ಗುಜರಾತ್ ಟೈಟಾನ್ಸ್ಗೆ ಸನ್ರೈಸರ್ ಹೈದರಾಬಾದ್ ಸವಾಲು
Team Udayavani, Apr 11, 2022, 8:20 AM IST
ಮುಂಬಯಿ: ಈ ಐಪಿಎಲ್ನ ಹೊಸ ತಂಡಗಳಲ್ಲಿ ಒಂದಾದ ಗುಜರಾತ್ ಟೈಟಾನ್ಸ್ ಅದ್ಭುತ ನಿರ್ವಹಣೆ ನೀಡುತ್ತಿದೆ. ಆಡಿದ ಮೂರು ಪಂದ್ಯಗಳಲ್ಲಿ ಗೆದ್ದಿರುವ ಗುಜರಾತ್ ಅಜೇಯ ಸಾಧನೆ ಮಾಡಿದೆ.
ಗುಜರಾತ್ ಸೋಮವಾರದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದೆ. ಒಂದು ವೇಳೆ ಈ ಪಂದ್ಯದಲ್ಲಿಯೂ ಗೆದ್ದರೆ ಅಗ್ರಸ್ಥಾನಕ್ಕೇರುವ ಸಾಧ್ಯತೆಯೂ ಇದೆ.
ರಾಹುಲ್ ತೆವಾಟಿಯ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದರಿಂದ ಗುಜರಾತ್ ಈ ಹಿಂದಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲುವು ಸಾಧಿಸಿದ್ದರೆ ಹೈದರಾಬಾದ್ ಈ ಮೊದಲಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿತ್ತು. ಗೆಲುವಿನ ಉತ್ಸಾಹದಲ್ಲಿರುವ ಈ ಎರಡು ತಂಡಗಳು ಇದೀಗ ಮುಖಾಮುಖೀಯಾಗಲಿದ್ದು ವಿಜಯಮಾಲೆ ಯಾರಿಗೆ ಒಲಿಯಲಿದೆ ಎಂಬುದನ್ನು ನೋಡಬೇಕಾಗಿದೆ.
ಆಲ್ರೌಂಡ್ ಆಟದ ಪ್ರದರ್ಶನ ನೀಡುತ್ತಿರುವ ಗುಜರಾತ್ ತಂಡವನ್ನು ಸೋಲಿಸಲು ಉಳಿದೆಲ್ಲ ತಂಡಗಳು ಹಾತೊರೆಯುತ್ತಿದೆ. ಪಂಜಾಬ್ ವಿರುದ್ದ ಗುಜರಾತ್ ಸೋಲಿನ ದವಡೆಯಿಂದ ಪಾರಾಗಿ ಜಯಭೇರಿ ಬಾರಿಸಿದ ಸಾಧನೆ ಮಾಡಿತ್ತು. ನಾಯಕ ಹಾರ್ದಿಕ್ ಪಾಂಡ್ಯ ಶ್ರೇಷ್ಠ ನಿರ್ವಹಣೆ ನೀಡದಿದ್ದರೂ ಅವರ ತಂತ್ರಗಾರಿಕೆ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ.
ಗುಜರಾತ್ ಗೆಲುವು ದಾಖಲಿಸಿದ ಮೂರು ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಆಗಿ ಬೇರೆ ಬೇರೆ ಆಟಗಾರರು ಕಾಣುತ್ತಿದ್ದಾರೆ. ಆರಂಭಿಕ ಪಂದ್ಯದಲ್ಲಿ ಇನ್ನೊಂದು ಹೊಸ ತಂಡವಾದ ಲಕ್ನೋವನ್ನು ಕೆಡಹಿ ಶುಭಾರಂಭಗೈದಿತ್ತು. ಪ್ರತಿಯೊಂದು ಪಂದ್ಯ ಗೆಲ್ಲುವುದು ಮತ್ತು ಉತ್ತಮ ನಿರ್ವಹಣೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳುವುದು ತಂಡದ ಗುರಿಯಾಗಿದೆ.
ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿಯೂ ತಂಡವು ಶುಭಮನ್ ಗಿಲ್ ಅವರ ನಿರ್ವಹಣೆಯನ್ನು ನೆಚ್ಚಿಕೊಂಡಿದೆ. ಪ್ರಚಂಡ ಫಾರ್ಮ್ ನಲ್ಲಿರುವ ಗಿಲ್ ಪಂಜಾಬ್ ವಿರುದ್ದ ತನ್ನ ಗರಿಷ್ಠ ಐಪಿಎಲ್ ಮೊತ್ತ ದಾಖಲಿಸಿದ್ದರು. ಅವರಿಗೆ ಮ್ಯಾಥ್ಯೂ ವೇಡ್ ಉತ್ತಮ ಬೆಂಬಲ ನೀಡಬೇಕಾಗಿದೆ. ಸ್ಫೋಟಕ ಆಟದ ಖ್ಯಾತಿಯ ವೇಡ್ ಆ ಪಂದ್ಯದಲ್ಲಿ ನೀರಸವಾಗಿ ಆಡಿದ್ದರು. ಆದರೆ ಸಾಯಿ ಸುದರ್ಶನ್ ಅರ ಉತ್ತಮ ಆಟದಿಂದಾಗಿ ತಂಡ ಗೆಲುವು ಸಾಧಿಸುವಂತಾಯಿತು.
ಡೆತ್ ಓವರ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಯಾರ್ಕರ್ ಎಸೆತಗಾರ ಟಿ. ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ಅವರ ದಾಳಿಯನ್ನು ಗುಜರಾತ್ ಮೆಟ್ಟಿ ನಿಲ್ಲಬೇಕಾಗಿದೆ. ಇಲ್ಲದಿದ್ದರೆ ಗುಜರಾತ್ ಸೋಲುವ ಸಾಧ್ಯತೆಯಿದೆ.
ಗುಜರಾತ್ನ ಬೌಲಿಂಗ್ ಪಡೆಯೂ ಬಲಿಷ್ಠವಾಗಿದೆ. ಹಾರ್ದಿಕ್ ಪಾಂಡ್ಯ ಅವರ ನಾಲ್ಕು ಓವರ್ ಪಂದ್ಯದ ಗತಿಯನ್ನು ಬದಲಿಸುವ ಸಾಧ್ಯತೆಯೂ ಇದೆ. ಹೊಸ ಚೆಂಡಿನಲ್ಲಿ ಮೊಹಮ್ಮದ್ ಶಮಿ ಗಮನಾರ್ಹ ಪ್ರದರ್ಶನ ನೀಡಬಹುದು. ಲೂಕಿ ಫೆರ್ಗ್ಯುಸನ್ ಅಪಾಯಕಾರಿ ಬೌಲರ್ ಆಗುವ ಸಾಧ್ಯತೆಯಿದೆ. ರಶೀದ್ ಖಾನ್ ಇರುವುದೇ ತಂಡದ ಪ್ಲಸ್ ಪಾಯಿಂಟ್ ಆಗಿದೆ.
ಅಭಿಷೇಕ್ ಭರ್ಜರಿ ಆಟ
ಹೈದರಾಬಾದ್ ತಂಡದ ಆರಂಭಿಕ ಅಭಿಷೇಕ್ ಶರ್ಮ ಚೆನ್ನೈ ವಿರುದ್ಧ 75 ರನ್ ಗಳಿಸಿ ತಂಡಕ್ಕೆ ಜಯ ತದ್ದುಕೊಂಡಿದ್ದರು. ಅವರು ಮುಂದಿನ ಪಂದ್ಯದಲ್ಲೂ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆ ಮಾಡಲಾಗಿದೆ. ರಾಹುಲ್ ತ್ರಿಪಾಠಿ, ನಿಕೋಲಾಸ್ ಪೂರಣ್ ಮತ್ತು ಐಡೆನ್ ಮಾರ್ಕ್ರಮ್ ಸ್ಥಿರ ನಿರ್ವಹಣೆ ನೀಡುವ ಅಗತ್ಯವಿದೆ. ಮಧ್ಯಮ ಕ್ರಮಾಂಕದ ಜವಾಬ್ದಾರಿ ಅರಿತು ಅವರೆಲ್ಲ ಆಡಿದರೆ ತಂಡ ಒಳ್ಳೆಯ ಸಾಧನೆಯೊಂದಿಗೆ ಅಂಕಪಟ್ಟಿಯಲ್ಲಿ ಮುನ್ನಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ