ಜೈಲಿನಲ್ಲಿ ವಿನಯ ಕುಲಕರ್ಣಿ ಭೇಟಿಯಾದ ಕುಟುಂಬಸ್ಥರು
Team Udayavani, Dec 11, 2020, 10:21 AM IST
ಸಾಂದರ್ಭಿಕ ಚಿತ್ರ
ಬೆಳಗಾವಿ: ಧಾರವಾಡದ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಕುಟುಂಬಸ್ಥರು ಗುರುವಾರ ಸಂಜೆ ಭೇಟಿಯಾದರು. ವಿನಯ ಕುಲಕರ್ಣಿ ಭೇಟಿಯಾಗಲು ಬಂದಿದ್ದ
ಕುಟುಂಬಸ್ಥರು ತಾವು ತಂದಿದ್ದ ಆಹಾರವನ್ನು ನೀಡಿದರು. ಸುಮಾರು 31 ದಿನಗಳ ಬಳಿಕ ಕುಟುಂಬಸ್ಥರನ್ನು ಕಂಡು ವಿನಯ ಭಾವುಕರಾದರು.
ವಿನಯ ಕುಟುಂಬಸ್ಥರು ಡಿ.10ರಂದು ಸಂಜೆ 4ರಿಂದ 5 ಗಂಟೆಯವರೆಗೆ ಭೇಟಿಯಾಗಲು ಧಾರವಾಡದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಗಮಿಸಿದ್ದರು. ವಿನಯ ಅವರ ಪತ್ನಿ
ಶಿವಲೀಲಾ ಕುಲಕರ್ಣಿ, ಪುತ್ರಿಯರಾದ ವೈಶಾಲಿ, ದೀಪಾಲಿ ಹಾಗೂ ಪುತ್ರ ಹೇಮಂತ ಭೇಟಿಯಾದರು.
ಧಾರವಾಡದಿಂದ ಸಂಜೆ ನಾಲ್ಕು ಗಂಟೆಗೆ ಆಗಮಿಸಿದ್ದ ಕುಟುಂಬಸ್ಥರು, ಜೈಲಿನೊಳಗೆ ತೆರಳಿ ವಿನಯ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಒಂದು ಗಂಟೆ ಸಮಯಾವಕಾಶ ಮುಗಿದ ಬಳಿಕ ಕುಟುಂಬಸ್ಥರು ಹೊರ ಬಂದರು.
ಇದನ್ನೂ ಓದಿ:ವಿಶ್ವದ ಬೃಹತ್ ಸ್ಟೇಡಿಯಂನಲ್ಲಿ ನಡೆಯಲಿದೆ ಭಾರತ- ಇಂಗ್ಲೆಂಡ್ ಪಿಂಕ್ ಬಾಲ್ ಟೆಸ್ಟ್
ಯೋಗೀಶಗೌಡ ಹತ್ಯೆ ಪ್ರಕರಣ; ಸಿಬಿಐ ತನಿಖೆ ಮತ್ತೆ ಚುರುಕು
ಧಾರವಾಡ: ಯೋಗೀಶಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಈಗ ಮತ್ತಷ್ಟು ತೀವ್ರಗೊಳಿಸಿದ್ದು, ಗುರುವಾರ ಮತ್ತೆ ಕೆಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಸಿಬಿಐ ಅಧಿಕಾರಿಗಳು ಉಪನಗರ ಠಾಣೆಯತ್ತ ಸುಳಿದಿರಲಿಲ್ಲ. ಈಗ ಗುರುವಾರ ಮತ್ತೆ ಠಾಣೆಗೆ ಆಗಮಿಸಿದ ಸಿಬಿಐ ಅಧಿಕಾರಿಗಳು ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿದ್ದಾರೆ. ಪ್ರಮುಖ ಆರೋಪಿ ಬಸವರಾಜ ಮುತ್ತಗಿ
ಅವರನ್ನು ಠಾಣೆಗೆ ಕರೆಯಿಸಿದ ಸಿಬಿಐ ಅಧಿಕಾರಿಗಳು ಮಧ್ಯಾಹ್ನದವರೆಗೂ ವಿಚಾರಣೆಗೊಳಪಡಿಸಿದರು. ನಂತರ
ಶ್ರೀಪಾಟೀಲ, ಬಾಪುಗೌಡ ಪಾಟೀಲ ಮಂಗಳಗಟ್ಟಿ, ವಿನಯ ಕುಲಕರ್ಣಿ ಆಪ್ತ ಸಹಾಯಕ ಪ್ರಶಾಂತ ಕೇಕರೆ ಅವರನ್ನು
ಉಪನಗರ ಠಾಣೆಗೆ ಕರೆಯಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.