ಸಂಸದ ತೇಜಸ್ವಿ ಸೂರ್ಯ ನೆರೆ ಸಂತ್ರಸ್ತರ ಕ್ಷಮೆ ಕೇಳಬೇಕು – ಹೆಚ್ ಕೆ ಪಾಟೀಲ್
Team Udayavani, Sep 23, 2019, 6:05 PM IST
ವಿಜಯಪುರ : ರಾಜ್ಯದ ನೆರೆ ಸಂತ್ರಸ್ತರ ಪರಿಹಾರ ವಿಷಯದಲ್ಲಿ ಹಗುರವಾಗಿ ಮಾತನಾಡಿರುವ ಬಿಜೆಪಿ ಯುವ ಸಂಸದ ತೇಜಸ್ವಿ ಸೂರ್ಯ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಅನುದಾನ ಬೇಕಿಲ್ಲ ಎಂದು ರಾಜ್ಯದ ಬಿಜೆಪಿ ಯುವ ಸಂಸದ ನೆರೆ ಸಂತ್ರಸ್ತರ ಕುರಿತು ಹಗುರವಾಗಿ ಮಾತನಾಡಿದ್ದಾರೆ. ತಕ್ಷಣವೇ ಸಂಸದ ತೇಜಸ್ವಿ ಸೂರ್ಯ ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು.
ಕ್ಷಮೇ ಕೇಳದಿದ್ದರೇ ಸಂತ್ರಸ್ತರ ಆಕ್ರೋಶ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದರು.
ಸಂತ್ರಸ್ತರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿರುವ ತೇಜಸ್ವಿ ಸೂರ್ಯ ಕನ್ನಡಿಗರಿಗೆ ಅಗೌರವ ಮಾಡಿದ್ದಾರೆ. ಕರ್ನಾಟಕದ ಬಗ್ಗೆ ಸಂಸದ ತೇಜಸ್ವಿ ಸೂರ್ಯಗೆ ಎಷ್ಟು ಕಾಳಜಿ ಇದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹರಿಹಾಯ್ದರು.
ಬೆಳಗಾವಿಯಲ್ಲಿ ಕುಳಿತು ಹೀಗೆ ಹೇಳ್ತಾರೆ, ದಿಲ್ಲಿಯಲ್ಲಿ ಹೇಗೆ ಹೇಳಿರಬೇಡ. ಇನ್ನು ಪ್ರಧಾನಿ ಮೋದಿ ಎದುರು ಏನು ಹೇಳಿರಬೇಕು ಎಂದು ಕುಟುಕಿದರು.
ಕರ್ನಾಟಕ ರಾಜ್ಯ ನೆರೆ ಹಾವಳಿಗೆ ತತ್ತರಿದರೂ ಸಂತ್ರಸ್ತರ ಸಂಕಷ್ಟ ಕೇಳಲು ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡದಿರುವುಕ್ಕೆ ಸಂಸದ ತೇಜಸ್ವಿ ಸೂರ್ಯ ಕಾರಣ.
ರಾಜ್ಯದ ಸ್ವಪಕ್ಷೀಯ ಸಂಸದ ನೆರೆ ಸಂತ್ರಸ್ತರ ಕುರಿತು ಪ್ರಧಾನಿ ಮೋದಿ ಅವರಿಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಿದ್ದಾರೆ. ಇದರಿಂದಾಗಿ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಟೀಕಾ ಪ್ರಹಾರ ನಾಡಿದರು.