ಲಂಚ ನೀಡದ್ದಕ್ಕೆ ಪರಿಹಾರ ನೀಡದ ಅಧಿಕಾರಿ !
Team Udayavani, Jan 26, 2021, 4:51 PM IST
ಬಾಗಲಕೋಟೆ: ರೈತರು ಪರಿಹಾರಧನದ ಚೆಕ್ ಪಡೆಯಲು ಲಂಚ ಕೊಡದ ಕಾರಣ ಬರೋಬ್ಬರಿ 4 ಕೋಟಿ ರೂ. ಪರಿಹಾರಧನದ ಚೆಕ್ಗಳನ್ನು ಯುಕೆಪಿ ಕಚೇರಿಯ ಅಧಿಕಾರಿಯೊಬ್ಬರು ತಮ್ಮ ಬಳಿಯೇ ಇಟ್ಟುಕೊಂಡು ರೈತರಿಗೆ
ಸತಾಯಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಹೌದು, ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಚೇರಿಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ವಿಷಯ ನಿರ್ವಾಹಕಿ ಆಗಿರುವ ಕುಮಾರಿ ಸುನಂದಬಾಯಿ ತೆಗ್ಗಿ, ಸೋಮವಾರ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ರೈತರೊಬ್ಬರಿಂದ 4 ಸಾವಿರ ನಗದು ಪಡೆಯುವ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಈ ಪ್ರಕರಣದ ಆಳಕ್ಕಿಳಿದ ಎಸಿಬಿ ಅಧಿಕಾರಿಗಳಿಗೆ ಮತ್ತಷ್ಟು ಭ್ರಷ್ಟಾಚಾರ ಕಂಡು ಬಂದಿದ್ದು, ಕೂಡಲೇ ರೈತರಿಗೆ ನೀಡಬೇಕಾದ ಪರಿಹಾರ ಧನ ನೀಡಲು ಸೂಚಿಸಿದ್ದಾರೆ.
ಏನಿದು ಪ್ರಕರಣ?: ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ರೈತ ಸಂಗಪ್ಪ ಹಿರಾಳ ಎಂಬುವರಿಗೆ ಸೇರಿದ ಬಸರಿಕಟ್ಟಿಯ 16 ಗುಂಟೆ ಭೂಮಿ ಯುಕೆಪಿ ಯೋಜನೆಯಡಿ ಕಾಲುವೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ಭೂಮಿಗೆ ಒಟ್ಟು 3,43,281 ರೂ. ಪರಿಹಾರಧನ ನೀಡಬೇಕಿದ್ದು, ಈ ಹಣ ನೀಡಲು ಯುಕೆಪಿ ಕಚೇರಿಯ ಲೆಕ್ಕಾಧಿಕಾರಿ ವಿಭಾಗದ ವಿಷಯ ನಿರ್ವಾಹಕಿ ಸುನಂದಾಬಾಯಿ ತೆಗ್ಗಿ 4 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಸೋಮವಾರ ರೈತ ಸಂಗಪ್ಪ ಅವರ ಪುತ್ರ ಶಿವಕುಮಾರ ಅವರಿಂದ 4 ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಲಂಚದ ಹಣ ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ರೈತರಿಗೆ ಇದೇ ಹಲವಾರು ಪರಿಹಾರ ನೀಡಬೇಕಿದ್ದು, ಅಧಿಕಾರಿಗಳು ಚೆಕ್ ನೀಡದೇ ಲಂಚಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ಆರೋಪ ದಾಳಿಯ ವೇಳೆ ಕೇಳಿ ಬಂದಿದೆ. ಹೀಗಾಗಿ ಎಸಿಪಿ
ಅಧಿಕಾರಿಗಳು, ತಪಾಸಣೆ ನಡೆಸಿದ್ದ ಆಗ ಒಟ್ಟು 70 ಜನ ರೈತ ಫಲಾನುಭವಿಗಳಿಗೆ 56 ಚೆಕ್ ನೀಡಬೇಕಿದ್ದು, ಒಟ್ಟು 4,61,46,310 ರೂ. ಮೊತ್ತದ ಚೆಕ್ಗಳನ್ನು ಕಚೇರಿಯಲ್ಲೇ ಇಟ್ಟುಕೊಂಡಿದ್ದು ಕಂಡು ಬಂತು.
ಇದನ್ನೂ ಓದಿ:ಗಂಗಾವತಿಯಲ್ಲಿ ಟ್ರಾಕ್ಟರ್ ರಾಲಿಗೆ ಪೊಲೀಸರ ತಡೆ: ರಸ್ತೆಯಲ್ಲಿ ಪ್ರತಿಭಟನೆ
ಆಗ ಕೂಡಲೇ ಸಂಬಂಧಿಸಿದ ರೈತರಿಗೆ ಈ ಪರಿಹಾರ ಧನದ ಚೆಕ್ ನೀಡಲು ಎಸಿಬಿ ಅಧಿಕಾರಿಗಳು ಸೂಚನೆ ಕೂಡ ನೀಡಿದ್ದಾರೆ.
ದಾಳಿಯ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಬೆಳಗಾವಿ ಉತ್ತರ ವಲಯದ ಪೊಲೀಸ್ ಅಧೀಕ್ಷ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಂಜುನಾಥ ಗಂಗಲ್, ಪೊಲೀಸ್ ಇನ್ಸ್ಪೆಕ್ಟರ್ಗಳಾದ ವಿಶ್ವನಾಥ ಚೌಗಲಾ, ಸಮೀರ ಮುಲ್ಲಾ,
ಸಿಬ್ಬಂದಿ ಎಚ್.ಎಸ್.ಹೂಗಾರ, ಬಿ.ಬಿ. ಕಾಖಂಡಕಿ, ಬಿ.ಎಚ್. ಮುಲ್ಲಾ, ಎಚ್ .ಎ. ಪೂಜಾರಿ, ಎಸ್.ಎಸ್. ರಾಠೊಡ, ಸಿ.ಎಸ್. ಅಚನೂರ, ಶಶಿಧರ ಚರ್ಚುಳ, ಬಿ.ಎಸ್.ಪಾಟೀಲ, ಎಂ.ಎಸ್.ಹಂಗರಗಿ ಮುಂತಾದವರು ಪಾಲ್ಗೊಂಡಿದ್ದರು.