ಹಳೆಯಂಗಡಿ ಮುಖ್ಯ ಜಂಕ್ಷನ್ನ ಮುಗಿಯದ ಗೋಳು
ರಸ್ತೆಯಲ್ಲೇ ಮಳೆ ನೀರು , ಶಾಶ್ವತ ಪರಿಹಾರಕ್ಕೆ ಆಗ್ರಹ
Team Udayavani, Jun 11, 2020, 5:45 AM IST
ಹಳೆಯಂಗಡಿ: ಇಲ್ಲಿನ ರಾ.ಹೆ. 66ರ ಹಳೆಯಂಗಡಿಯ ಮುಖ್ಯ ಜಂಕ್ಷನ್ನಲ್ಲಿ ಮಳೆಗಾಲದಲ್ಲಿ ರಸ್ತೆಯಲ್ಲಿಯೇ ಮಳೆ ನೀರು ನಿಂತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಈ ಅವ್ಯವಸ್ಥೆಯ ಗೋಳು ಮಗಿಯದಾಗಿದೆ ಎಂದು ಹೆದ್ದಾರಿ ಇಲಾಖೆಯ ಮೇಲೆ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಚತುಷ್ಪಥ ಕಾಮಗಾರಿ ನಡೆದ ಅನಂತರ ಮಳೆಗಾಲ ಆರಂಭವಾದ ತತ್ಕ್ಷಣ ಇಲ್ಲಿನ ಪ್ರಮುಖ ಜಂಕ್ಷನ್ನಪಕ್ಷಿಕೆರೆ ರಸ್ತೆಯ ತಿರುವಿನಲ್ಲಿ ಬೃಹದಾಕಾರದ ಹೊಂಡಗಳು ಸೃಷ್ಟಿ ಯಾಗುವುದು ಸಾಮಾನ್ಯವಾಗಿದೆ. ಹೊಂಡಕ್ಕೆ ಆಗಾಗ ಕಲ್ಲು ಮಣ್ಣು ಹಾಕಿ ತಾತ್ಕಾಲಿಕವಾಗಿ ಮುಚ್ಚಿದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಈವರೆಗೂ ಸಾಧ್ಯವಾಗಿಲ್ಲ. ರಿಕ್ಷಾ ಹಾಗೂ ದ್ವಿಚಕ್ರ ವಾಹಗಳು ಹೊಂಡಕ್ಕೆ ಇಳಿಸಿಯೇ ಚಲಿಸಬೇಕಾದ ಅನಿವಾರ್ಯತೆ, ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಂದ ಪಾದಚಾರಿಗಳಿಗೆ ನೀರು ಚಿಮ್ಮುವ ಆತಂಕವಿದೆ. ಮುಕ್ಕ ಜಂಕ್ಷನ್ನಿಂದ ಹಳೆಯಂಗಡಿ ಜಂಕ್ಷನ್ನವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ ಚರಂಡಿ ಇಲ್ಲದೇ ಇರುವುದರಿಂದ ಮಳೆ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದೆ.ಈ ಭಾಗದಲ್ಲಿ ಸರ್ವಿಸ್ ರಸ್ತೆ ರಚನೆಯಾಗುತ್ತದೆ ಎಂದು ಈ ಹಿಂದೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ಕಾಮಗಾರಿ ಈವರೆಗೂ ನಡೆದಿಲ್ಲ. ಸುತ್ತುಬಳಸಿ ಜಂಕ್ಷನ್ನಿಂದ ದೂರದಲ್ಲಿ ಹೆದ್ದಾ ರಿಯನ್ನು ದಾಟುವಾಗ ಅಪಾಯವನ್ನು ಎದುರಿ ಸಬೇಕಾಗುತ್ತದೆ.
ತಾತ್ಕಾಲಿಕ ಪರಿಹಾರ
ಮಳೆ ನೀರು ಸರಾಗವಾಗಿ ಹರಿಯಲು ಇಲ್ಲಿ ಚರಂಡಿ ಮಾಡಿದಲ್ಲಿ ಮಾತ್ರ ಪರಿಹಾರ ಸಾಧ್ಯ. ಕಳೆದ ಬಾರಿ
ಹೆದ್ದಾರಿ ಇಲಾಖೆಯ ಎಂಜಿನಿಯರ್ಗೆ ನೇರವಾಗಿ ತಿಳಿಸಿದ್ದೆ. ಆಗ ಕಲ್ಲು ಮಣ್ಣು ತಂದು ತಾತ್ಕಾಲಿಕ ಪರಿಹಾರ ಮಾತ್ರ ನೀಡಿದ್ದರು. ಇಲಾಖೆಯು ಹೆದ್ದಾರಿಗೆ ಪಡೆದುಕೊಂಡಿರುವ ಸ್ಥಳದಲ್ಲಿ ಚರಂಡಿ ನಿರ್ಮಿಸಲು ಸಂಸದರ ಮೂಲಕ ಇಲಾಖೆಗೆ ಒತ್ತಡ ಹಾಕುವ ಪ್ರಯತ್ನ ನಡೆಸುತ್ತೇನೆ.
-ವಿನೋದ್ಕುಮಾರ್ ಬೊಳ್ಳೂರು
ಸದಸ್ಯರು, ಜಿ.ಪಂ.