ತ.ನಾ.ನ ಉಪಟಳಕ್ಕೆ ತಾತ್ಕಾಲಿಕ ತಡೆ- ಕಾವೇರಿ ನೀರು ಬಿಡುಗಡೆಗೆ ನಿರ್ದೇಶನ ನೀಡದ ಪ್ರಾಧಿಕಾರ
Team Udayavani, Feb 2, 2024, 12:06 AM IST
ಬೆಂಗಳೂರು: ಕಾವೇರಿ ನದಿ ನೀರಿಗಾಗಿ ಕರ್ನಾಟಕವನ್ನು ನಿರಂತರ ಕಾಡುತ್ತಿದ್ದ ತಮಿಳುನಾಡಿನ ಉಪಟಳಕ್ಕೆ ತಾತ್ಕಾಲಿಕ ತಡೆ ಬಿದ್ದಿದ್ದು, ಪ್ರಸಕ್ತ ಸಾಲಿನ ನೀರಾವರಿ ಅವಧಿ ಅಂತ್ಯಗೊಂಡ ಗುರುವಾರ ಎರಡೂ ರಾಜ್ಯಗಳ ಜಲಾಶಯ ಗಳ ಉಪಯುಕ್ತ ನೀರಿನ ಸಂಗ್ರಹ ವನ್ನು ಪರಿಗಣಿಸಿ ಕರ್ನಾಟಕ ನೀರು ಬಿಡಬೇಕೆಂದು ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಯಾವುದೇ ನಿರ್ದೇಶನಗಳನ್ನೂ ನೀಡಲಿಲ್ಲ.
ಗುರುವಾರ ನಡೆದ ಪ್ರಾಧಿಕಾರದ ಸಭೆಯ ಮುಂದೆ ತಮಿಳುನಾಡು ಅಧಿಕಾರಿಗಳು, ಕರ್ನಾಟಕವು ಈವರೆಗೆ ಬಿಡಬೇಕಿರುವ 7.61 ಟಿಎಂಸಿ ಬಾಕಿ ಸಹಿತ 2024ರ ಮೇ ಅಂತ್ಯದವರೆಗೆ 18 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿತು.
ಇದಕ್ಕೆ ಆಕ್ಷೇಪಿಸಿರುವ ಕರ್ನಾಟಕವು, 2023ರ ಜೂನ್ 1ರಿಂದ 2024ರ ಜ.29ರ ವರೆಗೆ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಶೇ.52.44ರಷ್ಟು ಒಳಹರಿವಿನ ಕೊರತೆಯಿದ್ದು, ಪ್ರಸಕ್ತ ಜಲ ವರ್ಷದಲ್ಲಿ ತಮಿಳು ನಾಡಿಗಿಂತ ಕರ್ನಾಟಕವೇ ಹೆಚ್ಚು ಸಂಕಷ್ಟವನ್ನು ಅನುಭವಿ ಸಿದೆ. ಬಿಳಿಗುಂಡ್ಲು ತಲುಪಲು ಕರ್ನಾಟಕವು ತನ್ನ ಜಲಾಶಯ ಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಮಿತಿಯು ಈ ಹಿಂದೆ ನೀಡಿದ್ದ ನಿರ್ದೇಶನಗಳನ್ನು ಪ್ರಾಧಿಕಾರ ಮರುಪರಿಶೀಲಿಸಬೇಕೆಂದು ಕರ್ನಾಟಕ ಮನವಿ ಮಾಡಿತು. ಕೊನೆಗೆ 2024ರ ಜ.31ರಂದು ಎರಡೂ ರಾಜ್ಯಗಳ ಜಲಾಶಯಗಳಲ್ಲಿರುವ ಉಪಯುಕ್ತ ಸಂಗ್ರಹ (ಲೈವ್ ಸ್ಟೋರೇಜ್)ವನ್ನು ಪರಿಗಣಿಸಿ, ನೀರು ಬಿಡುಗಡೆಗೆ ಯಾವುದೇ ನಿರ್ದೇಶನ ನೀಡಿಲ್ಲ. ಇದರಿಂದ ಕರ್ನಾಟಕವು ನಿಟ್ಟುಸಿರು ಬಿಡುವಂತಾಗಿದೆ.