ನೀರಾವರಿ ಕಾಮಗಾರಿ ಕಳಪೆಯಾದರೆ ಕ್ರಮ
Team Udayavani, Jun 29, 2018, 12:19 PM IST
ಮುದ್ದೇಬಿಹಾಳ: ತಾಲೂಕಿನ ನೀರಾವರಿ ಕಾಮಗಾರಿಗಳನ್ನು ಕಳಪೆಯಾಗಿ ಕೈಗೊಂಡರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ನೀರಾವರಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆ ಅಡಿ ಮುಖ್ಯ ಕಾಲುವೆ, ಡಿಸ್ಟ್ರಿಬ್ಯೂಟರ್, ಲ್ಯಾಟರಲ್, ಹೊಲಗಾಲುವೆ, ಕೆರೆ ತುಂಬುವ
ಯೋಜನೆ ಮುಂತಾದ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರ ಬಗ್ಗೆ ನನಗೆ ಗೊತ್ತಿದೆ. ವಿನಾಕಾರಣ ಅವರಿಗೆ ತೊಂದರೆ ಕೊಡೋದು, ಕಳಪೆ ಕಾಮಗಾರಿ ವಿಚಾರಣೆ ನಡೆಸುವುದು ನನಗೆ ಇಷ್ಟವಿಲ್ಲ. ಈಗ ಕೆಲಸ ಮಾಡುವವರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕೆಬಿಜೆಎನ್ನೆಲ್ ಗುತ್ತಿಗೆದಾರರ ಕಂಪನಿಯಾಗಿದೆ ಎಂದು ಅಸಹನೆ ತೋಡಿಕೊಂಡ ಶಾಸಕರು, ಎಎಲ್ಬಿಸಿಯಿಂದ ಶೇ. 70ರಷ್ಟು ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಯರಝರಿವರೆಗೆ ನೀರಾವರಿಯಾಗಿದೆ. ಕೋಳೂರ ಬಳಿ ಅಲ್ಲಲ್ಲಿ ನೀರು ಹೋಗುತ್ತದೆ. ಎಎಲ್ಬಿಸಿ ಕಮಾಂಡಿಂಗ್ ಪ್ರದೇಶಕ್ಕೆ ನೀರು ತಲುಪುವ ವ್ಯವಸ್ಥೆ ಕೈಗೊಳ್ಳಬೇಕು.
ಇದಕ್ಕಾಗಿ ಎಎಲ್ಬಿಸಿ ಮುಖ್ಯ ಕಾಲುವೆ ಬಲಪಡಿಸಬೇಕು. ಎಫ್ ಐಸಿ, ಡಿಸ್ಟ್ರೀಬ್ಯೂಟರ್, ಲ್ಯಾಟರಲ್ ಹೊಸದಾಗಿ ನಿರ್ಮಿಸಬೇಕು. ಇದಕ್ಕಾಗಿ ಹೆಚ್ಚುವರಿ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಿಳಿಸಿದರು.
ತಾಲೂಕು ವ್ಯಾಪ್ತಿಯ ಆಲಮಟ್ಟಿ ಎಡದಂಡೆ ಕಾಲುವೆ, ಚಿಮ್ಮಲಗಿ ಪೂರ್ವ ಕಾಲುವೆ ಅಡಿ ನೀರಾವರಿ ಕಾಮಗಾರಿ ಗುಣಮಟ್ಟ ಕಳಪೆ ಆಗುವುದನ್ನು ಸಹಿಸುವುದಿಲ್ಲ ಬೃಹತ್ ನೀರಾವರಿ ಯೋಜನೆಗಳಿಗೆ ಭೂಮಿ ಕಳೆದುಕೊಂಡ ಪ್ರತಿಯೊಬ್ಬ ಸಂತ್ರಸ್ತ ರೈತನ ಜಮೀನಿಗೆ ನೀರು ಕೊಡಬೇಕು. ಇದು ಸರ್ಕಾರದ ಕರ್ತವ್ಯವೂ ಆಗಿದೆ. ನೀರಾವರಿ ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಕೆಲವು ಕಾಮಗಾರಿ, ಕೆರೆ ತುಂಬುವ ಯೋಜನೆ ವಿಷಯದಲ್ಲಿ ಅಧಿಕಾರಿಗಳು ಶಾಸಕರಿಗೆ ಕಾನೂನಿನ ನಿಯಮ ತಿಳಿಸಿಕೊಡಲು ಬಂದಾಗ ಸಿಡಿಮಿಡಿಗೊಂಡ ಶಾಸಕರು ನನಗೆ ಕಾನೂನು ಪಾಠ ಹೇಳಬೇಡಿ. ಒಟ್ಟಾರೆ ನೀರಾವರಿ ಕೆಲಸ ಆಗಬೇಕು ಎಂದರು.
ನೀರಾವರಿ ಉದ್ದೇಶಕ್ಕೆ ಜಮೀನು ಕಳೆದುಕೊಂಡ ಸಂತ್ರಸ್ತ ರೈತರು ಕನಿಷ್ಠ ಮೂಲಸೌಕರ್ಯಗಳಿಲ್ಲದೇ
ಹತಾಶರಾಗಿದ್ದಾರೆ. ಪುನರ್ವಸತಿ ಹಳ್ಳಿಗಳು ದನದ ಕೊಟ್ಟಿಗೆಯಂತಿವೆ. ಕಾಲುವೆ ಕೊನೆ ಹಂತದ
ಜಮೀನಿನವರೆಗೂ ನೀರು ಹೋಗುತ್ತಿಲ್ಲ. ಅಧಿಕಾರಿಗಳು ಇರೋದು ರೈತರ ಸಲುವಾಗಿಯೇ ಹೊರತು ಗುತ್ತಿಗೆದಾರರ ಸಲುವಾಗಿ ಅಲ್ಲ ಅನ್ನೋದನ್ನ ಅರಿಯಿರಿ ಎಂದು ಎಂದರು.
ತಾಲೂಕಿನಲ್ಲಿ ಇರುವ ಕೆರೆಗಳ ಮಾಹಿತಿ ಪಡೆದ ಶಾಸಕರು, ಮುದ್ದೇಬಿಹಾಳ ಪಟ್ಟಣಕ್ಕೆ ಹತ್ತಿರ ಇರುವ ಗೆದ್ದಲಮರಿ ಕೆರೆಯನ್ನು ಪಿಕ್ನಿಕ್ ಸ್ಪಾಟ್ ಮಾಡುವ ಯೋಚನೆ ಇದೆ. ಈಗಾಗಲೇ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ವಿಜಯಪುರದ ಬೇಗಂ ತಾಲಾಬ್ ಮಾದರಿಯಲ್ಲಿ ಅಭಿವೃದ್ದಿಪಡಿಸಬೇಕಿದೆ. ಇದಕ್ಕಾಗಿ ಕೆರೆ ಹೂಳೆತ್ತುವುದು ಸೇರಿ ಅಗತ್ಯ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಬೇಕು ಎಂದರು.
ಗೆದ್ದಲಮರಿ, ಅಡವಿ ಹುಲಗಬಾಳ, ಮಾದಿನಾಳ, ಹೊಕ್ರಾಣಿ, ಮಡಿಕೇಶ್ವರ ಕೆರೆಗಳು ದೊಡ್ಡ ಕೆರೆಗಳು. ಇವುಗಳನ್ನು
ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆಯಿಂದ ನೀರಾವರಿ ಇಲಾಖೆಗೆ ಹಸ್ತಾಂತರಿಸಿ ಅಭಿವೃದ್ಧಿಗೊಳಿಸುವ
ಕುರಿತು ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೆರಬೆಂಚಿ, ಹಡಲಗೇರಿ, ಅರಸನಾಳ, ಹಿರೇಮುರಾಳ ಕೆರೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಟೆಂಡರ್ಗೂ ಮುನ್ನ ಅಧಿಕಾರಿಗಳು ಸರ್ವೇ ಮಾಡಿಲ್ಲ. ತರಾತುರಿಯಲ್ಲಿ ಟೆಂಡರ್ ಕರೆಯಲಾಗಿದೆ. ಈ ಕೆರೆಗಳ ಡಿಪಿಆರ್ ಮಾಹಿತಿ ಸಲ್ಲಿಸಬೇಕು. ಕೆರೆ ತುಂಬಿಸಿದ ಮೇಲೆ ಸೋರಿಕೆ ಆಗದಂತೆ ನೋಡಿಕೊಳ್ಳಬೇಕು. ತಮದಡ್ಡಿ, ಬಳಗಾನೂರ ಸೇರಿ ಆ ಭಾಗದಲ್ಲಿ ಬರುವ ಕೆರೆಗಳ ಪ್ರಗತಿ ಮಾಹಿತಿ ಕೊಡಬೇಕು ಎಂದು ಸೂಚಿಸಿದರು.
ಆಲಮಟ್ಟಿ ಕೆಬಿಜೆಎನ್ನೆಲ್ ಕಾಲುವೆ ವಿಭಾಗದ ಕಾರ್ಯನಿರ್ವಾಹಕ ಅಬಿಯಂತರ ಎಂ.ಸಿ. ಛಬ್ಬಿ, ಎಎಲ್ ಬಿಸಿ ಸಬ್ ಡಿವಿಜನ್-1ರ ಎಇಇ ಎಂ.ಸಿ. ಡುಳ್ಳಿ, ಎನ್.ಬಿ.ನಾಡಗೌಡ, ಬಿ.ಎಸ್.ಪ್ಯಾಟಿಗೌಡರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ