ರಾಣಿ ಚನ್ನಮ್ಮ ಎಕ್ಸ್ಪ್ರೆಸ್ ರೈಲಿನ ಬೆಸುಗೆಯ “ಬೆಳ್ಳಿ’ ಓಟ
Team Udayavani, Aug 17, 2019, 3:07 AM IST
ಹುಬ್ಬಳ್ಳಿ: ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಜನತೆಯ ಸಂಚಾರ ವಿಚಾರದಲ್ಲಿ ಭಾವನಾತ್ಮಕ ಸಂಬಂಧ ಹೊಂದಿರುವ, ಶೌರ್ಯ-ಸಾಹಸದ ಸಂಕೇತದ ಹೆಸರು ಹೊತ್ತ ರಾಣಿ ಚನ್ನಮ್ಮ ಎಕ್ಸ್ಪ್ರೆಸ್ ರೈಲು ಇದೀಗ ರಜತ ಸಂಭ್ರಮದಲ್ಲಿದೆ. ಈ ರೈಲಿನ ಮೂಲ ಕೆದಕಿದರೆ ಸರಿಸುಮಾರು 8 ದಶಕಗಳ ಇತಿಹಾಸ ಕಾಣ ಸಿಗುತ್ತದೆ.
ರಾಣಿ ಚನ್ನಮ್ಮ ರೈಲು ಸುಮಾರು 24 ವರ್ಷಗಳಿಂದ ಸಂಚರಿಸುತ್ತಿದೆ. ಆದರೆ, ಈ ರೈಲಿನ ಮೂಲಕ್ಕೆ ಹೋದರೆ 1940ರಿಂದಲೇ ಸಂಚರಿಸುತ್ತಿದೆ ಎಂಬುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಬ್ರಿಟಿಷ್ ಆಡಳಿತದಲ್ಲಿ 1940ರ ಸುಮಾರಿಗೆ ಮೀಟರ್ ಗೇಜ್ನಲ್ಲಿ ಈ ರೈಲು ಪುಣೆ-ಬೆಂಗಳೂರು ಮಧ್ಯೆ ಸಂಚರಿಸುತ್ತಿತ್ತು. ಸರಕು ಸಾಗಣೆ ಹಾಗೂ ಪ್ರಯಾಣದ ದೃಷ್ಟಿಯಿಂದ ಬ್ರಿಟಿಷ್ ಆಡಳಿತ ಈ ರೈಲು ಸಂಚಾರ ಆರಂಭಿಸಿತ್ತು. ಮುಂದಿನ ದಿನಗಳಲ್ಲಿ ಇದೇ ರೈಲು ಕೆಲವೊಂದು ಬದಲಾವಣೆಯೊಂದಿಗೆ ಮಹಾರಾಷ್ಟ್ರದ ಮಿರಜ್ನಿಂದ ಬೆಂಗಳೂರುವರೆಗೆ ಸಂಚರಿಸತೊಡಗಿತು. ನಂತರ ಕೊಲ್ಲಾಪುರಕ್ಕೆ ವಿಸ್ತರಿಸಲಾಯಿತು.
ಜಾಫರ್ ಶರೀಫ್ ಕೊಡುಗೆ: 90ರ ದಶಕದವರೆಗೂ ರೈಲ್ವೆ ಸೌಲಭ್ಯಗಳ ವಿಚಾರದಲ್ಲಿ ಕರ್ನಾಟಕ ಹಿಂದುಳಿದ ರಾಜ್ಯವಾಗಿಯೇ ಗುರುತಿಸಿಕೊಂಡಿತ್ತು. ರಾಜ್ಯದವರಾದ ಜಾಫರ್ ಶರೀಫ್ 1991-95ರವರೆಗೆ ಪಿ.ವಿ. ನರಸಿಂಹರಾವ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರೈಲ್ವೆ ಸಚಿವ ಸ್ಥಾನ ವಹಿಸಿಕೊಂಡ ಮೇಲೆ ರೈಲ್ವೆ ಸೌಲಭ್ಯ ವಿಚಾರದಲ್ಲಿ ಕರ್ನಾಟಕದ ಚಿತ್ರಣವೇ ಬದಲಾಯಿತು.
90ರ ದಶಕದವರೆಗೆ ರಾಜ್ಯದಲ್ಲಿ ಬಹುತೇಕ ರೈಲ್ವೆ ಮಾರ್ಗಗಳು ಮೀಟರ್ ಗೇಜ್ನಲ್ಲಿಯೇ ಇದ್ದವು. ಒಂದಾದ ನಂತರ ಒಂದರಂತೆ ಬ್ರಾಡ್ಗೆಜ್ಗೆ ಪರಿವರ್ತನೆ ಹೊಂದಿದವು. ಈ ಕಾಲಘಟ್ಟದಲ್ಲೇ ಪುಣೆ-ಬೆಂಗಳೂರು ರೈಲ್ವೆ ಮಾರ್ಗ ಸಹ ಮೀಟರ್ ಗೇಜ್ನಿಂದ ಬ್ರಾಡ್ಗೆಜ್ನತ್ತ ಸಾಗಿತು. 1994-95ರ ಸುಮಾರಿಗೆ ರಾಣಿ ಚನ್ನಮ್ಮ ರೈಲು ಎಂಬ ಹೆಸರಿನ ರೈಲು ಮಿರಜ್-ಬೆಂಗಳೂರು ನಡುವೆ ಸಂಚರಿಸತೊಡಗಿತು. 2002ರವರೆಗೂ ಮಿರಜ್-ಬೆಂಗಳೂರು ನಡುವೆ ಇದ್ದ ಈ ರೈಲು ಸಂಚಾರವನ್ನು 2002ರಲ್ಲಿ ರೈಲ್ವೆ ಬಜೆಟ್ನಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ವರೆಗೆ ವಿಸ್ತರಿಸಲಾಗಿತ್ತು. ನಂತರ, ಈ ರೈಲು ಮಿರಜ್ ಬದಲು ಕೊಲ್ಲಾಪುರವರೆಗೆ ಇಂದಿಗೂ ಸಂಚರಿಸುತ್ತಿದೆ.
ಭಾವನಾತ್ಮಕ ರೈಲು: ರಾಣಿ ಚನ್ನಮ್ಮ ರೈಲು (ಸಂಖ್ಯೆ 16589/16590) ಕೇವಲ ಸಂಚಾರದ ಸಾಧನವಾಗಿ ಗುರುತಿಸಿಕೊಂಡಿಲ್ಲ. ಬದಲಾಗಿ ಅದೆಷ್ಟೋ ಜನರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದೆ. ರಾಣಿ ಚನ್ನಮ್ಮ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಪ್ರತಿದಿನ ರಾತ್ರಿ 9:15ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 1:40ಗಂಟೆಗೆ ಕೊಲ್ಲಾಪುರ ತಲುಪುತ್ತದೆ. ಅದೇ ರೀತಿ ಕೊಲ್ಲಾಪುರ ಛತ್ರಪತಿ ಶಾಹು ಮಹಾರಾಜ ರೈಲ್ವೆ ನಿಲ್ದಾಣದಿಂದ ನಿತ್ಯ ಮಧ್ಯಾಹ್ನ 2:05 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 6:45 ಗಂಟೆಗೆ ಬೆಂಗಳೂರು ತಲುಪುತ್ತದೆ.
ಒಟ್ಟಾರೆ 16 ತಾಸು 25 ನಿಮಿಷದಿಂದ, 16 ತಾಸು 40 ನಿಮಿಷದವರೆಗೂ ಈ ರೈಲು ಸುಮಾರು 797 ಕಿಮೀ ಅಂತರ ಕ್ರಮಿಸುತ್ತದೆ. ಸರಾಸರಿ 3,000ಕ್ಕೂ ಅಧಿಕ ಪ್ರಯಾ ಣಿಕರನ್ನು ಸಾಗಿಸುತ್ತದೆ. 11 ಸ್ಲಿಪರ್ ಕೋಚ್, 4 ಜನರಲ್ ಕೋಚ್, 2 ಎಸ್ಎಲ್ರ್, ಹವಾನಿಯಂತ್ರಿತ ಸೇರಿದಂತೆ ಒಟ್ಟು 23 ಬೋಗಿಗಳೊಂದಿಗೆ ಸಾಗುತ್ತದೆ. ಒಟ್ಟು 29 ಕಡೆ ನಿಲುಗಡೆ ಸೌಲಭ್ಯ ಹೊಂದಿದೆ. ಬೆಂಗಳೂರು, ತುಮಕೂರು, ತಿಪಟೂರು, ಅರಸಿಕೆರೆ, ಕಡೂರು, ಬಿರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ, ರಾಯಭಾಗ, ಕುಡಚಿ, ಮಿರಜ್ ಮಾರ್ಗವಾಗಿ ಕೊಲ್ಲಾಪುರಕ್ಕೆ ಸಂಚರಿಸುತ್ತದೆ.
ರಾಣಿ ಚನ್ನಮ್ಮ ರೈಲಿನ (ಸಂಖ್ಯೆ 16590) ಎಲ್ಲ ಬೋಗಿಗಳನ್ನು ಅತ್ಯಾಕರ್ಷಕಗೊಳಿಸಲಾಗಿದೆ. ಎಚ್-1, ಎ-1 ಬೋಗಿಗಳಲ್ಲಿ ಹೂ ಕುಂಡಗಳನ್ನು ಇರಿಸಲಾಗಿದ್ದು, ದೇಶದ ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ಸ್ಲಿಪರ್ ಕೋಚ್ಗಳ ಒಳಪ್ರವೇಶ ವೇಳೆ ಚಿತ್ರಗಳನ್ನು ರೂಪಿಸಲಾಗಿದೆ. ಸಂಖ್ಯೆ 16589 ರೈಲು ಅರ್ಧ ಭಾಗ ಮಾತ್ರ ಬದಲಾವಣೆ ಕಂಡಿದ್ದು, ಮುಂದಿನ ದಿನಗಳಲ್ಲಿ ಇದು ಸಹ ಪೂರ್ಣ ಪ್ರಮಾಣದಲ್ಲಿ ಆತ್ಯಾಕರ್ಷಕಗೊಳ್ಳಲಿದೆ ಎಂಬುದು ರೈಲ್ವೆ ಇಲಾಖೆ ಮೂಲಗಳ ಅನಿಸಿಕೆ.
ನೈಋತ್ಯ ರೈಲ್ವೆಗೆ ಮಾಹಿತಿಯೇ ಇಲ್ವಂತೆ!: ರಾಣಿ ಚನ್ನಮ್ಮ ರೈಲು ಯಾವಾಗ ನಾಮಕರಣಗೊಂಡಿತು? ಎಷ್ಟು ವರ್ಷಗಳಿಂದ ಈ ರೈಲು ಸಂಚಾರ ಮಾಡುತ್ತಿದೆ? ರೈಲಿನ ವಿಶೇಷತೆ ಏನಾದರೂ ಇದೆಯೇ? ಇದಾವುದಕ್ಕೂ ನೈಋತ್ಯ ರೈಲ್ವೆ ವಲಯದಲ್ಲಿ ಸಮರ್ಪಕ ಮಾಹಿತಿಯೇ ಇಲ್ಲವಂತೆ.
* ಅಮರೇಗೌಡ ಗೋನವಾರ