ವಿವೇಕಾನಂದರು ಹಿಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ
Team Udayavani, Jan 12, 2019, 10:17 AM IST
ಹಾವೇರಿ: ‘ವಿವೇಕ ಬ್ಯಾಂಡ್ ಅಭಿಯಾನ’ ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ಎಲ್ಲ ಭಾರತೀಯರು ಕಂಕಣ ಬದ್ಧರಾಗುವ ಒಂದು ಪ್ರತಿಜ್ಞೆಯಾಗಿದ್ದು, ವಿವೇಕಾನಂದರು ಭಾರತಕ್ಕೆ ಹಿಂದಿಗಿಂತಲೂ ಈಗ ಹೆಚ್ಚು ಪ್ರಸ್ತುತರಾಗಿದ್ದಾರೆ ಎಂದು ವಕ್ತಾರರಾಗಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ನ ನಿಕಟಪೂರ್ವ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ವಿನಯ ಬಿದರೆ ಹೇಳಿದರು.
ಸಮರ್ಥ ಭಾರತ ಟ್ರಸ್ಟ್, ವಿವೇಕ ಜಾಗೃತ ಬಳಗದ ಸಹಯೋಗದಲ್ಲಿ ವಿವೇಕಾನಂದರ ಜಯಂತ್ಯುತ್ಸವ ನಿಮಿತ್ತ ಶುಕ್ರವಾರ ನಗರದ ಜಿಲ್ಲಾ ಗುರುಭವನದಲ್ಲಿ ಏರ್ಪಡಿಸಿದ್ದ ‘ವಿವೇಕ ಬ್ಯಾಂಡ್ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು 150ವರ್ಷಗಳ ಹಿಂದೆ ಸಾಮಾನ್ಯ ಸಂತನಾಗಿ, ಸಾಮಾನ್ಯ ವ್ಯಕ್ತಿಯಾಗಿ ಬೆಳೆದ ಅವರು, ಇಂದು ವಿಶ್ವವೇ ಅವರನ್ನು ತಿರುಗಿ ನೋಡುವಂತೆ ಮಾಡಿದ್ದಾರೆ. ಪ್ರಪಂಚದ 140 ದೇಶಗಳಲ್ಲಿ ವಿವೇಕಾನಂದರ ಜನ್ಮದಿನವನ್ನು ವಿಶ್ವ ಯುವಜನ ಜಯಂತಿಯಾಗಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಯುವಕರಲ್ಲಿ ಆತ್ಮವಿಶ್ವಾಸ, ದೇಶಪ್ರೇಮದ ಕಿಚ್ಚು, ಚಾರಿತ್ರ್ಯ ಮರು ನಿರ್ಮಾಣದ ಶಕ್ತಿ ತುಂಬಿ ಭಾರತದ ಸಂಸ್ಕೃತಿಯನ್ನು ಜಗತøಸಿದ್ಧಗೊಳಿಸಿದ ಸ್ವಾಮಿ ವಿವೇಕಾನಂದ ವಿಚಾರಧಾರೆಗಳು ಯುವಜನಾಂಗಕ್ಕೆ ಪ್ರೇರಣೆಯಾಗಿವೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಮಾತನಾಡಿ, ಸ್ವಾಮಿ ವಿವೇಕಾನಂದರು ಯಾವುದೇ ಒಂದು ಜಾತಿಗೆ, ಧರ್ಮಕ್ಕೆ ಸೀಮಿತರಾಗದೇ ಭಾರತವನ್ನು ಉನ್ನತ ಮಟ್ಟಕ್ಕೆ ಏರಿಸಿದರು. ಅವರ ವಿಚಾರಧಾರೆಗಳು ಯುವ ಜನಾಂಗಕ್ಕೆ ಆದರ್ಶವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸ್ವಾಮಿ ವಿವೇಕಾನಂದರ ತತ್ವಗಳು ಸಾಮಾಜಿಕ ಶ್ರೇಯಸ್ಸಿನ ಮಂತ್ರಗಳಾಗಿವೆ. ದಾಸ್ಯ, ಗುಲಾಮಗಿರಿ ಹೊಡೆದೋಡಿಸುವ ದಿವ್ಯ ಶಕ್ತಿಯಾಗಿ ವಿವೇಕಾನಂದರು ಜಗತ್ತಿಗೆ ಮಾರ್ಗದರ್ಶನ ಮಾಡಿದ ಮಹಾಕ್ರಾಂತಿ ಪುರುಷರಾಗಿದ್ದಾರೆ. ವಿವೇಕಾನಂದರ ಮಾತುಗಳಿಂದ ಯುವಶಕ್ತಿ ಎಚ್ಚರಗೊಂಡು ದೇಶದ ಬಗೆಗೆ ನಂಬಿಕೆ, ಶ್ರದ್ಧೆ ಉಳಿಸಿ ಬೆಳೆಸಬೇಕು ಎಂದರು.
ಪೊಲೀಸ್ ಕಾನ್ಸ್ಟೇಬಲ್ ಕರಬಸಪ್ಪ ಗೊಂದಿ ಮಾತನಾಡಿ, ಪ್ರತಿ ವರ್ಷದ ಜನ್ಮದಿನಕ್ಕೆ ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಆದರ್ಶವನ್ನು ರೂಢಿಸಿಕೊಳ್ಳಬೇಕು ಎಂದರು.
ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ರಕ್ತದಾನ, ನೇತ್ರದಾನ, ದೇಹದಾನ ಮಾಡಬೇಕು. ರಕ್ತದಾನ ಮಾಡಿ ನಾಲ್ಕು ಜೀವಗಳನ್ನು ಉಳಿಸಬೇಕು. ಆ ನಿಟ್ಟಿನಲ್ಲಿ ಮಾನವಿಯತೆಯ ನೆಲೆಯಲ್ಲಿ ಬುದುಕನ್ನು ನಡೆಸಬೇಕು ಎಂದರು.
ಅಗಡಿಯ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಡಾ| ಸಂತೋಷ ಆಲದಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವೇಕ ಬ್ಯಾಂಡ್ ಅಭಿಯಾನದ ಪದಾಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.