Uttarakhand: ಮದರಸಾ ತೆರವು ವೇಳೆ ಗಲಾಟೆ, ಹಿಂಸಾಚಾರ: ಕಂಡಲ್ಲಿ ಗುಂಡಿಕ್ಕಲು ಆದೇಶ
Team Udayavani, Feb 8, 2024, 11:39 PM IST
ಡೆಹ್ರಾಡೂನ್: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮದರಸವನ್ನು ತೆರವುಗೊಳಿಸುವ ವೇಳೆ ಪೊಲೀಸರ ಮೇಲೆಯೇ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿ, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ಗುರುವಾರ ವರದಿಯಾಗಿದೆ. ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಲಾಗಿದೆ. ಅಕ್ರಮವಾಗಿ ನಿರ್ಮಾಣ ಗೊಂಡಿರುವ ಮದರಸವನ್ನು ತೆರವುಗೊಳಿಸಲು ಸ್ಥಳೀಯಾಡಳಿತ ಆದೇಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ನಗರಪಾಲಿಕೆ ಅಧಿಕಾರಿಗಳು, ಪೊಲೀಸರು ಹಾಗೂ ಪತ್ರಕರ್ತರು ಸ್ಥಳಕ್ಕೆ ತರೆಳಿದ್ದರು. ಮದರಸ ಕೆಡವಲು ಜೆಸಿಬಿ ಮುಂದಾಗುತ್ತಿದ್ದಂತೆಯೇ ಗುಂಪೊಂದು ಪೊಲೀಸರತ್ತ ಕಲ್ಲುಗಳನ್ನು ಎಸೆದು ಹಲ್ಲೆ ಮಾಡಿದೆ. ಪೊಲೀಸರು ಅಶ್ರುವಾಯು ಪ್ರಯೋಗಿಸಿದರೂ ಜಗ್ಗದ ಗುಂಪು ವಾಹನಗಳಿಗೂ ಬೆಂಕಿ ಹಚ್ಚಿ, ಅಟ್ಟಹಾಸ ಮೆರೆದಿದೆ. ಘಟನೆಯಲ್ಲಿ 50ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದು, ಅಧಿಕಾರಿಗಳೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.