Mangaluru ಶಾರಿಕ್ ಉಗ್ರ ಜಾಲದಲ್ಲಿರುವ ಇನ್ನಷ್ಟು ಮಂದಿಗೆ ಎನ್ಐಎ ಶೋಧ
ಕುಕ್ಕರ್ ಬಾಂಬ್ ಸ್ಫೋಟಕ್ಕೆ ಒಂದು ವರ್ಷ ಪೂರ್ಣ
Team Udayavani, Nov 21, 2023, 6:50 AM IST
ಮಂಗಳೂರು: ನಗರದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆದು ಒಂದು ವರ್ಷ ಪೂರ್ಣಗೊಂಡಿದೆ. ಇದರೊಂದಿಗೆ ತನಿಖೆ ಕೂಡ ಭಟ್ಕಳ, ಮಂಗಳೂರು, ಉಡುಪಿ ಕೇಂದ್ರಿತವಾಗಿ ಚುರುಕಿನಿಂದ ನಡೆಯುತ್ತಿದೆ.
ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ವೇಳೆಯೇ ಅದನ್ನು ಸಾಗಿಸುತ್ತಿದ್ದ ಶಂಕಿತ ಉಗ್ರ ಶಾರಿಕ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಜನನಿಬಿಡ ಪ್ರದೇಶದಲ್ಲಿ ಬಾಂಬ್ ಅನ್ನು 3 ನಿಮಿಷಗಳ ಟೈಮರ್ನೊಂದಿಗೆ ಸ್ಫೋಟಿಸುವುದು ಆತನಿಗೆ ಒಪ್ಪಿಸಲಾದ ಜವಾಬ್ದಾರಿಯಾಗಿತ್ತು. ಇದರಲ್ಲಿ ಆಗಿರುವ ಸಣ್ಣ ಎಡವಟ್ಟಿನಿಂದಾಗಿ ಬಾಂಬ್ ಸಾಗಾಟದ ವೇಳೆಯೇ ಸ್ಫೋಟಗೊಂಡಿತ್ತು.
ಈತನಿಗೆ ಶಿವಮೊಗ್ಗ ಮೂಲದ ಕೆಲವು ಹ್ಯಾಂಡ್ಲರ್ಗಳಿಂದ ನೇರ ನಿರ್ದೇಶನ ಬರುತ್ತಿತ್ತು ಎನ್ನುವುದನ್ನು ಆ ಬಳಿಕ ಆತನನ್ನು ವಶಕ್ಕೆ ಪಡೆದುಕೊಂಡಿದ್ದ ಎನ್ಐಎ ತನಿಖಾಧಿಕಾರಿಗಳು ಕಂಡುಕೊಂಡಿದ್ದರು. ತಿಂಗಳ ಹಿಂದೆಯಷ್ಟೇ ಅವರಲ್ಲೊಬ್ಬನಾದ ಶಿವಮೊಗ್ಗ ಮೂಲದ ಅರಾಫತ್ ನನ್ನೂ ಎನ್ಐಎ ದಿಲ್ಲಿ ವಿಮಾನನಿಲ್ದಾಣದಲ್ಲಿ ಬಂಧಿಸಿದ್ದು ತನಿಖೆಯಲ್ಲಿ ಮಹತ್ವದ ಪ್ರಗತಿಗೆ ಕಾರಣವಾಗಿದೆ ಎಂಬ ಅಂಶಗಳು ತಿಳಿದುಬಂದಿವೆ.
“ಆಕಾ’ನ ಸೂಚನೆ!
ಮಂಗಳೂರಿನಲ್ಲಿ ಕುಕ್ಕರ್ ಹಿಡಿದುಕೊಂಡಿದ್ದ ವೇಳೆಯೇ ಅದು ಸ್ಫೋಟಗೊಂಡು ತೀವ್ರ ಗಾಯಗೊಂಡಿದ್ದ ಶಾರಿಕ್ ಹಲವು ದಿನ ಮಂಗಳೂರಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದು, ಬಳಿಕ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಸ್ತುತ ಆತ ಚೇತರಿಸಿಕೊಂಡಿದ್ದು ಎನ್ಐಎ ಕಸ್ಟಡಿಯಲ್ಲಿದ್ದಾನೆ.
ಆತನನ್ನು ವಿಚಾರಣೆ ಗೊಳಪಡಿಸಿದಾಗ ಹಲವು ವಿಚಾರಗಳು ಹೊರಬಂದಿವೆ. ಆತ ಮೈಸೂರಿನಲ್ಲಿದ್ದಾಗಲೇ ದೀಪಾವಳಿ ಸಮಯ ನೋಡಿಕೊಂಡು ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಿಸಿದ್ದ. ಅದರ ವೀಡಿಯೋ ಮಾಡಿದ್ದ. ಪಟಾಕಿ ಹಚ್ಚುವ ವೇಳೆಯಲ್ಲೇ ಅದನ್ನು ಮಾಡಿದ್ದರಿಂದ ಯಾರಿಗೂ ಸಂಶಯ ಬಂದಿರಲಿಲ್ಲ.
ಹೆಚ್ಚೇನೂ ವಿದ್ಯಾಭ್ಯಾಸ ವಿಲ್ಲದಿದ್ದರೂ ಡಾರ್ಕ್ ವೆಬ್ ಮೂಲಕ ಹೊರಗೆ ಸುಳಿವು ಸಿಗದಂತೆ ವ್ಯವಹರಿಸುತ್ತಿದ್ದ. ಜನನಿಬಿಡ ಪ್ರದೇಶ, ದೇವಾಲಯಗಳಲ್ಲಿ ಬಾಂಬ್ ಇರಿಸುವಂತೆ “ಆಕಾ'(ಒಡೆಯ)ನಿಂದ ಸೂಚನೆ ಬಂದಿತ್ತು, ಮೊಬೈಲ್ ಬಳಕೆ, ಯಾವ ರೀತಿ ಸಿಕ್ಕಿ ಬೀಳದಂತೆ ವ್ಯವಹರಿಸಬೇಕು ಇತ್ಯಾದಿಗಳನ್ನು ಇದೇ “ಆಕಾ’ ತನಗೆ ತರಬೇತಿ ವೇಳೆ ತಿಳಿಸಿದ್ದುದಾಗಿ ಶಾರಿಕ್ ಒಪ್ಪಿಕೊಂಡಿದ್ದಾನೆ.
ಸಿರಿಯಾದತ್ತ ಲಕ್ಷ್ಯ?
ಬಾಂಬ್ ಸ್ಫೋಟದ ಬಳಿಕ ಐಸಿಸ್ ಸೇರುವುದಕ್ಕಾಗಿ ಸಿರಿಯಾದತ್ತ ಪಯಣ ಬೆಳೆಸುವುದು ಶಾರಿಕ್ನ ಗುರಿಯಾಗಿತ್ತು. ಅದಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲು ಈ ಬಾಂಬ್ ಸಿದ್ಧಪಡಿಸಿದ್ದ. ಆರಂಭದಲ್ಲಿ 2020ರಲ್ಲಿ ಗೋಡೆಗಳಲ್ಲಿ ಉಗ್ರ ಸಂಘಟನೆ ಲಷ್ಕರ್ ಪರ ಬರಹ ಬರೆದು ಸಿಕ್ಕಿಬಿದ್ದಿದ್ದ ಶಾರಿಕ್ ಬಳಿಕ ತಾಂತ್ರಿಕ ಕಾರಣಗಳೊಂದಿಗೆ ಬಿಡುಗಡೆಗೊಂಡಿದ್ದ. ಅಲ್ಲಿಂದ ಬಳಿಕ ತನ್ನ ಉಗ್ರ ಜಾಲವನ್ನು ಬಲಪಡಿಸುತ್ತ ಹೋಗಿದ್ದ. ಈತನ ಬ್ರೇನ್ವಾಷ್ ಮಾಡಿದವರು ಅರಾಫತ್ ಹಾಗೂ ಅಬ್ದುಲ್ ಮತಿನ್. ಇವರಲ್ಲಿ ಅರಾಫತ್ ಈಗಾಗಲೇ ಎನ್ಐಎ ಬಲೆಯಲ್ಲಿ ಬಿದ್ದಿದ್ದರೆ ಮತಿನ್ ಬಾಂಗ್ಲಾದೇಶದಲ್ಲಿ ತಲೆಮರೆಸಿಕೊಂಡಿರುವುದಾಗಿ ಹೇಳಲಾಗುತ್ತಿದೆ.