“ಉಪ್ಪು ಹುಳಿ ಖಾರ’ಕ್ಕೆ ಸ್ಟಾರ್ ಟಚ್
Team Udayavani, Oct 23, 2017, 10:57 AM IST
ಇಮ್ರಾನ್ ಸರ್ದಾರಿಯಾ ಸದ್ದಿಲ್ಲದೆ ತಮ್ಮ ಹೊಸ ಚಿತ್ರವನ್ನು ಮುಗಿಸಿ, ಬಿಡುಗಡೆಗೆ ಸಜ್ಜಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ, ನವೆಂಬರ್ ತಿಂಗಳಲ್ಲಿ ಅವರ ನಿರ್ದೇಶನದ ಎರಡನೆಯ ಚಿತ್ರವಾದ “ಉಪ್ಪು ಹುಳಿ ಖಾರ’ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ಅವರು ಶಶಿ, ಧನಂಜಯ್ ಮತ್ತು ಶರತ್ ಎಂಬ ಹೊಸ ಹುಡುಗರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಇನ್ನು ಅವರಿಗೆ ನಾಯಕಿಯರಾಗಿ ಜಯಶ್ರೀ, ಅನುಶ್ರೀ ಮತ್ತು ಮಾಶಾ ಎಂಬ ಫಾರಿನ್ ಬೆಡಗಿಯರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಇನ್ನು “ಉಪ್ಪು ಹುಳಿ ಖಾರ’ದಲ್ಲಿ ಮಾಲಾಶ್ರೀ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
“ಉಪ್ಪು ಹುಳಿ ಖಾರ’ ಚಿತ್ರಕ್ಕೆ ನಾಲ್ವರು ಸಂಗೀತ ನಿರ್ದೇಶಕರು. ಇನ್ನು ಹಿನ್ನೆಲೆ ಸಂಗೀತ ಬೇರೆಯವರದ್ದು. ಇವೆಲ್ಲಾ ಸೇರಿದರೆ ಒಟ್ಟು ನಾಲ್ವರು ಸಂಗೀತ ನಿರ್ದೇಶಕರು ಚಿತ್ರಕ್ಕೆ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ.
ಈ ಪೈಕಿ ಜೂಡಾ ಸ್ಯಾಂಡಿ ಮೂರು ಹಾಡುಗಳನ್ನು, ಪ್ರಜ್ವಲ್ ಪೈ ಎರಡು ಹಾಡುಗಳನ್ನು ಮತ್ತು ಕಿಶೋರ್ ಎಕ್ಸಾ ಒಂದು ಹಾಡನ್ನು ಸಂಯೋಜಿಸಿದ್ದಾರೆ. ಇನ್ನು ಗಾಯಕ ಶಶಾಂಕ್ ಶೇಷಗಿರಿ ಅವರು ಚಿತ್ರಕ್ಕೆ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಈ ಚಿತ್ರದ ಇನ್ನೂ ಒಂದು ವಿಶೇಷ ಎಂದರೆ, ಮೂವರು ಜನಪ್ರಿಯ ಕಲಾವಿದರು ಈ ಚಿತ್ರಕ್ಕೆ ಒಂದೊಂದು ಹಾಡನ್ನು ಹಾಡಿರುವುದು.
ಗಣೇಶನ ಕುರಿತ ಒಂದು ಹಾಡನ್ನು ಸುದೀಪ್ ಹಾಡಿದ್ದಾರೆ. ಇನ್ನೊಂದು ಹಾಡನ್ನು ಪುನೀತ್ ಹಾಡಿದರೆ, ಚಿತ್ರದಲ್ಲಿರುವ ತರಲೆ ಹಾಡೊಂದನ್ನು ಸಾಧು ಹಾಡಿದ್ದಾರೆ. ಒಂದು ಹಾಡನ್ನು ಅಮೇರಿಕಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಒಂದು ಹಾಡನ್ನು ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿತ್ರೀಕರಣ ಮಾಡಲಾಗಿದೆ.