ಬದುಕಿನ ಮೌಲ್ಯಗಳಲ್ಲಿ ಗಾಂಧೀಜಿ ಇನ್ನೂ ಜೀವಂತ
Team Udayavani, Oct 29, 2018, 5:41 PM IST
ಹಾವೇರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗೆಳೆಯರ ಬಳಗ ಆಶ್ರಯದಲ್ಲಿ ‘ಪಾಪು ಗಾಂಧಿ, ಬಾಪು ಗಾಂಧಿ ಆದ ಕಥೆ’ ನಾಟಕ ಇಲ್ಲಿಯ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು. ಸಸಿಗೆ ನೀರುಣಿಸುವ ಮೂಲಕ ವಾರ್ತಾಧಿಕಾರಿ ಡಾ| ಬಿ.ಆರ್. ರಂಗನಾಥ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಅಪಮೌಲೀಕರಣಗೊಳ್ಳುತ್ತಿರುವ ಗಾಂಧೀಜಿಯವರ ವ್ಯಕ್ತಿತ್ವ ಮತ್ತು ಚಿಂತನೆಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸುವುದೇ ‘ಪಾಪು ಗಾಂಧಿ, ಬಾಪು ಗಾಂಧಿ ಆದ ಕಥೆ’ ನಾಟಕದ ಸಂದೇಶ. ಇದು ಅವರ ಬದುಕಿನ ಮರೆತ ಪುಟಗಳನ್ನು ಓದುವ ಕ್ರಮವೂ ಆಗಿದೆ ಎಂದರು.
ಜೀವನವನ್ನು ಕಟ್ಟುವ ಮೂಲ ಮೌಲ್ಯಗಳು, ಅಪಮೌಲ್ಯವಾಗುತ್ತಿರುವ ಇಂದಿನ ದಿನಗಳಲ್ಲಿ ಜೀವನ ಶ್ರದ್ಧೆ ಮತ್ತು ದರ್ಶನಕ್ಕೆ ಒಂದು ಮಾದರಿ ಗಾಂಧೀಜಿ. ಇದು ಮುಕ್ಕಾಗದಂತೆ ನಿಜ ಅರ್ಥದಲ್ಲಿ ಅವರನ್ನು ತಿಳಿಯುವ ಮತ್ತು ಸಮಾಜಕ್ಕೆ ತಿಳಿಸುವ ಪ್ರಯತ್ನಗಳು ನಡೆಯಬೇಕಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜ್ಞಾನಗಂಗಾ ಶಿಕ್ಷಣ ಸಮಿತಿ ಅಧ್ಯಕ್ಷ ಡಾ| ಜೆ.ಆರ್. ಗುಡಿ ಮಾತನಾಡಿ, ಈ ನಾಟಕ ಬರಿ ಮನರಂಜನೆಯದಲ್ಲ, ವಿಚಾರವಂತಿಕೆಯನ್ನು ಹುಟ್ಟು ಹಾಕುವ ಪ್ರಯತ್ನ. ಗಾಂಧಿ ಎಂದಿಗೂ ಸಾಯುವುದಿಲ್ಲ ಈಗಲೂ ಜೀವಂತ ಇದ್ದಾರೆ ಎಂದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಬಳಗದ ಅಧ್ಯಕ್ಷ ವಿ.ಎಂ. ಪತ್ರಿ, ಹೆಸ್ಕಾಂ ಕಾರ್ಮಿಕ ಧುರೀಣ ವಿಜಯಕುಮಾರ ಮುದಕಣ್ಣನವರ, ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷೆ ದಾಕ್ಷಾಯಿಣಿ ಗಾಣಿಗೇರ, ಬಸವೇಶ್ವರ ಮಹಿಳಾ ನಾಗರಿಕ ವೇದಿಕೆಯ ಅಧ್ಯಕ್ಷೆ ಅನುಪಮಾ ಹಿರೇಮಠ, ವಿಜ್ಞಾನ ಸಮಿತಿಯ ರೇಣುಕಾ ಗುಡಿಮನಿ ಹಾಗೂ ಕಲಾ ತಂಡದ ಮದ್ವರಾಜ, ಶಿವಮೂರ್ತಿ ಇದ್ದರು. 2ಕಿರು ಕವಿಗೋಷ್ಠಿ ಜರುಗಿತು. ಬಾಲ ಕವಿಗಳಾದ ಲೋಕೇಶ ಎರೇಶಿಮಿ, ಸಿಂಚನಾ ವಿ.ಎಲ್., ಅಂಜು ಪತ್ತಾರ, ಕೋಮಲ ನರಗುಂದ, ಶಿಕ್ಷಕರಾದ ಅಕ್ಕಮಾಹಾದೇವಿ ಹಾನಗಲ್ಲ, ರಾಜೇಶ್ವರಿ ಸಾರಂಗಮಠ, ರಾಜು ಭಕ್ಷಿ ಕಾವ್ಯವಾಚನ ಮಾಡಿದರು.