ಗುಳೇದಗುಡ್ಡ: ಶಾಲಾ ಮಕ್ಕಳ ಮೇಲೆ ನಿತ್ಯ ಬೀಳುತ್ತವೆ ಕಲ್ಲು
ಶಾಲಾ ಮಕ್ಕಳಿಗೆ ಭಾನಾಮತಿ ಕಾಟ
Team Udayavani, Sep 13, 2019, 9:00 PM IST
ಗುಳೇದಗುಡ್ಡ: ತಾಲೂಕಿನ ಇಂಜನವಾರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮೇಲೆ ನಿತ್ಯ ಕಲ್ಲು ಬೀಳುತ್ತಿದ್ದು, ಇದರಿಂದ ಶಿಕ್ಷಕರು ಹಾಗೂ ಮಕ್ಕಳು ಭಯಗೊಂಡಿದ್ದಾರೆ. ಇದರಿಂದ ಬೇಸತ್ತು ಮೂರು ದಿನಗಳ ವರೆಗೆ ಶಾಲೆಗೆ ರಜೆ ನೀಡಲಾಗಿದೆ.
ಇಂಜನವಾರಿಯ ಈ ಶಾಲೆಯಲ್ಲಿ ಕಳೆದ ಹಲವು ದಿನಗಳಿಂದ ಮಕ್ಕಳ ಮೇಲೆ ಕಲ್ಲು ಬೀಳುತ್ತಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪೊಲೀಸರು ಪರೀಕ್ಷಿಸಿದ್ದಾರೆ. ಸ್ವತಃ ಡಿಡಿಪಿಐ ಬಿ.ಎಚ್. ಗೋನಾಳ, ಗುಳೇದಗುಡ್ಡ ಪಿಎಸ್ಐ ಬಸವರಾಜ ಲಮಾಣಿ ಭೇಟಿ ನೀಡಿದಾಗಲೂ ಮಕ್ಕಳ ಮೇಲೆ ಕಲ್ಲು ಬಿದ್ದಿದ್ದವು. ಶುಕ್ರವಾರದಿಂದ ಶಾಲೆಗೆ ಮೂರು ದಿನ ಕಾಲ ರಜೆ ಘೋಷಿಸಿದ್ದರೂ, ಮಕ್ಕಳು ಮನೆಯಲ್ಲಿ ಕೂಡದೇ ಶಾಲೆಗೆ ಬಂದಿದ್ದರು. ಹೀಗಾಗಿ ಶುಕ್ರವಾರವೂ ಮಕ್ಕಳ ಮೇಲೆ ಕಲ್ಲು ಬಿದ್ದಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಹುಲಿಕಲ್ ನಟರಾಜ ಕರೆಸಲು ನಿರ್ಧಾರ :
ಶಾಲೆಯ ಮಕ್ಕಳ ಮೇಲೆ ನಿರಂತರ ಕಲ್ಲು ಬೀಳುತ್ತಿರುವುದರಿಂದ ಖ್ಯಾತ ಪವಾಡ ರಹಸ್ಯ ಬಯಲು ಕಾರ್ಯಕ್ರಮದ ರೂವಾರಿ ಹುಲಿಕಲ್ ನಟರಾಜ್ ಅವರನ್ನು ಕರೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.