ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ…
Team Udayavani, Sep 11, 2018, 11:28 AM IST
ಕನ್ನಡದಲ್ಲಿ ದಿನ ಕಳೆದಂತೆ ಹೊಸ ಬಗೆಯ ಚಿತ್ರ ಶೀರ್ಷಿಕೆಗಳು ಬರುತ್ತಿವೆ. ಆ ಸಾಲಿಗೆ ‘ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಚಿತ್ರ ಹೊಸ ಸೇರ್ಪಡೆ. ಸಾಮಾನ್ಯವಾಗಿ ಅಂಗಡಿ, ಹೋಟೆಲ್ಗಳಲ್ಲಿ ‘ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಎಂಬ ಬೋರ್ಡ್ ಕಾಣುವುದುಂಟು.
ಅಂಥದ್ದೇ ಪದ ಬಳಕೆ ಮಾಡಿರುವ ಇಲ್ಲೊಂದು ತಂಡ, “ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಎಂದು ಹೆಸರಿಟ್ಟು, ಸದ್ದಿಲ್ಲದೆಯೇ ಚಿತ್ರೀಕರಣವನ್ನೂ ಮುಗಿಸಿದೆ. ಈಗಾಗಲೇ ಬಿಡುಗಡೆಗೆ ಸಜ್ಜಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ತಿಂಗಳ ಅಂತ್ಯದಲ್ಲಿ ರಾಜ್ಯಾದ್ಯಂತ ತೆರೆಗೆ ಬರಲು ಅಣಿಯಾಗುತ್ತಿದೆ.
ಅಂದಹಾಗೆ, ಈ ಚಿತ್ರ ರಾಜ್ ಮೂವೀ ಹೌಸ್ ಬ್ಯಾನರ್ನಡಿಯಲ್ಲಿ ನಟ ಕಮ್ ನಿರ್ಮಾಪಕ ರಾಜ್ ನಿರ್ಮಿಸುತ್ತಿದ್ದಾರೆ. ದಿನೇಶ್ಬಾಬು ಚಿತ್ರದ ಕಥೆ, ಚಿತ್ರಕಥೆ ಛಾಯಾಗ್ರಹಣ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ಚಿತ್ರಕ್ಕೆ ಹಂಸಲೇಖ ಅವರ ಸಾಹಿತ್ಯವಿದೆ.
ನಂದಿತಾ ಅವರು ಸಂಗೀತ ನೀಡಿದ್ದಾರೆ. ಕುಮಾರ್ ಕೋಟಿಕೊಪ್ಪ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ರಾಜ್, ಚೈತ್ರಾ, ಬಿರಾದಾರ್, ದರ್ಶನ್ (ಅವನು ಮತ್ತು ಶ್ರಾವಣಿ ಧಾರಾವಾಹಿ ಖ್ಯಾತಿ) ದೀಪಾ, ಸಂಗೀತಾ, ಮನ್ದೀಪ್ರಾಯ್, ಮನ್ಮೋಹನ್ ಸಿಂಗ್ ಮುಂತಾದವರಿದ್ದಾರೆ.