ಬಿ.ನಾಗೇಂದ್ರ ಜತೆ ಸಿಎಂ ಚರ್ಚೆ
Team Udayavani, Apr 28, 2019, 3:01 AM IST
ಬೆಂಗಳೂರು: ಕಾಂಗ್ರೆಸ್ನಲ್ಲಿ ಬಂಡಾಯ ಎದ್ದಿರುವ ಶಾಸಕ ರಮೇಶ್ ಜಾರಕಿಹೊಳಿ ಆಪ್ತ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಶನಿವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಕುತೂಹಲ ಮೂಡಿಸಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಚರ್ಚಿಸಿದ ನಾಗೇಂದ್ರ, “ಕಾಂಗ್ರೆಸ್ ಬಿಡುವುದಿಲ್ಲ, ರಮೇಶ್ ಜಾರಕಿಹೊಳಿ’ ಜತೆ ಹೋಗುವುದಿಲ್ಲ ಎಂದು ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ರಮೇಶ್ ಜಾರಕಿಹೊಳಿ ಅವರ ತಂಡದಲ್ಲಿ ಗುರುತಿಸಿಕೊಂಡಿದ್ದ ಬಿ.ನಾಗೇಂದ್ರ, ಕಳೆದ ಲೋಕಸಭಾ ಉಪ ಚುನಾವಣೆ ವೇಳೆ ಸಹೋದರ ವೆಂಕಟೇಶ ಪ್ರಸಾದ್ಗೆ ಕಾಂಗ್ರೆಸ್ನಿಂದ ಟಿಕೆಟ್ಗೆ ಪ್ರಯತ್ನಿಸಿದ್ದರು. ಆದರೆ, ವಿ.ಎಸ್.ಉಗ್ರಪ್ಪ ಅವರಿಗೆ ಟಿಕೆಟ್ ದೊರೆತಿತ್ತು.
ನಂತರ, ಸಾರ್ವತ್ರಿಕ ಲೋಕಸಭಾ ಚುನಾವಣೆ ವೇಳೆಯೂ ಉಗ್ರಪ್ಪ ಅವರಿಗೆ ಟಿಕೆಟ್ ನಿರ್ಧಾರವಾಗಿದ್ದರಿಂದ, ವೆಂಕಟೇಶ ಪ್ರಸಾದ್ ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿ ಅಲ್ಲಿ ಟಿಕೆಟ್ಗೆ ಯತ್ನಿಸಿದ್ದರು.
ಆದರೆ, ರಮೇಶ್ ಜಾರಕಿಹೊಳಿ ಅವರು ಅಲ್ಲೂ ಪ್ರಭಾವ ಬೀರಿ ತಮ್ಮ ಬೀಗರಾದ ದೇವೇಂದ್ರಪ್ಪ ಅವರಿಗೆ ಟಿಕೆಟ್ ಕೊಡಿಸಿದ್ದರು. ಇದು ನಾಗೇಂದ್ರ ಅವರಿಗೆ ಬೇಸರ ತರಿಸಿದೆ. ಹೀಗಾಗಿ, ಅವರು ಒಂದೊಮ್ಮೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟರೂ ಅವರ ಜತೆ ಹೋಗದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ರಮೇಶ್ ಜಾರಕಿಹೊಳಿ ಬಂಡಾಯ ಹಿನ್ನೆಲೆಯಲ್ಲಿ ಸರ್ಕಾರ ಉಳಿಸಿಕೊಳ್ಳಲು “ರಂಗಪ್ರವೇಶ’ ಮಾಡಿರುವ ಎಚ್.ಡಿ.ಕುಮಾರಸ್ವಾಮಿ, ರಮೇಶ್ ಜಾರಕಿಹೊಳಿ ಜತೆ ಗುರುತಿಸಿಕೊಂಡವರನ್ನು ಪ್ರತ್ಯೇಕವಾಗಿ ಕರೆದು ಮಾತನಾಡುತ್ತಿದ್ದಾರೆ.
ಇತ್ತೀಚೆಗೆ ಮಹೇಶ್ ಕುಮಟಳ್ಳಿ ಅವರನ್ನು ಜೆಪಿ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಮಾತನಾಡಿಸಿದ್ದರು. ನಂತರ, ಡಿ.ಕೆ.ಶಿವಕುಮಾರ್ ಮೂಲಕ ಮತ್ತೂಬ್ಬ ಶಾಸಕ ಶ್ರೀಮಂತ್ ಪಾಟೀಲ್ ಜತೆಯೂ ಚರ್ಚಿಸಿದ್ದರು. ಇದೀಗ ನಾಗೇಂದ್ರ ಜತೆ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಒಟ್ಟಾರೆ, ರಮೇಶ್ ಜಾರಕಿಹೊಳಿಯವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ ಅವರ ಆಪ್ತರನ್ನು ಹಿಡಿದಿಟ್ಟುಕೊಂಡು ಸರ್ಕಾರ ಉಳಿಸಿಕೊಳ್ಳುವುದು ಈ ಎಲ್ಲಾ ಪ್ರಯತ್ನಗಳ ಉದ್ದೇಶ. ಜೊತೆಗೆ, ರಮೇಶ್ ಜಾರಕಿಹೊಳಿ ಜತೆ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿರುವ ಕುಮಾರಸ್ವಾಮಿ, ದೂರವಾಣಿ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.