ಯಕ್ಷಗಾನ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಬಿಡುಗಡೆ: ಜಿ. ಎಲ್. ಹೆಗಡೆ
ಅಣ್ಣ ಮಹಾಬಲ ಕೃತಿ ಬಿಡುಗಡೆ
Team Udayavani, Apr 9, 2022, 6:46 PM IST
ಪ್ರಥಮ ಪ್ರತಿಯನ್ನು ಎಂ.ಎ.ಹೆಗಡೆ ಅವರ ಶ್ರೀಮತಿ ಅವರಿಗೆ ನೀಡಿದರು
ಶಿರಸಿ: ಯಕ್ಷಗಾನ ಸಾಹಿತ್ಯ ಸಮ್ಮೇಳನಕ್ಕೆ ಹಣ ಬಿಡುಗಡೆ ಆಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ ಹೇಳಿದರು.
ಶನಿವಾರ ನಗರದ ರೋಟರಿ ಸೆಂಟರನಲ್ಲಿ ರಾಜಶೇಖರ ಜೋಗಿನ್ಮನೆ ಅವರು ಪ್ರೋ.ಎಂ.ಎ.ಹೆಗಡೆ ಅವರ ಕುರಿತು ಬರೆದ ”ಅಣ್ಣ ಮಹಾಬಲ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕನ್ನಡ ಉಳಿಯಬೇಕು ಎಂದರೆ ಯಕ್ಷಗಾನ ಉಳಿಸಬೇಕು. ಅದಕ್ಕಾಗಿ ಯಕ್ಷಗಾನ ಸಾಹಿತ್ಯ ಸಮ್ಮೇಳನ ಆಗಬೇಕು. ಯಕ್ಷಗಾನ ಅನ್ನಪೂರ್ಣೆಶ್ವರಿ. ಸಾವಿರಾರು ಜನರಿಗೆ ಅನ್ನ ಕೊಡುತ್ತದೆ. ನಾಡಿನ ಮುದ್ರೆ ಯಕ್ಷಗಾನಕ್ಕೆ ಬೀಳಬೇಕು. ಅಂಥ ಕೆಲಸ ಮಾಡಬೇಕು ಎಂದು ಹೊರಟಿದ್ದೇವೆ ಎಂದ ಅವರು, ಸರಕಾರ ಯಕ್ಷಗಾನ ಸಮ್ಮೇಳನ ಆರೆಂಟು ತಿಂಗಳಲ್ಲಿ ಆಗಲಿದೆ ಎಂದರು.
ಇದನ್ನೂ ಓದಿ : ದುರ್ಗಪ್ಪ ಗುಡಿಗಾರ ಓರ್ವ ಅಪ್ರತಿಮ ಕಲಾಕಾರ: ಜಿ.ಎಲ್. ಹೆಗಡೆ
ಅಕಾಡೆಮಿಯ ಅಧ್ಯಕ್ಷರಾಗಿ ಎಂ.ಎ.ಹೆಗಡೆ ಅವರು ಮಾಡಿದ ಸಾಧನೆ ದೊಡ್ಡದು. ಅವರು ಕುಳಿತ ಖುರ್ಚಿಯಲ್ಲಿ ಕುಳಿತು ಕೆಲಸ ಮಾಡುವದೂ ಸುಲಭದ್ದಲ್ಲ. ಕೇವಲ ಅಕಾಡೆಮಿ ಅಧ್ಯಕ್ಷರು ಎಂದು ಗುರುತಿಸದೇ ಅಕಾಡೆಮಿ ಕೂಡ ಇದೆ ಎಂದು ತೋರಿದ್ದಾರೆ.
ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ, ಒಬ್ಬ ಸಾಧಕನ ಕುರಿತು ಕುಟುಂಬ ಹಾಗೂ ಸಮಾಜ ಒಟ್ಟೊಟ್ಟಿಗೆ ಬರುವದು ಅಪರೂಪ. ಆದರೆ, ಎಂ.ಎ.ಹೆಗಡೆ ಅವರ ಕುರಿತು ಎರಡೂ ಒಟ್ಟೊಟ್ಟಿಗೆ ಬಂದಿದೆ. ಪ್ರಖರತೆ, ನಿಖರತೆ ಒಳಗೊಂಡವರು. ಹರಿತ ಹಾಗೂ ಹರಿತ ಆಗುತ್ತಲೂ ಇರಬೇಕು ಎಂದರು.
ಕೃತಿ ಪರಿಚಯಿಸಿದ ಸುಬ್ರಾಯ ಮತ್ತೀಹಳ್ಳಿ, ಅವರ ಪದ್ಯದ ಒಳಗೆ ಸಂಸ್ಕೃತಿ, ಆಧ್ಯಾತ್ಮಿಕತೆ ಸೇರಿ ವಿಶಿಷ್ಟ ಸ್ವಾದ ಪಡೆದಿದೆ. ಹೊಸ ಕಾಲದ ಸವಾಲುಗಳನ್ನೂ ಪುರಣದ ಅರ್ಥದಲ್ಲಿ ಶೋಧಿಸಿದವರು. ಅಂಥ ಸಾಧಕ ಎಂ.ಎ.ಹೆಗಡೆ ಅವರ ತಾಳಮದ್ದಲೆ,ಸಂಸ್ಕೃತ, ಯಕ್ಷಗಾನ ಸೂಕ್ಷ್ಮತೆ ಮೆಲಕು ಹಾಕಿಸಿಕೊಳ್ಳಬೇಕಾಗಿದೆ ಎಂದರು.
ಕೃತಿಕಾರ ರಾಜಶೇಖರ ಜೋಗಿನ್ಮನೆ, ಎಂ.ಎ.ಹೆಗಡೆ ಅಥವಾ ಅವರಂಥ ವಿದ್ವಾಂಸರ ಕುರಿತು ದಾಖಲಿಸಬೇಕಾದ ಅನಿವಾರ್ಯ ಆಗಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಜಿ.ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿದರು.
ಕೆ.ಎನ್.ಹೊಸಮನಿ ಸ್ವಾಗತಿಸಿದರು. ನಾಗರಾಜ್ ಜೋಶಿ ನಿರ್ವಹಿಸಿದರು.
ನಮ್ಮ ನೆಲದ ಸಾಧಕರ ಕುರಿತು ಪರಿಚಯಿಸುವ ಕೆಲಸ ಆಗುತ್ತಿಲ್ಲ. ಅಂಥ ಕಾರ್ಯ ಆಗಬೇಕು. ಇಂಥ ಬೇಲಿ ಮುರಿದು ಮುಂದಿನ ತಲೆಮಾರಿಗೆ ಕೊಡುಗೆ ಕೊಡಬೇಕು.
– ಮೋಹನ ಭಾಸ್ಕರ ಹೆಗಡೆ, ಸಿಇಓ ಸೆಲ್ಕೋ ಇಂಡಿಯಾ