ಮೆಸ್ಕಾಂ ಕಾಮಗಾರಿ: ಗ್ರಾ.ಪಂ. ಪೂರ್ವಾನುಮತಿಗೆ ಸೂಚನೆ
Team Udayavani, Jul 14, 2017, 2:55 AM IST
ವಿಟ್ಲ: ರಸ್ತೆ ಇತ್ಯಾದಿ ಸಾರ್ವಜನಿಕ ಜಾಗದಲ್ಲಿ ಮೆಸ್ಕಾಂ ಹಾಗೂ ಇತರ ಇಲಾಖೆಗಳು ಕಾಮಗಾರಿ ನಡೆಸುವಾಗ ಪಂಚಾಯತ್ನ ಪೂರ್ವಾನುಮತಿ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಅದರಿಂದಾಗುವ ತೊಂದರೆಗಳಿಗೆ ಸಂಬಂಧಪಟ್ಟವರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅವರು ಎಚ್ಚರಿಕೆ ನೀಡಿದ್ದಾರೆ.
ಗ್ರಾಮ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಗ್ರಾ.ಪಂ.ನ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾ.ಪಂ. ಸದಸ್ಯ ಪವಿತ್ರಾ ಪೂಂಜ ಅವರು ಮಾತನಾಡಿ, ಕುದ್ರಿಯದಲ್ಲಿ ಮೆಸ್ಕಾಂ ರಸ್ತೆಯಲ್ಲೇ ಕಂಬಗಳನ್ನು ಹಾಕಿದೆ. ಪರಿಣಾಮವಾಗಿ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಹೇಳಿದರು. ಕುದ್ರಿಯದಲ್ಲಿ ಕಾಮಗಾರಿ ಸ್ಥಗಿತಗೊಳಿಸು ವಂತೆ ಸಾಲೆತ್ತೂರು ಜೆಇಯವರಿಗೆ ಅಧ್ಯಕ್ಷರು ಸೂಚಿಸಿದರು.
ಬಿಲ್ಗಳ ಗೊಂದಲ
ಮೆಸ್ಕಾಂ ವತಿಯಿಂದ ಪಂಚಾಯತ್ ಸ್ಥಾವರಗಳಿಗೆ ನೀಡುವ ಬಿಲ್ಗಳಲ್ಲಿ ಗೊಂದಲಗಳಿದ್ದು ಅವುಗಳನ್ನು ನಿವಾರಿಸ
ಬೇಕು. ಮೆಸ್ಕಾಂ ಕಾಮಗಾರಿ ನಡೆಸುವಾಗ ದಾರಿದೀಪಗಳ ಲೆ„ನ್ ಹಾಗೂ ಲೆ„ಟ್ಗಳು ಕಾಣೆಯಾಗುತ್ತಿವೆ. ಕುಡ್ತಮುಗೇರು, ಕುಳಾಲು ಕಡೆಗಳಲ್ಲಿ ಇಂತಹ ಘಟನೆ ಸಂಭವಿಸಿದೆ. ಈ ಬಗ್ಗೆ ಸ್ಪಷ್ಟೀಕರಣ ಬೇಕು ಎಂದು ಅಧ್ಯಕ್ಷರು ಆಗ್ರಹಿಸಿದರು.
ಇದನ್ನು ಸರಿಪಡಿಸುವುದಾಗಿ ಮತ್ತು ಲಕ್ಷ್ಮೀಕೋಡಿ ಟಿಸಿ ಶೀಘ್ರ ಪೂರ್ಣ ಗೊಳಿಸುವುದಾಗಿ ಸಾಲೆತ್ತೂರು ಜೆಇ ದೇವಿಕಿರಣ್ ಅವರು ಭರವಸೆ ನೀಡಿದರು. ವಿಕಲಚೇತನ ಮಕ್ಕಳ ಗುರುತುಚೀಟಿಗೆ ಖರ್ಚಿನ ಬಗ್ಗೆ ಅಂಗನವಾಡಿ ಮೇಲ್ವಿಚಾರಕಿ ರೇಣುಕಾ ಅವರು ಪ್ರಸ್ತಾವಿಸಿದಾಗ ಮಂಗಳೂರಿಗೆ ಕರೆದುಕೊಂಡು ಹೋಗುವ
ಖರ್ಚನ್ನು ಪಂಚಾಯತ್ ಭರಿಸುವುದಾಗಿ ಅಧ್ಯಕ್ಷರು ತಿಳಿಸಿದರು.
ಸಮಿತಿ ಬದಲಾವಣೆಗೆ ಸೂಚನೆ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಬಾಲವಿಕಾಸ ಸಮಿತಿಯ ಸಭೆ ನಡೆಸುತ್ತಿರುವ ಬಗ್ಗೆ ಖಾತ್ರಿ ಪಡಿಸಲಾಯಿತು. ದೀರ್ಘಾವಧಿ ಸಭೆ ನಡೆಸದಿದ್ದರೆ ಅಂತಹ ಸಮಿತಿಯನ್ನು ಬದಲಾಯಿಸಲು ಸೂಚಿಸಲಾಯಿತು. ಅಂಗನವಾಡಿಯಲ್ಲಿ ಮಕ್ಕಳ ಹಾಜರಾತಿ ಬಗ್ಗೆ ವಿಶೇಷ ಗಮನ ಹರಿಸಲು ಹಾಗೂ ಸೌಲಭ್ಯಗಳ ಬಗ್ಗೆ ಹೆತ್ತವರಿಗೆ ಮಾಹಿತಿ ನೀಡಿ ಶಾಲೆಗೆ ಬರುವಂತೆ ಪ್ರೇರೇಪಿಸಲು ಕಾರ್ಯಕರ್ತೆಯರಿಗೆ ಸೂಚಿಸಲಾಯಿತು.
ಆರೋಗ್ಯ ಇಲಾಖೆಯ ಹರಿಣಾಕ್ಷಿ ಅವರು ಈ ವರ್ಷ ಮಲೇರಿಯಾ, ಡೆಂಗ್ಯೂ ಇತ್ಯಾದಿ ಪ್ರಕರಣಗಳು ದಾಖಲಾಗಿಲ್ಲ. ನಾಗರಿಕರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಹಿರಿಯ ಪಶುವೈದ್ಯ ಪರಿವೀಕ್ಷಕ ಶ್ರೀಮಂದರ ಜೈನ್ ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ತಾ.ಪಂ. ಸದಸ್ಯ ನಾರಾಯಣ ಶೆಟ್ಟಿ ಕುಲ್ಯಾರು, ಪಂ. ಉಪಾಧ್ಯಕ್ಷೆ ಯಮುನಾ ಲಕ್ಷ್ಮಣ ಗೌಡ, ಪಂಚಾಯತ್ ಸದಸ್ಯರು, ಪಂಚಾಯತ್ರಾಜ್ ಜೂನಿಯರ್ ಎಂಜಿನಿಯರ್ ನಾಗೇಶ್, ಶಾಲಾ ಮುಖ್ಯಸ್ಥರು, ಅಂಗನವಾಡಿ ಕಾರ್ಯ ಕರ್ತೆಯರು, ನೀರು ಸರಬರಾಜು ಯೋಜನೆಯ ಸಿಬಂದಿ ಮತ್ತಿತರರು ಉಪಸ್ಥಿತರಿದ್ದರು. ಪಂ.ಅ. ಅಧಿಕಾರಿ ಸುಧೀರ್ ಸ್ವಾಗತಿಸಿ, ವಂದಿಸಿದರು.
ವಿದ್ಯಾರ್ಥಿಗಳಿಗೆ ಕೋತಿಗಳ ಕಾಟ !
ತಾಳಿತ್ತನೂಜಿಯಲ್ಲಿ ಕೋತಿಗಳು ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ಪುಟಾಣಿಗಳಿಗೆ ತೊಂದರೆ ಕೊಡುತ್ತಿರುವುದರಿಂದ ಹಾಜರಾತಿಗೂ ತೊಂದರೆಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಸಭೆಯಲ್ಲಿ ಆಗ್ರಹಿಸ ಲಾಯಿತು.
ಬಿಸಿಯೂಟಕ್ಕೆ ಸಾಮಗ್ರಿ ಕೊರತೆ
ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಪ್ರಗತಿಯ ವಿವರ ನೀಡಿದ ಸಿಆರ್ಪಿ ಗಂಗಾಧರ ಅವರು ಕುಳಾಲು ಶಾಲೆಗೆ ಕೂಡಲೇ ಗೌರವ ಶಿಕ್ಷಕರನ್ನು ನಿಯೋಜನೆ ಮಾಡಬೇಕು. ಅಲ್ಲದೆ ಬಿಸಿಯೂಟಕ್ಕೆ ಬೇಳೆಕಾಳು, ಎಣ್ಣೆ, ಉಪ್ಪು ಇತ್ಯಾದಿ ಸಾಮಗ್ರಿ ಪೂರೈಕೆಯಲ್ಲಿ ತೊಂದರೆ ಇದೆ. ಎಸ್ಡಿಎಂಸಿಯವರೇ ಖರೀದಿಸಬೇಕಾಗಿದೆ ಎಂದರು.