ಜೂ.26 ಕ್ಕೆ ಚೇಂಬರ್ ಚುನಾವಣೆ
Team Udayavani, Jun 5, 2018, 10:59 AM IST
ಅಂತೂ ಇಂತೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೆ ಸಮಯ ಕೂಡಿ ಬಂದಿದೆ. ಹೌದು, ಜೂನ್ 26 ರಂದು ಮಂಡಳಿ ಚುನಾವಣೆ ನಡೆಯಲಿದ್ದು, ಈ ಬಾರಿ ವಿತರಕರ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದೆ. ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ 721 ನಿರ್ಮಾಪಕರು, 378 ವಿತರಕರು ಹಾಗೂ 136 ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದಾರೆ. ಜೂ.9 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ.
ಅಂದಹಾಗೆ, ಈ ಬಾರಿ ವಿತರಕ ವಲಯದಿಂದ ನಾಲ್ವರು ವಿತರಕರು ಅಧ್ಯಕ್ಷ ಸ್ಥಾನ ಬಯಸಿದ್ದಾರೆ ಎನ್ನಲಾಗಿದೆ. ನಿರ್ಮಾಪಕರಾಗಿ, ವಿತರಕರಾಗಿ ಗುರುತಿಸಿಕೊಂಡಿರುವ ಎನ್.ಎಂ.ಸುರೇಶ್, ಚಿನ್ನೇಗೌಡ ಹಾಗು ಮಾರ್ಸ್ ಸುರೇಶ್ ಅವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಈ ನಡುವೆ ವಿತರಕ, ಪ್ರದರ್ಶಕ ಮತ್ತು ನಿರ್ಮಾಪಕ ಎನ್.ಕುಮಾರ್ ಅವರ ಸಹ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಅಧ್ಯಕ್ಷ ಸ್ಥಾನಕ್ಕೆ ಈ ನಾಲ್ವರ ಹೆಸರುಗಳು ಪೈಪೋಟಿಯಲ್ಲಿವೆ. ಜೂನ್ 26 ರಂದು ಚುನಾವಣೆ ನಡೆಯಲಿದ್ದು, ವಿಜಯ ಮಾಲೆ ಯಾರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈಗ ಮಂಡಳಿ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು ಅವರು, ಕಳೆದ ಎರಡು ವರ್ಷಗಳಿಂದಲೂ ಅಧ್ಯಕ್ಷರಾಗಿ ಚಿತ್ರರಂಗದ ಹಲವು ಸಮಸ್ಯೆ ಬಗೆಹರಿಸಲು ಶ್ರಮಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಚಿತ್ರರಂಗಕ್ಕೆ ಅಗತ್ಯ ಸವಲತ್ತುಗಳನ್ನು ಪೂರೈಸಿಕೊಳ್ಳಲು ಯಶಸ್ವಿಯಾಗಿದ್ದಾರೆ.