ಪಂಪ್ವೆಲ್ ಬಸ್ ಟರ್ಮಿನಲ್ ಯೋಜನೆಗೆ ಗ್ರಹಣ
ನೀಲನಕ್ಷೆ ವಿನ್ಯಾಸದಲ್ಲಿ ಗೊಂದಲ: ಟೆಂಡರ್ ಹಂತಕ್ಕೆ ಬಾರದ ಯೋಜನೆ
Team Udayavani, Feb 10, 2023, 9:58 AM IST
ಮಂಗಳೂರು: ಪಂಪ್ವೆಲ್ನಲ್ಲಿ ನಿರ್ಮಿಸಲು ಯೋಚಿಸಿದ್ದ ಬಸ್ ಟರ್ಮಿನಲ್ ಯೋಜನೆ ಇನ್ನೂ ಟೇಕಾಫ್ ಆಗಲೇ ಇಲ್ಲ. ನೀಲನಕ್ಷೆ ವಿನ್ಯಾಸದಲ್ಲಿರುವ ಗೊಂದಲದಿಂದಾಗಿ ಇನ್ನೂ ಈ ಯೋಜನೆ ಟೆಂಡರ್ ಹಂತಕ್ಕೆ ಬಂದಿಲ್ಲ.
ಅಂದುಕೊಂಡಂತೆ ಆದರೆ ಈಗಾಗಲೇ ಪಂಪ್ವೆಲ್ ಬಸ್ ಟರ್ಮಿನಲ್ ಕೆಲಸ ಆರಂಭ ಆಗಬೇಕಿತ್ತು. ಆದರೆ ಇನ್ನೂ ಹೊಸ ಟೆಂಡರ್ ಪ್ರಕ್ರಿಯೆಯೇ ಅಂತಿಮಗೊಂಡಿಲ್ಲ. ಈಗಾಗಲೇ ಹಲವು ಬಾರಿ ಟೆಂಡರ್ ಕರೆದರೂ ಗುತ್ತಿಗೆ ವಹಿಸಿಕೊಳ್ಳಲು ಯಾರೂ ಮುಂದೆಬಂದಿಲ್ಲ. ಇದೇ ಕಾರಣಕ್ಕೆ ನೀಲ ನಕ್ಷೆಯನ್ನು ಬದಲಾವಣೆ ಮಾಡಿ ಟೆಂಡರ್ ಕರೆಯಲು ತೀರ್ಮಾನಿಸಲಾಗಿದ್ದು, ಇನ್ನೂ ಅದು ಅಂತಿಮಗೊಂಡಿಲ್ಲ.
ಸ್ಮಾರ್ಟ್ಸಿಟಿ ಯೋಜನೆಯಡಿ 445 ಕೋ.ರೂ. ವೆಚ್ಚದಲ್ಲಿ ಪಂಪ್ವೆಲ್ನಲ್ಲಿ ಇಂಟಿಗ್ರೇಟೆಡ್ ಬಸ್ ಟರ್ಮಿನಲ್, ವಾಣಿಜ್ಯ ಸಂಕೀರ್ಣ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಇದಕ್ಕೆಂದು ಕಳೆದ ವರ್ಷ 3 ಬಾರಿ ಟೆಂಡರ್ ಕರೆಯಲಾಗಿತ್ತು. ಗುತ್ತಿಗೆ ವಹಿಸಲು ಯಾರೂ ಬಾರದ ಕಾರಣ ಯೋಜನೆಗೆ ಹಿನ್ನಡೆಯಾಗಿತ್ತು. ಇದೀಗ ಬಸ್ ನಿಲ್ದಾಣದ ವಿನ್ಯಾಸದಲ್ಲಿ ಕೊಂಚ ಬದಲಾವಣೆಗೆ ನಿರ್ಧರಿಸಲಾಗಿದೆ.
120 ಕೋಟಿ ರೂ. ಇಳಿಕೆ ಸ್ಮಾರ್ಟ್ಸಿಟಿಯ ಯೋಜನೆಯಂತೆ ಪಂಪ್ವೆಲ್ ಬಸ್ ಟರ್ಮಿನಲ್ಗೆ ಟೆಂಡರ್ ಮೊತ್ತವನ್ನು 445 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ ಟೆಂಡರ್ ವಹಿಸಿಕೊಳ್ಳಲು ಯಾರೂ ಆಸಕ್ತಿ ತೋರದ ಕಾರಣ ಟೆಂಡರ್ ಮೊತ್ತವನ್ನು ಸುಮಾರು 100ರಿಂದ 120 ಕೋಟಿ ರೂ. ಇಳಿಕೆ ಮಾಡಲು ಸ್ಮಾರ್ಟ್ಸಿಟಿ ನಿರ್ಧರಿಸಿದೆ. ಆ ಮೊತ್ತದಂತೆ ಉದ್ದೇಶಿತ ಬಸ್ ಟರ್ಮಿನಲ್ ವಿನ್ಯಾಸಲ್ಲಿಯೂ ಬದಲಾವಣೆಯಾಗಲಿದೆ.
ಮತ್ತೆ ಟೆಂಡರ್
ಪಂಪ್ವೆಲ್ನಲ್ಲಿ ಬಸ್ ಟರ್ಮಿನಲ್ ನಿರ್ಮಾಣಕ್ಕೆ ಈಗಾಗಲೇ ಯೋಜನೆ ರೂಪಿಸಲಾಗಿದೆ. ಕೆಲವು ಬಾರಿ ಟೆಂಡರ್ ಕರೆಯಲಾದರೂ ಟೆಂಡರ್ ವಹಿಸಿಲು ಯಾರೂ ಮುಂದೆ ಬಂದಿಲ್ಲ. ಇದೇ ಕಾರಣಕ್ಕೆ ಇದೀಗ ವಿನ್ಯಾಸದಲ್ಲಿ ಬದಲಾವಣೆ ಮಾಡಿ ಮರು ಟೆಂಡರ್ ಕರೆಯಲುನಿರ್ಧರಿಸಿದ್ದೇವೆ..
-ಡಿ. ವೇದವ್ಯಾಸ ಕಾಮತ್, ಶಾಸಕರು
ಈಗಾಗಲೇ ಉದ್ಯಮಿಗಳು, ಕೆಎಸ್ಸಾರ್ಟಿಸಿ, ಖಾಸಗಿ ಬಸ್ ಪ್ರಮುಖರ ಅಭಿಪ್ರಾಯವನ್ನು ಕೇಳಲಾಗಿದೆ. ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್, ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್ ವ್ಯವಸ್ಥೆಯಲ್ಲಿಯೂ ಬದಲಾವಣೆ ನಡೆಸಲು ಚಿಂತಿಸಲಾಗಿದೆಯಾದರೂ ಅಂತಿಮಗೊಂಡಿಲ್ಲ. ಈ ಪ್ರಕ್ರಿಯೆಗಳು ಅಂತಿಮಗೊಂಡ ಬಳಿಕವಷ್ಟೇ ಟೆಂಡರ್ ಕರೆಯಲು ನಿರ್ಧಾರ ಮಾಡಲಾಗಿದೆ.