Udayavani: “ಚಿಗುರು ಚಿತ್ರ” ಮಕ್ಕಳ ಫೋಟೋ ಸ್ಪರ್ಧೆ ಬಹುಮಾನ ವಿತರಣೆ
Team Udayavani, Dec 22, 2023, 12:40 AM IST
ಉಡುಪಿ: ಮಕ್ಕಳಿಗೆ ಹೆತ್ತವರೇ ಪ್ರಪಂಚ ಮತ್ತು ಅವರು ಏನು ಮಾಡುತ್ತಾರೋ ಅದನ್ನೇ ಕಲಿಯುತ್ತಾರೆ. ಹೀಗಾಗಿ ಹೆತ್ತವರು ಮಕ್ಕಳ ಲಾಲನೆ-ಪಾಲನೆ ಸಂದರ್ಭ ಅತ್ಯಂತ ತಾಳ್ಮೆಯಿಂದ ವ್ಯವಹರಿಸಬೇಕಾಗುತ್ತದೆ. ಎಳವೆಯಿಂದಲೇ ಉತ್ತಮ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಿ ಸುಸಂಸ್ಕೃತ ಸತ್ಪಜೆಗಳನ್ನಾಗಿ ಬೆಳೆಸಬೇಕು ಎಂದು ಆದರ್ಶ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಮಲಾ ಚಂದ್ರಶೇಖರ್ ಹೇಳಿದರು.
ಮಣಿಪಾಲದ “ಉದಯವಾಣಿ’ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಉದಯವಾಣಿ ದಿನಪತ್ರಿಕೆಯು ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ “ಚಿಗುರು ಚಿತ್ರ-2023′ ಪ್ರತಿಷ್ಠಿತ ಮಕ್ಕಳ ಫೋಟೋ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಮಕ್ಕಳನ್ನು ಮೊಬೈಲ್, ಟಿವಿಯಿಂದ ದೂರವಿರಿಸಿ, ಕಣ್ಣು, ಮನಸ್ಸಿಗೆ ಆಹ್ಲಾದ ನೀಡುವ ಪ್ರಕೃತಿಯ ಬೆರಗು, ವೈಶಿಷ್ಟ್ಯಗಳ ಬಗ್ಗೆ ತಿಳಿಸಬೇಕು. ಜೀವನದ ಸವಾಲು ಎದುರಿಸಲು ಆತ್ಮಸ್ಥೈರ್ಯ ತುಂಬುವ ಜತೆಗೆ ಗೆದ್ದಾಗ ಪ್ರೋತ್ಸಾಹಿಸಿ, ಸೋತಾಗ ಧೈರ್ಯ ಹೇಳಬೇಕು. ಪ್ರತಿಯೋರ್ವ ಹೆತ್ತವರಿಗೂ ಅವರ ಮಕ್ಕಳು ಚೆಂದವಾಗಿಯೇ ಕಾಣಿಸುತ್ತಾರೆ. ಅಂತಹ ಮುದ್ದು ಮಕ್ಕಳ ಫೋಟೋ ಸ್ಪರ್ಧೆ ಆಯೋಜಿಸುವ ಮೂಲಕ ಮುಗª ಮಕ್ಕಳ ಸಿಹಿ ಸಿಹಿಯಾದ ನಗುವನ್ನು ಎಲ್ಲ ಓದುಗರಿಗೆ ನೀಡಿದ ಹೆಗ್ಗಳಿಗೆ “ಉದಯವಾಣಿ’ಗೆ ಸಲ್ಲುತ್ತದೆ ಎಂದರು.
ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ ಅವರು ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು.
ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿ.ನ ಎಂಡಿ ಮತ್ತು ಸಿಇಒ ವಿನೋದ್ ಕುಮಾರ್ ಅವರು ಮಾತನಾಡಿ, ಮುಗ್ಧ ಮಕ್ಕಳ ಮನಸ್ಸಿನಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ಮಕ್ಕಳ ಸಂತೋಷಕ್ಕೆ ಪೂರಕವಾಗಿ ಹೆತ್ತವರು ಸ್ಪಂದಿಸುತ್ತ ಅವರ ಬಾಳಿಗೆ ಬೆಳಕಾಗಬೇಕು. ಇಂದಿನ ಮಕ್ಕಳು ಮುಂದೆ ಉನ್ನತ ಹುದ್ದೆಗಳನ್ನು ಅಲಂಕರಿಸುವುದಲ್ಲದೆ, ವಿಜ್ಞಾನಿಗಳೂ ಆಗಬಹುದು. ಅವರಿಗೆ ಚಿಕ್ಕಂದಿನಿಂದಲೇ ಸ್ಪರ್ಧಾತ್ಮಕ, ಸದೃಢವಾಗಿ ಬೆಳೆಯಲು ದಾರಿ ಮಾಡಿಕೊಡಲು ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿವೆ. “ಉದಯವಾಣಿ’ ಹಲವು ಸಮಾಜಮುಖೀ ಹಾಗೂ ಸ್ಪರ್ಧಾತ್ಮಕ ಕಾರ್ಯಕ್ರಮಗಳೊಂದಿಗೆ ಓದುಗರ ಮನಸ್ಸನ್ನು ಸಂತೈಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬರುತ್ತಿದೆ ಎಂದರು.
ಎಂಎಂಎನ್ಎಲ್ ಉಪಾಧ್ಯಕ್ಷ (ನ್ಯಾಶನಲ್ ಹೆಡ್-ಮ್ಯಾಗಜಿನ್ ಆ್ಯಂಡ್ ಸ್ಪೆಶಲ್ ಇನೀಶಿಯೇಟಿವ್ಸ್) ರಾಮಚಂದ್ರ ಮಿಜಾರು ನಿರೂಪಿಸಿ, 53 ವರ್ಷಗಳಿಂದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ಮೂಲಕ ಉದಯವಾಣಿ ನಿರಂತರವಾಗಿ ಓದುಗರೊಂದಿಗೆ ಬೆರೆತು ಹೋಗಿದೆ. ಈ ಸ್ಪರ್ಧೆಯ ಮೂಲಕ ನಮ್ಮೆಲ್ಲ ಓದುಗರಿಗೆ ತಮ್ಮ ಸಿಹಿ ನೆನಪುಗಳನ್ನು ಹಾಗೂ ಮಧುರ ಬಾಂಧವ್ಯವನ್ನು ನೆನಪಿಸುವ ಅವಕಾಶವನ್ನು ಒದಗಿಸಿದೆ ಎಂದರು.
ಮಾನವ ಸಂಪದ ವಿಭಾಗದ ಮ್ಯಾನೇಜರ್ ಉಷಾರಾಣಿ ಕಾಮತ್ ಸ್ವಾಗತಿಸಿದರು. ಪ್ರಸರಣ ಮತ್ತು ಉತ್ಪನ್ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಸತೀಶ್ ಶೆಣೈ ವಂದಿಸಿದರು.
ಬಹುಮಾನ ವಿಜೇತ ಮಕ್ಕಳು
ಕಾರ್ಕಳ ರೆಂಜಾಳದ ಆರವ್ ಶೆಣೈ ಪ್ರಥಮ, ಮಂಗಳೂರು ಕೂಳೂರಿನ ಹಿನಾಲ್ ಡಿ. ಸುವರ್ಣ ದ್ವಿತೀಯ, ಮಂಗಳೂರು ಹೊಗೆಬೈಲು ಕೆ. ಆಕಾಂಕ್ಷಾ ಪ್ರಭು ತೃತೀಯ, ಮಂಗಳೂರು ಗುಂಡಿಯಲ್ಕೆಯ ಭಕ್ತಿಪ್ರಿಯ ಎ. ಭಂಡಾರಿ, ಮಂಗಳೂರಿನ ಆಯುಕ್ತ್ ಅಜಿತ್ ಡಿ., ಚೇರ್ಕಾಡಿಯ ಅನ್ಶೂಲ್ ಪಿ. ಆಚಾರ್ಯ, ಉಡುಪಿಯ ರಿದ್ಧಿ ಭಟ್ ಮತ್ತು ಕುಂದಾಪುರ ಕೋಣಿಯ ಅಹನ್ಯಾ ಜಿ. ದೇವಾಡಿಗ ಸಮಾಧಾನಕರ ಬಹುಮಾನ ಪಡೆದರು.
“ಉದಯವಾಣಿ’ ಪತ್ರಿಕೆಯ ಮೇಲಿರುವ ಅಭಿಮಾನದಿಂದ ಈ ಸ್ಪರ್ಧೆಯಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇವೆ. ಬಹುಮಾನ ಬಂದಿರುವುದಕ್ಕಿಂತ ಮಗುವಿನ ಭಾವಚಿತ್ರ ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದು ಖುಷಿ ಕೊಟ್ಟಿದೆ.
-ಅಶೋಕ್ ಗುಂಡಿಯಲ್ಕೆ, ಮಂಗಳೂರು
ಉದಯವಾಣಿ ಆಯೋಜಿಸಿದ ಈ ಸ್ಪರ್ಧೆಯ ಫಲಿತಾಂಶಕ್ಕಾಗಿ ನ. 14ರ ಮುಂಜಾನೆ ಪತ್ರಿಕೆಗಾಗಿ ಕಾಯುತ್ತಿದ್ದೆ. ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಪತ್ರಿಕೆ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ.
– ಶ್ರೇಯಾ ಸಿ. ಸಾಲ್ಯಾನ್
ಬಹುಮಾನ ಬಂದಿರುವುದಕ್ಕೆ ತುಂಬಾ ಆನಂದವಾಗಿದೆ. ನಮ್ಮ ಮಗುವಿಗೆ ಬಹುಮಾನ ಬರುತ್ತದೆ ಎಂದು ಗೊತ್ತಿರಲಿಲ್ಲ. ಇದು ನಮಗೆ ಅತ್ಯಂತ ಹೆಮ್ಮೆ ತಂದಿದೆ.
– ದಿವ್ಯಾ ಬಿ. ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ