OBC ಉಪವರ್ಗೀಕರಣ: ಆಯೋಗದಿಂದ ರಾಷ್ಟ್ರಪತಿಗೆ ವರದಿ ಸಲ್ಲಿಕೆ
Team Udayavani, Aug 2, 2023, 12:33 AM IST
ಹೊಸದಿಲ್ಲಿ: ಇತರ ಹಿಂದುಳಿದ ವರ್ಗ(ಒಬಿಸಿ)ಗಳ ಉಪವರ್ಗೀಕರಣದ ಕುರಿತು ಪರಿಶೀಲಿಸಲು ನೇಮಕ ಮಾಡಲಾಗಿದ್ದ ಜಸ್ಟಿಸ್ ರೋಹಿಣಿ ಆಯೋಗವು ರಾಷ್ಟ್ರ ಪತಿ ದ್ರೌಪದಿ ಮುರ್ಮು ಅವರಿಗೆ ವರದಿ ಸಲ್ಲಿಸಿದೆ. ಒಬಿಸಿ ಉಪವರ್ಗೀಕರಣ ಸಂಬಂಧ ಪರಿಶೀಲನೆಗೆಂದು 2017ರಲ್ಲಿ ದಿಲ್ಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಅವರ ನೇತೃತ್ವದಲ್ಲಿ ಆಯೋಗವನ್ನು ಸರಕಾರ ರಚಿಸಿತ್ತು.
ಒಬಿಸಿ ಕೇಂದ್ರ ಪಟ್ಟಿಯಲ್ಲಿರುವ ಅಂಶಗಳನ್ನು ಅಧ್ಯಯನ ಮಾಡಿ, ದೋಷಗಳು, ಅಸಂಗತತೆಗಳು, ಮೀಸಲಾತಿಯ ಪ್ರಯೋಜನಗಳ ಅಸಮಾನ ಹಂಚಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಪರಿಶೀಲಿಸಿ ವರದಿ ನೀಡು ವಂತೆ ಸೂಚಿಸಲಾಗಿತ್ತು. 13 ಬಾರಿ ಅವಧಿ ವಿಸ್ತರಣೆಯ ಬಳಿಕ ಆಯೋಗವು ರಾಷ್ಟ್ರಪತಿಗೆ ವರದಿ ಸಲ್ಲಿಸಿದೆ.