TMC: ಬಂಗಾಲ ಪಡಿತರ ಹಗರಣ ಕೇಸು: ಟಿಎಂಸಿ ನಾಯಕನ ಬಂಧನ
ಬಂಧನಕ್ಕೆ ಅಡ್ಡಿ ಪಡಿಸಲು ಬೆಂಬಲಿಗರ ಭಾರೀ ಆಕ್ರೋಶ
Team Udayavani, Jan 7, 2024, 12:52 AM IST
ಕೋಲ್ಕತಾ: ಪಶ್ಚಿಮ ಬಂಗಾಲ ಪಡಿತರ ವಿತರಣೆ ಹಗರಣ ಸಂಬಂಧಿಸಿದಂತೆ ಟಿಎಂಸಿ ನಾಯಕ ಶಂಕರ್ ಆಧ್ಯ ಎಂಬವರನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಸಂದೇಶ್ಖಾಲೀಯ ಟಿಎಂಸಿ ಮುಖಂಡ ಶೇಖ್ ಶಾಜಹಾನ್ ನಿವಾಸದ ಮೇಲೆ ಶೋಧ ನಡೆಸಲು ಮುಂದಾದ ಇಡಿ ಅಧಿಕಾರಿಗಳ ಮೇಲೆ ಆತನ ಬೆಂಬಲಿಗರು ದಾಳಿ ನಡೆಸಿದ ಘಟನೆ ಬೆನ್ನಲ್ಲೇ ಈ ಬೆಳವಣಿಗೆ ವರದಿಯಾಗಿದೆ.
ಆತನ ಬೆಂಬಲಿಗರೂ ಕೂಡ ರಸ್ತೆ ಅಡ್ಡಗಟ್ಟಿ ಬಂಧನಕ್ಕೆ ಅಡಚಣೆ ಪಡಿಸಲು ಯತ್ನಿಸಿದ್ದರು. ಆದರೆ, ಇಡಿ ಅಧಿಕಾರಿಗಳ ಜತೆಗಿದ್ದ ಸಿಆರ್ಪಿಎಫ್ ಸಿಬ್ಬಂದಿ ಲಘು ಲಾಠಿ ಪ್ರಹಾರದೊಂದಿಗೆ ಗುಂಪನ್ನು ಚದುರಿಸಿದ್ದಾರೆ. ಪಡಿತರ ಹಗರಣದಲ್ಲಿ ಬಂಧಿತರಾಗಿರುವ ಸಚಿವ ಜ್ಯೋತಿಪ್ರಿಯೊ ಮಲ್ಲಿಕ್ಗೆ ಆಧ್ಯ ಆಪ್ತರೆಂದು ತಿಳಿದುಬಂದಿದ್ದು, ಕೋಲ್ಕತ್ತಾ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಇಡಿ ಅಧಿಕಾರಿಗಳ ಮೇಲೆ ದಾಳಿ ನಡೆದ ಬಳಿಕ ಖಾನ್ ಪರಾರಿಯಾಗಿದ್ದು, ಅವರ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ದಾಳಿಯಲ್ಲಿ ಗಾಯಗೊಂಡಿದ್ದ ಇಡಿ ಅಧಿಕಾರಿಗಳ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.