ಕೊರೊನಾ ಶಂಕಿತರಿಗೆ ಆಸ್ಪತ್ರೆಯಲ್ಲಿಲ್ಲ ಸೌಲಭ್ಯ; ಆರೋಪ
Team Udayavani, Jan 29, 2020, 9:53 PM IST
ಬೆಂಗಳೂರು: ಕೊರೊನಾ ವೈರಸ್ ಸೋಂಕು ಶಂಕೆ ಹಿನ್ನೆಲೆ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿಗೆ ದಾಖಲಾಗಿರುವ ಶಂಕಿತ ರೋಗಿಗಳಿಗೆ ಸೂಕ್ತರೀತಿಯಲ್ಲಿ ಸೌಕರ್ಯ ನೀಡಲಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಚೀನಾ ಪ್ರವಾಸ ಹೋಗಿ ಬಂದು ಅನಾರೋಗ್ಯ ಕಾಣಿಸಿಕೊಂಡ ಎಲ್ಲರನ್ನು ಕೊರೊನಾ ವೈರಸ್ ಶಂಕಿತರು ಎಂದು ಹೇಳಿ ಜಯನಗರದ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ರಕ್ತ ಮಾದರಿ ಪರೀಕ್ಷೆ ಹಾಗೂ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಒಂಭತ್ತು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಶಂಕಿತರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಸ್ನಾನಕ್ಕೆ ಬಕೆಟ್, ಸೋಪು ಇತ್ಯಾದಿ ಪ್ರತ್ಯೇಕ ಸಾಮಗ್ರಿಗಳನ್ನು ನೀಡದೆ ಇಬ್ಬರು ಅಥವಾ ಮೂರು ಮಂದಿಗೆ ಸೇರಿ ಬಳಸುವಂತೆ ಹೇಳಲಾಗುತ್ತಿದೆ ಎಂದು ರೋಗಿ ಸಂಬಂಧಿಗಳು ಆರೋಪಿಸಿದ್ದಾರೆ.
ಈ ಕುರಿತು ರೋಗಿಗಳು ಪ್ರಶ್ನಿಸಿ, ಗಲಾಟೆ ಮಾಡಿದಾಗ ಪ್ರತ್ಯೇಕ ಸಾಮಗ್ರಿಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಈ ಶಂಕಿತ ರೋಗಿಗಳಿಗೆ ಪ್ರತ್ಯೇಕ ವ್ಯವಸ್ಥೆ ಅತ್ಯಗತ್ಯ. ಒಂದು ವೇಳೆ ಶೌಚಾಲಯ ಬಳಕೆ, ಸಾಮಗ್ರಿಗಳ ವಿನಿಮಯದಿಂದ ಸೋಂಕು ಹರಡುವ ಸಾಧ್ಯತೆಯಿದೆ ಎನ್ನಲಾಗಿದೆ.