದಾರೆ.
ಇದಕ್ಕೂ ಮುನ್ನ 26/11 ಮುಂಬಯಿ ಮೇಲಿನ ಉಗ್ರ ದಾಳಿಯನ್ನು ಪ್ರಸ್ತಾವಿಸಿದ ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ “ಪಾಕಿಸ್ಥಾನ ಮೂಲದ ಉಗ್ರ ಸಂಘಟನೆ ಲಷ್ಕರೆ ತಯ್ಯಬಾ, ಹಮಾಸ್ ಸೇರಿದಂತೆ ಉಗ್ರ ಸಂಘಟನೆಗಳ ಎಲ್ಲ ರೀತಿಯ ಉಗ್ರ ಕೃತ್ಯಗಳು ಕಾನೂನು ಬಾಹಿರ ಮತ್ತು ಸಮರ್ಥನೀಯವಲ್ಲ’ ಎಂದು ಪ್ರತಿಪಾದಿಸಿದ್ದಾರೆ.