ಶಿವರಾಜಕುಮಾರ್ ನಿರ್ಮಾಣದಲ್ಲಿ “ಮಾನಸ ಸರೋವರ’
Team Udayavani, Nov 16, 2017, 5:25 PM IST
ಶಿವರಾಜಕುಮಾರ್ 120 ಸಿನಿಮಾದ ಗಡಿಯಲ್ಲಿದ್ದಾರೆ. 30 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಶಿವಣ್ಣ ಯಾವತ್ತೂ ಸಿನಿಮಾ ನಿರ್ಮಾಣಕ್ಕೆ ಇಳಿದಿಲ್ಲ. ಒಂದು ಹಂತದಲ್ಲಿ ಅವರ ನೂರನೇ ಸಿನಿಮಾ ಅವರದೇ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತದೆ ಎಂದು ಹೇಳಲಾಗಿತ್ತು. ಕೊನೆಕ್ಷಣದಲ್ಲಿ ಅದು ಪ್ರೇಮ್ ಬ್ಯಾನರ್ಗೆ ಹೋಯಿತು. ಈಗ ಶಿವರಾಜಕುಮಾರ್ ನಿರ್ಮಾಣಕ್ಕೆ ಬಂದಿದ್ದಾರೆ. ಹಾಗಂತ ಸಿನಿಮಾವಲ್ಲ, ಬದಲಾಗಿ ಕಿರುತೆರೆಗೆ. ಹೌದು, ಶಿವರಾಜಕುಮಾರ್ ಕಿರುತೆರೆಗೊಂದು ಧಾರಾವಾಹಿ ನಿರ್ಮಿಸಲಿದ್ದಾರೆ.
ಆ ಧಾರಾವಾಹಿಗೆ ಅವರಿಟ್ಟ ಹೆಸರು “ಮಾನಸ ಸರೋವರ’. ಹೌದು, ಶಿವರಾಜಕುಮಾರ್ ಈಗ ಧಾರಾವಾಹಿ ನಿರ್ಮಾಣಕ್ಕೆ ಇಳಿದಿದ್ದು, ಅವರ ನಿರ್ಮಾಣದ ಮೊದಲ ಧಾರಾವಾಹಿಯಾಗಿ “ಮಾನಸ ಸರೋವರ’ ಮೂಡಿಬರಲಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದ “ಮಾನಸ ಸರೋವರ’ ಚಿತ್ರದ ನಿಮಗೆ ಗೊತ್ತಿರಬಹುದು. ಈಗ ಅದೇ ಹೆಸರಿನಲ್ಲಿ ಬರುತ್ತಿರುವ ಧಾರಾವಾಹಿಗೂ ಆ ಚಿತ್ರಕ್ಕೂ ಏನಾದರೂ ಸಂಬಂಧವಿದೆಯೇ ಎಂದು ನೀವು ಕೇಳಬಹುದು. ಖಂಡಿತಾ, ಇದೆ. ಅದೇನೆಂದರೆ “ಮಾನಸ ಸರೋವರ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಶ್ರೀನಾಥ್, ಪದ್ಮಾವಾಸಂತಿ, ರಾಮಕೃಷ್ಣ ಅವರು ಈ ಧಾರಾವಾಹಿಯಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇನ್ನು ಈ ಧಾರಾವಾಹಿಯ ಮತ್ತೂಂದು ವಿಶೇಷವೆಂದರೆ, “ಮಾನಸ ಸರೋವರ’ ಚಿತ್ರದ ಶೀರ್ಷಿಕೆ ಗೀತೆ ಸೇರಿದಂತೆ ಆ ಚಿತ್ರದಲ್ಲಿನ ಬಹುತೇಕ ಎಲ್ಲಾ ಹಾಡುಗಳು ಈ ಧಾರಾವಾಹಿಯುದ್ದಕ್ಕೂ ಮೂಡಿಬರಲಿದೆಯಂತೆ. ಹಾಗಾಗಿ, “ಮಾನಸ ಸರೋವರ’ ಚಿತ್ರಕ್ಕೂ ಧಾರಾವಾಹಿಗೂ ಸಂಬಂಧವಿದೆ ಎನ್ನಬಹುದು.
ಶಿವರಾಜಕುಮಾರ್ ಅವರು ಈ ಧಾರಾವಾಹಿಯನ್ನು ತಮ್ಮ ಮಗಳು ನಿವೇದಿತಾ ಹೆಸರಲ್ಲಿ ನಿರ್ಮಿಸುತ್ತಿದ್ದಾರೆ. ಈಗಾಗಲೇ ಪುನೀತ್ ರಾಜಕುಮಾರ್ ಅವರು ಧಾರಾವಾಹಿ ನಿರ್ಮಾಣಕ್ಕೆ ಇಳಿದಿದ್ದಾರೆ. ಈಗ ಶಿವಣ್ಣ ಸರದಿ. ಶಿವಣ್ಣ ನಿರ್ಮಾಣದ “ಮಾನಸ ಸರೋವರ’ ಧಾರಾವಾಹಿಯನ್ನು ರಾಮಚಂದ್ರ ವೈದ್ಯ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ರವಿಕಿಶೋರ್ ಅವರ ಛಾಯಾಗ್ರಹಣ ಧಾರಾವಾಹಿಗಿದೆ.