ಬಾಬಾರಾಮ್ ದೇವ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ: ಪ್ರಧಾನಿಗೆ ಐಎಂಎ
ಕೋವಿಡ್ ಎರಡು ಲಸಿಕೆಯನ್ನು ಪಡೆದ ಜನರಲ್ಲಿ ಕೇವಲ 0.06ರಷ್ಟು ಮಾತ್ರ ಕೋವಿಡ್ ಸೋಂಕು ತಗುಲಿತ್ತು.
Team Udayavani, May 26, 2021, 7:41 PM IST
ನವದೆಹಲಿ: ಕೋವಿಡ್ 19 ಲಸಿಕೆ ಚಿಕಿತ್ಸೆಯ ವಿರುದ್ಧ ತಪ್ಪು ಮಾಹಿತಿ ನೀಡುತ್ತಿರುವ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ಧ ಕೂಡಲೇ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದೆ.
ಅಲೋಪಥಿ ವೈದ್ಯ ಪದ್ಧತಿ ಮತ್ತು ಅಲೋಪಥಿ ವೈದ್ಯರ ವಿರುದ್ಧ ಹೇಳಿಕೆ ನೀಡಿದ್ದ ಬಾಬಾ ರಾಮ್ ದೇವ್ ವಿರುದ್ಧ ಐಎಂ ಎ ಈಗಾಗಲೇ ಒಂದು ಸಾವಿರ ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯ ನೋಟಿಸ್ ಅನ್ನು ಜಾರಿಗೊಳಿಸಿದೆ.
ಕೋವಿಡ್ ಎರಡು ಲಸಿಕೆಯನ್ನು ಪಡೆದ ಜನರಲ್ಲಿ ಕೇವಲ 0.06ರಷ್ಟು ಮಾತ್ರ ಕೋವಿಡ್ ಸೋಂಕು ತಗುಲಿತ್ತು. ಲಸಿಕೆ ಪಡೆದ ಕೆಲವೇ ಮಂದಿಗೆ ತೀವ್ರವಾದ ಶ್ವಾಸಕೋಶದ ಸೋಂಕು ಇದ್ದಿರುವುದನ್ನು ಗಮನಿಸಿದ್ದೇವೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ ಎರಡೂ ಲಸಿಕೆಗಳನ್ನು ಪಡೆದ ಸುಮಾರು 10,000 ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ. ಅಲೋಪಥಿ ಔಷಧದಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿರುವ ಬಾಬಾ ರಾಮ್ ದೇವ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಮನಸ್ಸಿಗೆ ತುಂಬಾ ನೋವಾಗಿದ್ದು, ರಾಮ್ ದೇವ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ವೈದ್ಯರು ಪತ್ರದಲ್ಲಿ ಒತ್ತಾಯಿಸಿದ್ದಾರೆ.