Uttar Kannada: ಸ್ಪರ್ಧೆಗೆ ಜನರ ಆಗ್ರಹ: ಅನಂತಕುಮಾರ ಹೆಗಡೆ ಪ್ರತ್ಯಕ್ಷ
ಜನರ ಬೇಡಿಕೆ ತಿರಸ್ಕರಿಸಿದರೆ ಮೂರ್ಖತನವಾದೀತು: ಸಂಸದ
Team Udayavani, Dec 24, 2023, 11:29 PM IST
ಶಿರಸಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜನರು ಆಗ್ರಹಿಸುತ್ತಿದ್ದಾರೆ. ಕಾರ್ಯಕರ್ತರು ಆಗ್ರಹ ಮಾಡಿದಾಗ ತಿರಸ್ಕರಿಸುವುದು ಮೂರ್ಖತನವಾದೀತು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಬಹಳ ದಿನಗಳ ಬಳಿಕ ಬಹಿರಂಗವಾಗಿ ಕಾಣಿಸಿಕೊಂಡು ಪತ್ರಿಕಾಗೋಷ್ಠಿ ನಡೆಸಿದ ಹೆಗಡೆ, ಪಕ್ಷದ ಕಾರ್ಯಕರ್ತರು ನನ್ನಿಂದ ಈವರೆಗೆ ಏನನ್ನೂ ನಿರೀಕ್ಷೆ ಮಾಡಿಲ್ಲ. ನನ್ನ ಹಾಗೂ ಕಾರ್ಯಕರ್ತರ ನಡುವಿನ ಸಂಬಂಧವನ್ನು ಮಾತಿನಲ್ಲಿ ಬಣ್ಣಿಸಲಾಗದು. ಪ್ರಸ್ತುತ ಲೋಕ ಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾ ಯಿಸುತ್ತಿದ್ದಾರೆ ಎಂದರು.
ಹಿಜಾಬ್ ನಿಷೇಧ ಹಿಂದೆಗೆತದ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಇರು ವುದು ಹಿಜಾಬ್ ಹಿಂದೆ ತಿರುಗುವ ಕಾಂಗ್ರೆಸ್ ಸರಕಾರ ಎಂದು ಕುಟುಕಿದರು.
ಸಮವಸ್ತ್ರದ ಕಲ್ಪನೆಯೇ ಇಲ್ಲದ ಸಿಎಂ ಸಿದ್ದರಾಮಯ್ಯ ಹಿಜಾಬ್ ನಿಷೇಧ ವಾಪಸ್ ಪಡೆಯುವ ಮಾತನಾಡಿದ್ದಾರೆ. ಅವರಿಗೆ ತಾಕತ್ತಿದ್ದರೆ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ ಎಂದು ಸವಾಲು ಹಾಕಿದರು.
ರಾಮ ಮಂದಿರ ನಿರ್ಮಾಣ ಹಿಂದೂ ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆ ಗುರುತಾಗಿದ್ದು, ಇದು ಈ ಶತಮಾನದ ಸಂಭ್ರಮ. ರಾಜ್ಯದ ಕಾಂಗ್ರೆಸ್ ಸರಕಾರದ್ದು ಕೇವಲ ಓಲೈಕೆ ರಾಜಕಾರಣದ ಜಾಯಮಾನ. ಅಲ್ಪಸಂಖ್ಯಾಕರ ಮತ ಇಲ್ಲದೆ ಕಾಂಗ್ರೆಸ್ ಬದುಕಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಎಂದೂ ಬಹುಸಂಖ್ಯಾಕರ ಪರ ರಾಜಕಾರಣ ಮಾಡಿಲ್ಲ ಎಂದರು.
ಸಮಸ್ಯೆಗಳಿಗೆ ಕಾರಣ
ಯಾರು ಯಾವುದೇ ರೀತಿಯ ಬಟ್ಟೆ ಹಾಕಿಕೊಳ್ಳಬಹುದು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಭವಿಷ್ಯದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗಲಿದೆ. ಸಾಮಾಜಿಕ ಚೌಕಟ್ಟಿನ ಕಲ್ಪನೆಯೇ ಇಲ್ಲದ ಮುಖ್ಯಮಂತ್ರಿ ಅವರ ಸಮವಸ್ತ್ರ ಕಲ್ಪನೆ ಬಿಟ್ಟು ಬೇಕಾಬಿಟ್ಟಿ ಹೇಳಿಕೆ ನೀಡುವುದು ಸರಿಯಲ್ಲ. ಇಂಥ ಹಿಂದೂ ವಿರೋ ಧಿ ಸರಕಾರ ಕರ್ನಾಟಕದಲ್ಲಿ ಬಹಳ ದಿನ ಇರಲು ಸಾಧ್ಯವಿಲ್ಲ. ಟಿಪ್ಪು ಈ ರಾಜ್ಯದ ಜನ ದೂರ ಮಾಡಿದ ವ್ಯಕ್ತಿ. ಈ ರಾಜ್ಯವನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ತೊಂದರೆಗೆ ದೂಡಿದ ವ್ಯಕ್ತಿ ಆತ. ಆದರೆ ಅವನ ಹೆಸರನ್ನೇ ಬಳಸಿಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದರು.