ಬಾಗಲಕೋಟೆ: ಜೈಲು ಸಿಬಂದಿಗಳ ಮೇಲೆ ಎರಗಿದ ಕೈದಿಗಳು! ನಾಲ್ವರಿಗೆ ಗಾಯ
Team Udayavani, Mar 30, 2017, 3:38 PM IST
ಬಾಗಲಕೋಟೆ: ಇಲ್ಲಿನ ಉಪ ಕಾರಾಗೃಹದಲ್ಲಿ ಕೈದಿಗಳು ಮತ್ತು ಜೈಲು ಸಿಬಂದಿಗಳ ನಡುವೆ ಮಾರಾಮಾರಿ ನಡೆದ ಘಟನೆ ಬುಧವಾರ ರಾತ್ರಿ ನಡೆದಿದೆ.
ಜೈಲಿನ ಸಿಬಂದಿಗಳು ಪರಿಶೀಲನೆ ನಡೆಸುತ್ತಿದ್ದ ವೇಳೆ ಮೊಬೈಲ್ ಇರುವುದು ಪತ್ತೆಯಾಗಿ ಕೈದಿಗಳನ್ನು ಥಳಿಸಿದ್ದಾರೆ. ಈ ವೇಳೆ ಪ್ರತಿದಾಳಿ ನಡೆಸಿದ ಕೈದಿಗಳು ಹೊಡೆದಾಟ ಶುರು ಮಾಡಿದ್ದಾರೆ.
ಹೊಡೆದಾಟದಲ್ಲಿ ಇಬ್ಬರು ಕೈದಿಗಳು ಮತ್ತು ಇಬ್ಬರು ಸಿಬಂದಿಗಳು ಗಾಯಗೊಂಡಿದ್ದಾರೆ. ಕೈದಿಗಳಾದ ರಂಗ್ಯಾ(23) , ಬಷ್ಯಾ(24) ಸಿಬಂದಿಗಳಾದ ಎಂ.ಬಿ.ಹುಣಶಾಳ್ಯ ಮತ್ತು ಮುತ್ತಪ್ಪ ಶಿರಗುಪ್ಪ ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಜೈಲಿಗೆ ಜಿಲ್ಲಾ ನ್ಯಾಯಾಧೀಶೆ ಬಿ. ಶಾರದಾ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಿ ವಾರದೊಳಗೆ ವರದಿ ನೀಡುವಂತೆ ಬಾಗಲಕೋಟೆ ಶಹರ ಪೊಲೀಸ್ ಠಾಣಾ ಪಿಎಸ್ಐಗೆ ಆದೇಶಿಸಿದ್ದಾರೆ.