ನ್ಯಾಯಬೆಲೆ ಅಂಗಡಿ ಮಾಲಿಕರಿಂದ ಅವ್ಯವಹಾರ !ಅಂಗಡಿ ಪರವಾನಗಿ ರದ್ದತಿಗೆ ಆಗ್ರಹ
Team Udayavani, Nov 19, 2020, 1:32 PM IST
ಮದ್ದೂರು: ನ್ಯಾಯಬೆಲೆ ಅಂಗಡಿ ಮಾಲಿಕರು ಹಲವಾರು ಅಕ್ರಮ ಅವ್ಯವಹಾರ ಕೈಗೊಂಡಿದ್ದು ಅಂಗಡಿ ಪರವಾನಗಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ತಾಲೂಕಿನ ಬೋರಾಪುರ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಮದ್ದೂರು ಪಟ್ಟಣದ ಟಿಎಪಿಸಿಎಂಎಸ್ ಗೋದಾಮು ಬಳಿ ಜಮಾಯಿಸಿದ ಬೋರಾಪುರ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ಮಾಲಿಕರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಕಳೆದ ಹಲವಾರು ವರ್ಷಗಳಿಂದಲೂಅಕ್ರಮವೆಸಗಿರುವ ನ್ಯಾಯಬೆಲೆ ಅಂಗಡಿ ಪರವಾನಗಿಯನ್ನು ರದ್ದು ಗೊಳಿಸುವಂತೆ ಆಗ್ರಹಿಸಿದರು.
ಈ ಹಿಂದೆಯೇ ಪರವಾನಗಿ ರದ್ದು: ಪಡಿತರ ಕಾರ್ಡ್ದಾರರಿಂದ ಹಣ ವಸೂಲಿ, ತೂಕದಲ್ಲಿ ಮೋಸ, ಅಂತ್ಯೋದಯ ಕಾರ್ಡ್ದಾರರಿಂದ ಆಹಾರ ಪದಾರ್ಥಗಳ ದುರ್ಬಳಕೆ ಇನ್ನಿತರೆ ಅಕ್ರಮ, ಅವ್ಯವಹಾರ ಕೈಗೊಂಡ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸದರಿ ಅಂಗಡಿಯನ್ನು 3 ಬಾರಿ ಅಮಾನತುಗೊಳಿಸಲಾಗಿತ್ತು.
ಸದರಿ ಪ್ರಕರಣ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು ಇದಕ್ಕೆ ಸೊಪ್ಪು ಹಾಕದ ಅಂಗಡಿ ಮಾಲಿಕ ಬಿ.ಎಸ್. ರಾಮಲಿಂಗಯ್ಯ ತಮ್ಮ ಪ್ರಭಾವ ಬಳಸಿ ಸಚಿವರ ನ್ಯಾಯಾಲಯದಲ್ಲಿ ಅಮಾನತು ಆದೇಶ ತಿರಸ್ಕರಿಸಿ ಪಡಿತರ ಪದಾರ್ಥ ವಿತರಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿದರು.
ಇದನ್ನೂ ಓದಿ:ಗಾಢ ನಿದ್ರೆಯಲ್ಲಿದ್ದ ಪತ್ನಿಯ ತಲೆಗೆ ದೊಣ್ಣೆಯಿಂದ ಹೊಡೆದು ಕೊಂದ ಪತಿ!
ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಸ್ಥಳೀಯ ಗ್ರಾಮಸ್ಥರು ಸಚಿವರ ಆದೇಶ ತಿರಸ್ಕರಿಸಿ ಪಟ್ಟಣದ ಟಿಎಪಿಸಿಎಂಎಸ್ ಗೋದಾಮು ಬಳಿ ತಮ್ಮ ಪಡಿತರ ಪದಾರ್ಥಗಳನ್ನು ಪಡೆದರಲ್ಲದೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಹಲವಾರು ಅಕ್ರಮ, ಅವ್ಯವಹಾರ
ಎಸಗಿರುವ ರಾಮಲಿಂಗಯ್ಯ ಅವರ ನ್ಯಾಯಬೆಲೆ ಅಂಗಡಿ ಪರವಾನಗಿಯನ್ನು ರದ್ದುಗೊಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ನಿವಾಸಿಗಳ ಹಿತ ಕಾಯಿರಿ: ಜಿಲ್ಲಾಡಳಿತ ಅಗತ್ಯ ಕ್ರಮವಹಿಸುವವರೆಗೆ ರಾಮಲಿಂಗಯ್ಯ ಅವರ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪದಾರ್ಥ ಪಡೆಯುವುದಿಲ್ಲವೆಂದು ಕೂಡಲೇ ಸಚಿವರು ತಮ್ಮ ಆದೇಶ ಹಿಂಪಡೆದು ಸ್ಥಳೀಯ ನಿವಾಸಿಗಳ ಹಿತ
ಕಾಯಬೇಕೆಂದರು.
ಪ್ರತಿಭಟನೆ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ಮುಖಂಡರಾದ ಪ್ರಕಾಶ್, ಸೋಮಶೇಖರ್, ಪ್ರಸನ್ನ, ಸಿದ್ದರಾ ಮೇಗೌಡ, ಚಂದ್ರಶೇಖರ್, ನಾಗರಾಜು, ಬೋರೇ ಗೌಡ, ಹುಚ್ಚಯ್ಯ, ಶಿವರಾಮಯ್ಯ, ಮಲ್ಲೇಗೌಡ, ಮಾದೇಗೌಡ, ದಿನೇಶ್, ಹನುಮಂತು ನೇತೃತ್ವ ವಹಿಸಿದ್ದರು.