ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಲ್ಲಿಕಾರ್ಜುನ ಸ್ವಾಮಿ
Team Udayavani, Jan 23, 2019, 9:42 AM IST
ಚಿತ್ರದುರ್ಗ: ವಿದ್ಯಾರ್ಥಿಗಳು ಉತ್ಸಾಹಿಗಳಾಗಿ ಶ್ರದ್ಧೆ, ಪರಿಶ್ರಮ ಪ್ರಯತ್ನಗಳಿಂದ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಕಾಲೇಜಿಗೆ ಉತ್ತಮ ಫಲಿತಾಂಶ ತರಲು ಪಣತೊಡಬೇಕು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ತಾಲೂಕಿನ ಯಳಗೋಡು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2018-19ನೇ ಸಾಲಿನ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭ ಹಾಗೂ ವಿದ್ಯಾಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜಿಗೆ ಅಗತ್ಯವಾಗಿ ಬೇಕಾಗಿರುವ ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಯತ್ನಿಸಲಾಗುವುದು ಎಂದರು.
ಗ್ರಾಮದ ಅನೇಕ ಹಿರಿಯ ಪ್ರಯತ್ನದ ಫಲವಾಗಿ ಗ್ರಾಮೀಣ ಪ್ರದೇಶದಲ್ಲಿ ಈ ಕಾಲೇಜು ಪ್ರಾರಂಭವಾಗಲು ಕಾರಣವಾಗಿದೆ. ಉತ್ತಮ ಫಲಿತಾಂಶ ಪಡೆಯುವ ಮೂಲಕ ಕಾಲೇಜ್ ಮತ್ತು ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಕ್ರಮಬದ್ಧ ವಿದ್ಯಾಭ್ಯಾಸದ ಮೂಲಕ ಉತ್ತಮ ಫಲಿತಾಂಶ ಪಡೆಯಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಎನ್.ಆರ್. ನಾಗರಾಜಪ್ಪ ಮಾತನಾಡಿ, ಕಾಲೇಜಿನಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿಂದ 180 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ವಿದ್ಯಾರ್ಥಿಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅತಿ ಜರೂರಾಗಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಪದವಿ ಪೂರ್ವ ಶಿಕ್ಷಣದ ವ್ಯವಸ್ಥೆ ತುಂಬಾ ಪಾರದರ್ಶಕವಾಗಿದ್ದು, ಇದರ ಸದುಪಯೋಗ ಪಡೆಯಬೇಕಾದರೆ ಆಯ ದಿನದ ಪಠ್ಯ ಅಂದೇ ಓದಬೇಕು ಎಂದರು.
ಸಮಾಜಶಾಸ್ತ್ರ ಉಪನ್ಯಾಸಕ ಬಿ.ಎಂ. ಶಿವಲಿಂಗಯ್ಯ, ಹಿರಿಯ ಉಪನ್ಯಾಸಕ ಜಿ.ಲೋಕಪ್ಪ, ಉಪನ್ಯಾಸಕಿ ಎಸ್.ಪಾರ್ವತಮ್ಮ ಮಾತನಾಡಿದರು. ವಿದ್ಯಾರ್ಥಿಗಳಾದ ಅಕ್ಷತಾ, ಅನುಷಾ, ನಮಿತಾ, ವಾಣಿಶ್ರೀ ಅಭಿಪ್ರಾಯ ಹಂಚಿಕೊಂಡರು.
ಉಪನ್ಯಾಸಕರಾದ ಡಿ.ಕೆ. ತಿಪ್ಪೇಸ್ವಾಮಿ, ಎಂ.ಆರ್. ರಾಮರೆಡ್ಡಿ, ಕೆ.ಟಿ. ರಮೇಶ್, ಜಿ. ಪುಷ್ಪಾಮಾಲಾ, ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕ ಎಲ್.ಸಿ. ಮಂಜುನಾಥ್, ಸಹಶಿಕ್ಷಕ ಚಂದ್ರಶೇಖರ್ ಇದ್ದರು. ಉಪನ್ಯಾಸಕ ಎ.ಪದ್ಮಚಾರಿ ಸ್ವಾಗತಿಸಿದರು. ಉಪನ್ಯಾಸಕಿ ನಿರೂಪಿಸಿದರು. ಉಪನ್ಯಾಸಕ ಎಂ.ಎನ್. ಶಂಕರರಾವ್ ವಂದಿಸಿದರು.