JDS-BJP ಜತೆಗೂಡಿ ಕೆಲಸ ಮಾಡಿ: ಬಿ.ವೈ. ವಿಜಯೇಂದ್ರ
Team Udayavani, Feb 11, 2024, 11:34 PM IST
ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಪ್ರತೀ ಬೂತ್ ನಲ್ಲಿ ಶೇ. 10ರಷ್ಟು ಮತ ಪ್ರಮಾಣ ಏರಿಕೆ ಆಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ. ಹಾಗೆಯೇ ರಾಜ್ಯದ ಎಲ್ಲ ಕಡೆ ಜೆಡಿಎಸ್ ಹಾಗೂ ಬಿಜೆಪಿ ಜತೆಗೂಡಿ ಕೆಲಸ ಮಾಡಬೇಕು ಎಂದೂ ಸಲಹೆ ನೀಡಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ಸುತ್ತೂರು ಮಠದ ಜಾತ್ರಾ ಮಹೋತ್ಸವ, ತಾಯಿ ಚಾಮುಂಡೇಶ್ವರಿ ದರ್ಶನದ ಜತೆಗೆ ಕೋರ್ ಕಮಿಟಿ ಸಭೆ, ಮೈಸೂರು ಕ್ಲಸ್ಟರ್ ಸಭೆ ಮುಗಿದಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಎಲ್ಲ 28 ಕ್ಷೇತ್ರಗಳಲ್ಲಿ ಎನ್ಡಿಎ ಕೂಟ ಗೆಲ್ಲುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಮತವಾಗಿ ಪರಿವರ್ತಿಸುವ ಜತೆಗೆ, ಪಕ್ಷದಿಂದ ಏನೆಲ್ಲ ಕಾರ್ಯರೂಪ ಮಾಡಬೇಕು ಎಂಬ ಬಗ್ಗೆ ಚರ್ಚೆಯಾಗಿದೆ ಎಂದರು.
ಸೀಟು ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎರಡೂ ಪಕ್ಷದ ಪ್ರಮುಖರು ದಿಲ್ಲಿಯಲ್ಲಿ ಕುಳಿತು ಸೀಟು ಹಂಚಿಕೆ ಬಗ್ಗೆ ಅಂತಿಮ ತೀರ್ಮಾನ ಮಾಡಲಿದ್ದಾರೆ. ಆದರೆ, ಯಾರೇ ಅಭ್ಯರ್ಥಿಯಾದರೂ ಒಟ್ಟಾಗಿ ದುಡಿಯಬೇಕು ಎಂಬ ಕಿವಿಮಾತು ಅಮಿತ್ ಶಾ ಹೇಳಿದ್ದಾರೆ ಎಂದರು.