ಅವಿರತ ಪ್ರಯತ್ನ; ಯುದ್ಧದ ಮಧ್ಯೆಯೂ ಸಾಗಿದೆ ಭಾರತೀಯರ ರಕ್ಷಣ ಕಾರ್ಯ
ಹಂಗೇರಿಯಲ್ಲಿ ಕೊನೆಯ ಹಂತದ "ಆಪರೇಷನ್ ಗಂಗಾ'
Team Udayavani, Mar 7, 2022, 7:00 AM IST
ಕೀವ್/ಹೊಸದಿಲ್ಲಿ: ಒಂದು ಕ್ಷಣವೂ ಬಿಡುವಿಲ್ಲದಂತೆ ಬಾಂಬುಗಳ ಮಳೆ ಸುರಿಯುತ್ತಿವೆ, ಮನೆ, ಶಾಲೆ, ಆಸ್ಪತ್ರೆ ಹೀಗೆ ಎಲ್ಲವುಗಳಿಗೂ ಕ್ಷಿಪಣಿಗಳು ಅಪ್ಪಳಿಸುತ್ತಿವೆ. ಬಂದೂಕಿನಿಂದ ಹೊರಬರುವ ಗುಂಡುಗಳು ಯಾರಧ್ದೋ ದೇಹವನ್ನು ಸೀಳುತ್ತಿವೆ, ಸ್ಫೋಟಗಳ ಸದ್ದು ಕಿವಿಗಡಚಿಕ್ಕುತ್ತಿವೆ.
ಯುದ್ಧ ತಂದ ಈ “ನರಕ’ದಲ್ಲಿ 11 ದಿನಗಳಿಂದ ಉಕ್ರೇನ್ ಬೇಯುತ್ತಿದೆ. ಇದರ ನಡುವೆಯೂ ಭಾರತ ಸರಕಾರವು ಆ “ಬೆಂಕಿಯ ಬಲೆ’ಯಲ್ಲಿ ಸಿಲುಕಿರುವ ನಮ್ಮ ವಿದ್ಯಾರ್ಥಿಗಳನ್ನು ರಕ್ಷಿಸುವ ಪ್ರಯತ್ನವನ್ನು ಮುಂದುವರಿಸಿದೆ. ಎಲ್ಲ ಭಾರತೀಯರನ್ನೂ ಸುರಕ್ಷಿತವಾಗಿ ಮನೆ ಸೇರಿಸುವ ಉದ್ದೇಶದಿಂದ ಶಕ್ತಿಮೀರಿ ಶ್ರಮಿಸುತ್ತಿದೆ.
ಸಿಡಿಯುತ್ತಿರುವ ಗುಂಡುಗಳ ನಡುವೆಯೂ “ಆಪರೇಷನ್ ಗಂಗಾ’ ನಿರಂತರವಾಗಿ ಸಾಗಿದೆ. ಈಗಾಗಲೇ ಬರೋ ಬ್ಬರಿ 16 ಸಾವಿರ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದ್ದು, ಉಳಿದವರ ರಕ್ಷಣೆ ಕಾರ್ಯವೂ ಭರದಿಂದ ನಡೆಯುತ್ತಿದೆ.
ರವಿವಾರ ಹಂಗೇರಿಯಿಂದ ಕೊನೆಯ ಹಂತದ ಕಾರ್ಯಾಚರಣೆ ನಡೆದಿದ್ದು, ಅಲ್ಲಿನ ಸ್ಥಳೀಯ ಕಾಲಮಾನ ಬೆಳಗ್ಗೆ 10ರಿಂದ 12ರೊಳಗಾಗಿ ಹಂಗೇರಿ ಸಿಟಿ ಸೆಂಟರ್ಗೆ ತಲುಪುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ ನೀಡಿದೆ. ಇನ್ನೂ ಉಕ್ರೇನ್ನಲ್ಲಿ ಉಳಿದಿರುವ ವಿದ್ಯಾರ್ಥಿಗಳು ನಾವು ಕಳುಹಿಸುವ ಗೂಗಲ್ ಫಾರ್ಮ್ ನಲ್ಲಿ ಮಾಹಿತಿ ನೀಡುವಂತೆ ಸೂಚಿಸಿದೆ.
ಮುಂದಿನ ಗುರಿ ಸುಮಿ
ಪಿಸೋಚಿನ್ ಮತ್ತು ಖಾರ್ಕಿವ್ನಲ್ಲಿ ಸಿಲುಕಿದ್ದ ಎಲ್ಲ ಭಾರತೀಯರೂ ಸುರಕ್ಷಿತವಾಗಿ ಸ್ಥಳಾಂತರಗೊಂಡಿದ್ದಾರೆ. ಇನ್ನು ನಾವು ಸುಮಿಯತ್ತ ಗಮನ ಕೇಂದ್ರೀಕರಿಸಲಿದ್ದೇವೆ. ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರುವುದು ದೊಡ್ಡ ಸವಾಲಾಗಿದೆ. ಸುಮಿಯಲ್ಲಿ ಉಕ್ರೇನ್ ಮತ್ತು ರಷ್ಯಾ ಪಡೆಗಳ ನಡುವೆ ತೀವ್ರ ಕಾಳಗ ನಡೆಯುತ್ತಿರುವ ಕಾರಣ ವಿದ್ಯಾರ್ಥಿಗಳನ್ನು ಬಸ್ಸುಗಳಲ್ಲಿ ಕರೆತರುವುದು ಸುಲಭದ ಮಾತಲ್ಲ. ಇದಕ್ಕಿರುವ ಏಕೈಕ ಪರಿಹಾರವೆಂದರೆ ಕದನ ವಿರಾಮ. ಅಲ್ಲಿರುವ ವಿದ್ಯಾರ್ಥಿಗಳನ್ನು ತಲುಪಲು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದೇವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗಚಿ ಹೇಳಿದ್ದಾರೆ. ಸುಮಿಯಿಂದ ವಿದ್ಯಾರ್ಥಿಗಳನ್ನು ಕರೆತಂದರೆ, ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ.
ದೇಶದ ಪ್ರಭಾವ ಹೆಚ್ಚಳಕ್ಕೆ ಸಾಕ್ಷಿ
“ಆಪರೇಷನ್ ಗಂಗಾ’ದ ಯಶಸ್ವಿಯು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರವಿವಾರ ಪುಣೆಯಲ್ಲಿ ಮಾತನಾಡಿದ ಅವರು, “ದೊಡ್ಡ ದೊಡ್ಡ ದೇಶಗಳು ತಮ್ಮ ನಾಗರಿಕರನ್ನು ರಕ್ಷಿಸಲಾಗದೇ ಕೈಚೆಲ್ಲುತ್ತಿರುವಾಗ ನಾವು ಯುದ್ಧ ಪ್ರದೇಶದಿಂದ ಸಾವಿ ರಾರು ವಿದ್ಯಾರ್ಥಿಗಳನ್ನು ಕರೆತಂದಿದ್ದೇವೆೆ’ ಎಂದಿದ್ದಾರೆ.
ವಿಮಾನ ನಿಲ್ದಾಣ ನಾಮಾವಶೇಷ
ಉಕ್ರೇನ್ನ ಕೇಂದ್ರ ಭಾಗದಲ್ಲಿರುವ ವಿನ್ನಿಶಿಯಾ ವಿಮಾನ ನಿಲ್ದಾಣವನ್ನು ರಷ್ಯಾದ ಕ್ಷಿಪಣಿಗಳು ರವಿವಾರ ಧ್ವಂಸಗೊಳಿಸಿವೆ. 8 ರಾಕೆಟ್ಗಳು ನಿರಂತರವಾಗಿ ಅಪ್ಪಳಿಸಿದ ಪರಿಣಾಮ, ಇಡೀ ವಿಮಾನ ನಿಲ್ದಾಣ ನಾಮಾ ವಶೇಷವಾಗಿದೆ ಎಂದು ಉಕ್ರೇನ್ ಅಧ್ಯಕ್ಷರು ತಿಳಿಸಿದ್ದಾರೆ. ಇನ್ನೊಂದೆಡೆ, ಮರಿಯುಪೋಲ್ನಲ್ಲಿ ರವಿವಾರವೂ ಕದನ ವಿರಾಮ ಘೋಷಿಸಿದ್ದ ರಷ್ಯಾ ಸೇನೆ, ನಾಗರಿಕರು ಸ್ಥಳಾಂತರಗೊಳ್ಳುತ್ತಿದ್ದಂತೆ ದಾಳಿ ಆರಂಭಿಸಿದೆ.
ಜಾಗತಿಕ ಆರ್ಥಿಕ ಹಿಂಜರಿತದ ಭೀತಿ
ಯುದ್ಧ ಮತ್ತು ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನ ಕ್ರಮಗಳು ಜಾಗತಿಕ ಆರ್ಥಿಕತೆಯನ್ನು ಅನಿಶ್ಚಿತತೆಗೆ ದೂಡಿದ್ದು, ಜಗತ್ತು ಮತ್ತೆ ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕುವ ಭೀತಿ ಮೂಡಿದೆ. ಹಣದುಬ್ಬರ ಏರಿಕೆ, ಕರೆನ್ಸಿ ಮೌಲ್ಯ ಕುಸಿತ, ತೈಲ ದರ ಹೆಚ್ಚಳ, ದಿನ ಬಳಕೆಯ ವಸ್ತುಗಳ ದರವೂ ಏರಿಕೆಯಾಗಲಿದ್ದು, ಜಗತ್ತಿನ ಆರ್ಥಿಕತೆ ಡೋಲಾಯಮಾನವಾಗುವ ಸಾಧ್ಯತೆ ಹೆಚ್ಚಾಗಿದೆ.
ರವಿವಾರ 2,100 ಮಂದಿ ಸ್ವದೇಶಕ್ಕೆ
ರವಿವಾರ 2,100 ವಿದ್ಯಾರ್ಥಿಗಳು ಸ್ವದೇಶಕ್ಕೆ ಬಂದಿದ್ದು, ಕೀವ್ನಲ್ಲಿ ಗುಂಡು ತಗಲಿದ್ದ ಪಂಜಾಬ್ನ ಹರ್ಜೋತ್ ಸಿಂಗ್(31) ಸಹಿತ ಸೋಮವಾರ 1,500 ವಿದ್ಯಾರ್ಥಿಗಳನ್ನು ಆಗಮಿಸಲಿದ್ದಾರೆ.