ದಾದಿಯರೆಂಬ ಕರುಣಾಮಯಿ ದೀದಿಯರು…


Team Udayavani, May 12, 2021, 6:40 AM IST

ದಾದಿಯರೆಂಬ ಕರುಣಾಮಯಿ ದೀದಿಯರು…

ಶ್ವೇತ ವಸ್ತ್ರ, ಮುಖದಲ್ಲೊಂದು ಮುಗುಳ್ನಗೆ, ದಣಿವರಿ ಯದ ಮುಖಭಾವ, ಮನೆ ಮಕ್ಕಳನ್ನು ಬದಿಗೊತ್ತಿ ಹಗಲಿರುಳೆನ್ನದ ದುಡಿಮೆ. ಕೋವಿಡ್‌ ಎಂಬ ಈ ದುರಿತ ಕಾಲದಲ್ಲಂತೂ ಜೀವದ ಹಂಗು ತೊರೆದು ಸೇವೆ ಮಾಡುತ್ತಿರುವ, ದಾದಿಯರೆಂಬ ಕರುಣಾ ಮಯಿ ದೀದಿಯರ ಸೇವೆಯನ್ನು ಇಡೀ ಮನುಕುಲ ಸ್ಮರಿಸಲೇಬೇಕು. ಅವರಿಲ್ಲದ ವೈದ್ಯಕೀಯ ಸೇವೆಗಳನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ. ಪ್ರತೀ ವರ್ಷ ಮೇ 12ಅನ್ನು ವಿಶ್ವ ಶುಶ್ರೂಷಕ‌ರ ದಿನವಾಗಿ ಆಚರಿಸಲಾಗುತ್ತದೆ.

ಅದು 1854 ನೇ ಇಸವಿ, ಅಕ್ಟೋಬರ್‌ ತಿಂಗಳ 21ನೇ ದಿನ. ತನ್ನೊಂದಿಗೆ ತನ್ನಂತಹ ತ್ಯಾಗ ಮನೋ ಭಾವದ 38 ಜನ ಯುವತಿಯರೊಂದಿಗೆ ಇಟಲಿಯ ಕುಲೀನ, ಶ್ರೀಮಂತ ಮನೆತನದ ಯುವತಿಯೊಬ್ಬಳು ಯುದ್ಧಭೂಮಿಯೆಡೆಗೆ ಹೊರಟು ನಿಂತಿದ್ದಳು. ಮನೆಯ ವರ ಪ್ರತೀರೋಧದ ನಡುವೆಯೂ ಸುಖ, ಸಂತೋಷ, ಸೌಲಭ್ಯ, ಮದುವೆ, ವೈಯಕ್ತಿಕ ಬದುಕು ಎಲ್ಲವನ್ನೂ ತ್ಯಾಗ ಮಾಡಿ, ಶುಶ್ರೂಷಕಿಯಾಗಬೇಕೆಂದು ಆಕೆ ನಿರ್ಧರಿಸಿದ್ದಳು. ಆಕೆಯೇ ವೈದ್ಯಕೀಯ ಇತಿಹಾಸ ದಲ್ಲಿ ತನ್ನದೇ ಆದ ಶುಶ್ರೂಷಾ ಪದ್ಧತಿಗಳಿಂದ ಹೊಸ ಮಾರ್ಗೋಪಾಯಗಳನ್ನು ರೂಪಿಸಿದ ಮಹಾನ್‌ ಚೇತನ, “ದೀಪದ ಮಹಿಳೆ’ ಎಂದೇ ಪ್ರಸಿದ್ಧಿ ಪಡೆದು “ಫ್ಲೋರೆ®Õ… ನೈಟಿಂಗೇಲ್‌’. ಆಕೆಯೇ ವೈದ್ಯಕೀಯ ಕ್ಷೇತ್ರದ ಮೊದಲ ಶುಶ್ರೂಷಕಿ.

“ಕ್ರಿಮಿಯನ್‌ ಯುದ್ಧ’ ಎಂದು ಇತಿಹಾಸದಲ್ಲಿ ಪ್ರಸಿದ್ಧವಾದ ಕಾಳಗ ಪ್ರಾರಂಭವಾಗಿ ಅದಾಗಲೇ ಒಂದು ವರ್ಷ‌ವಾಗಿತ್ತು. ಪ್ರಬಲವಾದ ರಷ್ಯಾ ಒಂದು ಕಡೆಗೆ, ಒಟ್ಟೊಮನ್‌ ಸಾಮ್ರಾಜ್ಯ, ಫ್ರಾನ್ಸ್, ಬ್ರಿಟನ್‌ ಹಾಗೂ ಸಾರ್ದಿನಿಯಾ ಇನ್ನೊಂದು ಕಡೆಗೆ. ಯುದ್ಧ ನಡೆದದ್ದು ಕ್ರಿಶ್ಚಿಯನ್‌ ಅಲ್ಪಸಂಖ್ಯಾಕರ ಹಕ್ಕಿಗಾಗಿ. ಧಾರ್ಮಿಕ ನೆಪಕ್ಕಾಗಿ ನಡೆದ ಈ ಸೆಣಸಾಟದಲ್ಲಿ ಸತ್ತವರು ಸುಮಾರು ಏಳೂವರೆ ಲಕ್ಷ ಜನ. ಗಾಯ ಗೊಂಡವರು ಅಸಂಖ್ಯಾಕರು. ಆದರೆ ಆಳುವವರಿಗೆ ತಮ್ಮ ಜಯ, ಪ್ರತಿಷ್ಠೆ ಹಾಗೂ ಯುದ್ಧ ಮುಂದು ವರಿಸುವ ಚಿಂತೆ ಮಾತ್ರ ಇರುತ್ತದೆಯೇ ಹೊರತು ಗಾಯಗೊಂಡು ನರಳುವವರ ಬಗೆಗಿನ ಕಾಳಜಿ ಇರುವುದಿಲ್ಲ.

ಗಾಯಗೊಂಡವರು ಅವರಿಗೆ ಅನಗತ್ಯ ಭಾರವಾಗಿ ಬಿಡುತ್ತಿದ್ದರು. ಹೀಗಾಗಿ ಮರಣಾಂತಿಕ ಗಾಯಗಳಾಗಿದ್ದವರನ್ನು ಸಮುದ್ರಕ್ಕೆ ಎಸೆದು, ಕಡಿಮೆ ಗಾಯಗೊಂಡವರನ್ನು ಹಡಗುಗಳಲ್ಲಿ ದೂರಕ್ಕೆ ಸಾಗಿಸುವ ಸುಲಭದ ಮಾರ್ಗ ಅನುಸರಿಸಿಬಿಡು ತ್ತಿದ್ದರು!! ಯಾಕೆಂದರೆ, ಆ ದಿನಗಳಲ್ಲಿ ಸೈನ್ಯದಲ್ಲಿ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬಂದಿಗೆ ದೊರೆಯು ತ್ತಿದ್ದ ಮಹತ್ವ ಅಷ್ಟಕ್ಕಷ್ಟೆ.
ಅಂಥ‌ದರಲ್ಲಿ ಸ್ಕಾಟಾರ್‌ ಎಂಬ ಸ್ಥಳದಲ್ಲಿ ಇದ್ದ ಗಾಯಾಳುಗಳ ಸೇವೆಗೆ ಸಿಡ್ನಿ ಹರ್ಬರ್ಟ್‌ ಎಂಬ ಬ್ರಿಟಿಷ್‌ ಅಧಿಕಾರಿ, “ಫ್ಲೋರೆನ್ಸ್ ನೈಟಿಂಗೆಲ್‌’ಳನ್ನು ಆಹ್ವಾನಿಸಿದ. ವಿಚಿತ್ರವೆಂದರೆ, ವೈದ್ಯಕೀಯ ಇತಿಹಾಸದಲ್ಲಿ ಅದೊಂದು ಮಹತ್ವದ ಬೆಳವಣಿಗೆಗೆ ದಾರಿ ಮಾಡಲಿದೆ ಎಂಬುದು ಆತನಿಗೂ ಗೊತ್ತಿರಲಿಲ್ಲ. ಹೀಗೆ ಯುದ್ಧ ಗಾಯಾಳುಗಳ ಸೇವೆಗೆ ಅವಳು ಹೊರಟು ನಿಂತಾಗ ತನ್ನ ಜೀವನದ ಗುರಿ ಏನೆಂಬುದನ್ನು ನಿರ್ಧರಿಬಿಟ್ಟಿದ್ದಳು. ಆಗ ಅವಳಿಗೆ 34 ವರ್ಷ( ಜನನ 1820). ತನಗೆ ತಿಳಿವಳಿಕೆ ಬಂದಾಗಿನಿಂದಲೂ ಮಾನವ ಕಲ್ಯಾಣಕ್ಕಾಗಿ ಏನನ್ನಾದರೂ ಮಾಡಬೇಕೆಂದು ಮನಸಿಟ್ಟು, ತಾನು ಕಲಿತ ಅಂಕಿ ಸಂಖ್ಯಾಶಾಸ್ತ್ರದ ತರಬೇತಿಯನ್ನು ಬಿಟ್ಟು ನರ್ಸಿಂಗ್‌ ಕಲಿಯಲು ಮುಂದಾಗಿದ್ದಳು. ಆಗಿನ ದಿನಗಳಲ್ಲಿ ಕುಲೀನ ಮಹಿಳೆಯರು ಶುಶ್ರೂಷಕಿಯರಾಗಲು ಸಾಮಾಜಿಕ ನಿರ್ಬಂಧವಿದ್ದರೂ ಅವಳು ಅದನ್ನೆಲ್ಲ ಧಿಕ್ಕರಿಸಿ ನರ್ಸಿಂಗ್‌ ತರಬೇತಿಗೆ ಹಾಜರಾದಳು. ನರ್ಸಿಂಗ್‌ನಲ್ಲಿ ಅಪಾರ ಶ್ರದ್ಧೆ ಹೊಂದಿದ ಅವಳು ಶಿಕ್ಷಕರ ಪ್ರೀತಿ ಪಾತ್ರ ವಿದ್ಯಾರ್ಥಿನಿಯಾಗುವುದು ಸುಲಭವಾಯಿತು. ಇದನ್ನು ಮೊದಲೇ ಅರಿತಿದ್ದ ಸಿಡ್ನಿ ಹರ್ಬರ್ಟ್‌ ಅವಳನ್ನು ಆಹ್ವಾನಿಸಿದ್ದ.

ಅವಳು ತನ್ನ ತಂಡದೊಂದಿಗೆ ಅಲ್ಲಿಗೆ ಬಂದಾಗ ಅಲ್ಲಿನ ಸ್ಥಿತಿಗತಿ ನೋಡಿ ಮನ ನೊಂದಿತ್ತು. ಸ್ವತ್ಛತೆ ಇಲ್ಲದ ಕೋಣೆಗಳು, ಗಾಳಿ ಬೆಳಕು ಇಲ್ಲದ ಪರಿಸರ, ಅಪೌಷ್ಟಿಕ ಆಹಾರ ಎಲ್ಲವೂ ಗಾಯಾಳುಗಳ ಮರಣಕ್ಕೆ ಕಾರಣವಾಗಿದ್ದವು. ಅವುಗಳನ್ನೆಲ್ಲ ಮುತುವರ್ಜಿಯಿಂದ ಬದಲಾಯಿಸಿದಳು. ಹೀಗಾಗಿ ಅವಳು ಬಂದಾಗ ಪ್ರತಿಶತ 42 ಇದ್ದ ಸಾವಿನ ಪ್ರಮಾಣ ಕೆಲವೇ ದಿನಗಳಲ್ಲಿ ಪ್ರತಿಶತ 2 ಕ್ಕೆ ಇಳಿಯಿತು. ರೋಗಿಗಳೆಡೆ ಅವಳು ತೋರುತ್ತಿದ್ದ ಮಾತೃ ಸ್ವರೂಪದ ನಡವಳಿಕೆ ಅವರ ಸ್ಥೈರ್ಯ ಹೆಚ್ಚಿಸಲು ಸಹಕಾರಿಯಾಯಿತು. ಸುಮಾರು ಆರು ಕಿ. ಮೀ. ಉದ್ದದ ಕೊಟ್ಟಿಗೆಯಂಥ ಆಸ್ಪತ್ರೆಯ ಪ್ರತಿಯೊಬ್ಬ ರೋಗಿಯನ್ನೂ ಸ್ವತಃ ಮಾತಾಡಿಸುವುದು ದಿನನಿತ್ಯದ ರೂಢಿಯಾಗಿತ್ತು. ಉಳಿದ ಸಿಬಂದಿಯೆಲ್ಲ ವಿಶ್ರಾಂತಿಗಾಗಿ ತೆರಳಿದರೆ, ಈಕೆ ಕೈಯಲ್ಲೊಂದು ದೀಪವನ್ನು ಹಿಡಿದು ಶಾಂತಳಾಗಿ, ರಾತ್ರಿಯೆಲ್ಲಾ ತಿರುಗುತ್ತ, ಪ್ರತಿಯೊಬ್ಬ ಗಾಯಾಳುವನ್ನೂ ಮೈದಡ ವುತ್ತ, ಅವರಿಗೆ ಧೈರ್ಯ ಹೇಳುತ್ತಿದ್ದಳು. ಅವಳ ಮಾತು ಗಳನ್ನು ಕೇಳುತ್ತಿದ್ದರೆ ರೋಗಿಗಳ ಆತ್ಮಸ್ಥೈರ್ಯ ಬೆಳಗುತ್ತಿತ್ತು. ಇವೆಲ್ಲವನ್ನೂ ಅವಳು ಮಾಡಿದ್ದು ಒಂದಿಷ್ಟೂ ಸಂಬಳ ಪಡೆಯದೆ. ಅಲ್ಲದೆ ತನ್ನ ತಂದೆಯಿಂದ ಆ ದಿನಗಳಲ್ಲಿ ಪ್ರತೀವರ್ಷ ಬರುತ್ತಿದ್ದ ಸುಮಾರು 500 ಪೌಂಡ್‌ ನಷ್ಟು (ಈಗಿನ ಸುಮಾರು 42 ಲಕ್ಷ ರೂಪಾಯಿ) ಹಣವನ್ನೂ ಕೂಡ ರೋಗಿಗಳ ಹಾಗೂ ಆಸ್ಪತ್ರೆಗಳ ಉಪಯೋಗಕ್ಕಾಗಿ ಹಾಗೂ ನರ್ಸಿಂಗ್‌ ಕಾಲೇಜ್‌ ಕಟ್ಟುವುದಕ್ಕಾಗಿ ವಿನಿಯೋಗಿ ಸಿದ್ದಳು. ಹಾಗೆಂದೇ ಅವಳ ಜನ್ಮದಿನವಾದ ಮೇ 12ನ್ನು “ವಿಶ್ವ ದಾದಿಯರ ದಿನ’ವನ್ನಾಗಿ ಆಚರಿಸ ಲಾಗುತ್ತಿದೆ. ತನ್ನಿಡೀ ಜೀವನವನ್ನೇ ಶುಶ್ರೂಷೆಗಾಗಿ, ಶುಶ್ರೂಷಾ ಜ್ಞಾನವನ್ನು ಪಸರಿಸುವುದಕ್ಕಾಗಿ ಸವೆಸಿದ ಅಂಥ ತ್ಯಾಗಮಯಿಯ 201ನೆಯ ಜನ್ಮದಿನ ಇಂದು.
***
ಕೋವಿಡ್‌ ಹೆಮ್ಮಾರಿ ತನ್ನ ಎರಡನೆಯ ಅಲೆಯಿಂದ ಭಯಂಕರವಾಗಿ ಅಪ್ಪಳಿಸುತ್ತಿರುವ ಈ ದಿನಗಳಲ್ಲಿ ದಾದಿಯರ ಸೇವೆಯನ್ನು ನಾವಿಂದು ಮರುನೆನಪಿಸಲು ಈ ದಿನಕ್ಕಿಂತ ಇನ್ನೊಂದಿಲ್ಲ. ಆರೋಗ್ಯ ಸಹಾಯಕಿ ಯರಾಗಿ, ಸ್ಟಾಫ್‌ ನರ್ಸ್‌ ಗಳಾಗಿ ಅವರ ಸೇವೆ ಎಲೆಮ ರೆಯ ಕಾಯಂತೆ. ಒಂದೊಂದು ರೋಗಿಯೂ ಕೂಡ ಕೊರೊನಾವಾಹಕ ನಾಗಿರುವ ಈ ಸಂದರ್ಭದಲ್ಲಿ ಅವರ ಧೈರ್ಯ, ಸ್ಥೈರ್ಯ, ತ್ಯಾಗವನ್ನು ನಾವು ಮೆಚ್ಚ ಬೇಕಿದೆ. ರೋಗಿಗಳ ಶುಶ್ರೂಷೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ ಅವರಿಗೆ ನಾವೆಲ್ಲ ಕೃತಜ್ಞರಾಗಿ ರಬೇಕು. ತಮ್ಮ ಮೈಗಂಟಿದ ವೈರಸ್‌ ಮನೆಯವರಿಗೆ ಬರದಿರಲೆಂದು ಅನೇಕ ದಿನಗಳು ತಮ್ಮವರಿಂದ ದೂರ ಉಳಿದವರೆಷ್ಟೊ ಜನ ಶುಶ್ರೂಷಕ/ಶುಶ್ರೂಷಕಿಯರನ್ನು ನಾವು ಕಂಡಿದ್ದೇವೆ. ಬರೀ ಒಂದಿಷ್ಟು ಸಂಬಳಕ್ಕಾಗಿ ಕಣ್ಣಿಗೆ ಕಾಣದ ವೈರಿಯ ಜತೆ ಸೆಣಸುವ ಆವಶ್ಯಕತೆ ಇದೆಯೇ? ಮನಸು ಮಾಡಿದರೆ ಜೀವನೋಪಾಯಕ್ಕೆ ಬೇರೆ ಕೆಲಸ ಸಿಕ್ಕೀತು, ಆದರೆ ಗುಣವಾದ ರೋಗಿಯ ಮುಖದ ಮೇಲೆ ಮೂಡುವ ಸಂತಸದ ಕೃತಜ್ಞತೆಯ ಭಾವ ಕಾಣಬೇಕೆಂದರೆ ಶುಶ್ರೂಷೆಯಂತಹ ಉದಾತ್ತ ವೃತ್ತಿ ಇನ್ನೊಂದಿಲ್ಲ. ಅವರಿಲ್ಲದೆ ವೈದ್ಯಕೀಯವಿಲ್ಲ. ಅವರಿಲ್ಲದೆ ಆರೋಗ್ಯವಿಲ್ಲ. ಅವರು ಮಮತೆ ತುಂಬಿದ ಮಾತೆಯಂತೆ, ವಾತ್ಸಲ್ಯ ತುಂಬಿದ ಸೋದರಿಯಂತೆ… ಅದಕ್ಕೇ ಆಸ್ಪತ್ರೆಗಳಲ್ಲಿ ನಾವು ಅವರನ್ನು “ಸಿಸ್ಟರ್‌’ ಎಂದು ಸಂಬೋಧಿಸುವುದು. ಹಾಗೂ ನಾನಿಲ್ಲಿ “ದೀದಿ’ ಅಂದದ್ದು..!!

– ಡಾ| ಶಿವಾನಂದ ಕುಬಸದ

ಟಾಪ್ ನ್ಯೂಸ್

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.