ಆಸ್ತಿ ಜಟಾಪಟಿ; ಸಚಿವೆ ಉಮಾಶ್ರೀ ಆಪ್ತನಿಂದ ತಮ್ಮನ ಕುಟುಂಬ ಕಿಡ್ನಾಪ್
Team Udayavani, Jul 22, 2017, 12:59 PM IST
ಬಾಗಲಕೋಟೆ: ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಸಚಿವೆ ಉಮಾಶ್ರೀ ಆಪ್ತ ಶಂಕರ್ ಸೋರಗಾವಿ ಆಸ್ತಿ ವಿಚಾರಕ್ಕಾಗಿ ತಮ್ಮನ ಕುಟುಂಬವನ್ನೇ ಅಪಹರಿಸಿರುವ ಘಟನೆ ಬಾಗಲಕೋಟೆಯ ಜಮಖಂಡಿ ತಾಲೂಕಿನ ಬನಹಟ್ಟಿಯಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಸಚಿವೆ ಉಮಾಶ್ರೀ ಆಪ್ತ ಶಂಕರ್ ಸೋರಗಾವಿ ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಆಸ್ತಿಗಾಗಿ ಶಂಕರ್ ತನ್ನ ತಮ್ಮನಾದ ಯಶವಂತ್ ಸೋರಗಾವಿ, ಪತ್ನಿ ಮಂಜುಳ, ಮಕ್ಕಳಾದ ವಿಶಾಲ, ಪ್ರಶಾಂತ್, ವಿದ್ಯಾಶ್ರೀ ಅವರನ್ನು ಅಪಹರಿಸಿರುವುದಾಗಿ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಹಿಂದೆಯೂ ಆಸ್ತಿ ವಿಚಾರವಾಗಿ ಯಶವಂತ್ ಕುಟುಂಬದ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ಕುಟುಂಬದ ಮೂಲಗಳು ದೂರಿವೆ.