ಎಂಆರ್ಪಿಎಲ್ ವ್ಯಾಪ್ತಿಯಲ್ಲಿ ಹಸುರು ವಲಯ; 15 ದಿನದೊಳಗೆ ಸರ್ವೇ
Team Udayavani, Jun 9, 2020, 8:00 AM IST
ಮಂಗಳೂರು: ಎಂಆರ್ಪಿಎಲ್ನ ಕೋಕ್ ಸಲ್ಫರ್ ಯುನಿಟ್ನ ಮೂರನೇ ಹಂತದ ಯೋಜನೆ ಜಾರಿಯಲ್ಲಿರುವ ಜೋಕಟ್ಟೆ ವ್ಯಾಪ್ತಿಯಲ್ಲಿ ಹಸಿರು ವಲಯ ನಿರ್ಮಾಣಕ್ಕೆ 27 ಎಕರೆ ಜಮೀನು ಪರಿಷ್ಕೃತ ಭೂಸ್ವಾಧೀನಕ್ಕಾಗಿ ಮುಂದಿನ 15 ದಿನದೊಳಗೆ ಸಮಗ್ರ ಸರ್ವೆ ನಡೆಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಿದ ಅವರು, ಪರಿಸರಕ್ಕೆ ಹೆಚ್ಚು ಬಾಧಿತವಾಗಿರುವ ಪ್ರದೇಶಗಳು ಯಾವುದು ಎಂಬ ಬಗ್ಗೆ ಪರಿಸರ ಇಲಾಖೆ ಹಾಗೂ ಭೂಸ್ವಾಧೀನದ ಬಗ್ಗೆ ಕೆಐಎಡಿಬಿ ಅಧಿಕಾರಿಗಳು ಮುಂದಿನ 15 ದಿನದೊಳಗೆ ಸರ್ವೆ ನಡೆಸಿ ವರದಿ ನೀಡುವಂತೆ ಅವರು ಸೂಚಿಸಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಸರಕಾರದ ಆದೇಶ ಆಗಿ ನಾಲ್ಕು ವರ್ಷ ಸಂದರೂ ಹಸಿರು ವಲಯಕ್ಕೆ ಬಾಧಿತ ಪ್ರದೇಶದ ಭೂಮಿ ಗುರುತಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಯಾವುದೇ ತಾರತಮ್ಯವಿಲ್ಲದೆ ಹೆಚ್ಚು ಬಾಧಿತ ಪ್ರದೇಶದ ಭೂಮಿ ಗುರುತು ಮಾಡಿ, ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದರು.
ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಮುಖಂಡ ಮುನೀರ್ ಕಾಟಿಪಳ್ಳ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಸಹಾಯಕ ಆಯುಕ್ತ ಮದನ್, ಸಣ್ಣ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು, ಎಂಆರ್ ಪಿಎಲ್ನ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾದ ವೆಂಕಟೇಶ್, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು.