ಕೆಡಿಪಿ ಸಭೆಗೆ ನಿರಂತರ ಗೈರು: ಅಧಿಕಾರಿಗಳಿಗೆ ನೋಟಿಸ್ ನೀಡಲು ತೀರ್ಮಾನ
Team Udayavani, Nov 17, 2018, 12:45 PM IST
ಸೋಮವಾರಪೇಟೆ: ನಿರಂತರವಾಗಿ ಕೆ.ಡಿ.ಪಿ. ಸಭೆಗೆ ಗೈರುಹಾಜರಾಗುತ್ತಿರುವ ಅಬಕಾರಿ ನಿರೀಕ್ಷಕರು, ಸರ್ವೆ ಇಲಾಖೆ ಎ.ಡಿ.ಎಲ್.ಆರ್,, ಗಣಿ ಮತ್ತು ಭೂಗರ್ಭ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸು ನೀಡುವಂತೆ ಕೆಡಿಪಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನ ಸಭೆ ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಗಾಳಿಯಿಂದ ಉಂಟಾದ ಭೂ ಕುಸಿತ, ಪ್ರವಾಹದಿಂದ ಮನೆಗಳು, ಕಾಫಿ ತೋಟಗಳು, ಗದ್ದೆಗಳು ಜಲಾವೃತಗೊಂಡಿದ್ದು ಬೆಳೆಗಾರರು ಮತ್ತು ಕೃಷಿಕರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಪರಿಹಾರ ಕಾರ್ಯಗಳು ನಡೆದಿದ್ದರೂ, ಕೆಲವು ದಾಖಲಾತಿಗಳ ಬಗ್ಗೆ ತಾಂತ್ರಿಕ ತೊಂದರೆ ಎದುರಾದ ಹಿನ್ನೆಲೆಯಲ್ಲಿ ಅರ್ಹ ನಿರಾಶ್ರಿತರಿಗೆ ಇದೂವರೆಗೆ ಪರಿಹಾರ ದೊರೆತಿಲ್ಲ. ಈ ನಿಟ್ಟಿನಲ್ಲಿ ಇಲಾಖೆಗಳು ಕೂಡ ಕೆಲವು ಮಾನದಂಡವನ್ನು ಸಡಿಲಗೊಳಿಸಿ ಪ್ರತಿಯೋರ್ವ ನಿರಾಶ್ರಿತರಿಗೂ ಸೌಲಭ್ಯಗಳು ದೊರಕಿಸುವಂತೆ ಪ್ರಯತ್ನಿಸಬೇಕು. ಕೃಷಿ ಇಲಾಖೆಯ ಮೂಲಕ ಕೃಷಿ ಹೊಂಡ ತೆಗೆಯಲು ಮತ್ತು ರೈತರಿಗೆ ಪಂಪ್ಸೆಟ್ ಗಳನ್ನು ರಿಯಾಯಿತಿ ದರದಲ್ಲಿ ನೀಡಲು ಮುಂದಾಗಬೇಕು ಎಂದರು. ಕಲ್ಲಡಿ, ಹಟ್ಟಿಹೊಳೆ, ಗರಗಂದೂರು ಗ್ರಾಮಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಲವು ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲ .ತಕ್ಷಣವೇ ಇದರ ಬಗ್ಗೆ ಗಮನ ಹರಿಸಬೇಕೆಂದು ಸೆಸ್ಕ್ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.
ತಾಲೂಕಿನ ಅಂಗನವಾಡಿಗಳಿಗೆ ಸರಬರಾಜು ಆಗುತ್ತಿರುವ ಆಹಾರ ಸಾಮಗ್ರಿಗಳ ಗುಣಮಟ್ಟ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಇದರ ಬಗ್ಗೆ ಗಮನ ಹರಿಸಿ ಮಾಹಿತಿ ನೀಡಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗೆ ಶಾಸಕರು ಸೂಚನೆ ನೀಡಿದರು.
ಮಾದಾಪುರಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೋರ್ವರು ವಸತಿ ಗೃಹದಲ್ಲಿ ಕ್ಲಿನಿಕ್ ನಡೆಸುತ್ತಿದ್ದು ತಾಲೂಕಿನಾದ್ಯಂತ ಪ್ರಕೃತಿ ವಿಕೋಪದ ಸಂದರ್ಭದಲ್ಲಿ 1ಕೋಟಿಯಷ್ಟು ಮೌಲ್ಯದ ಔಷಧಗಳು ಬಂದಿದ್ದರೂ ಹೊರಗೆ ಚೀಟಿ ಬರೆದುಕೊಡುವ ಅವಶ್ಯಕತೆ ಏನಿದೆ? ತತ್ಕ್ಷಣವೇ ಅವರನ್ನು ವರ್ಗಾವಣೆ ಮಾಡಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಮತ್ತು ತಾ. ಪಂ.ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ರವಿ ಕುಮಾರ್ಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿ ತತ್ಕ್ಷಣವೇ ಎಚ್ಚರಿಕೆಯನ್ನು ನೀಡುವುದಾಗಿ ತಿಳಿಸಿದರು.
ತಾಲೂಕಿನ ಕುಶಾಲನಗರದಲ್ಲಿ 6 ಮತ್ತು ಶನಿವಾರಸಂತೆಯಲ್ಲಿ 6 ವೈದ್ಯರ ಹುದ್ದೆಗಳು ಇದ್ದರೂ, ಕೇವಲ 7 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವೆಡೆ ಆಯುಷ್ ಇಲಾಖೆಯ ವೈದ್ಯರನ್ನು ನೇಮಿಸಲಾಗಿದೆ. 24 ಎ.ಎನ್.ಎಂ. ಹುದ್ದೆ ಖಾಲಿ ಇದೆ ಎಂದು ತಿಳಿಸಿದರು.
ತಾಲ್ಲೂಕಿನ ಸುಂಠಿಕೊಪ್ಪ, ಗರಗಂದೂರು ಕಾಲೇಜು ಸಮೀಪ, ಗುಡ್ಡೆ ಹೊಸೂರು ರಾಣಿಗೇಟ್, ಶನಿವಾರಸಂತೆ, ಸೋಮವಾರಪೇಟೆ ಪದವಿ ಪೂರ್ವ ಕಾಲೇಜು ಆವರಣದ ಬಳಿ ಗಾಂಜಾ ಮಾರಾಟ ನಡೆಯುತ್ತಿದೆ. ಸೋಮವಾರಪೇಟೆ ತಾಲೂಕಿನ ಕೆಲವು ಪಟ್ಟಣ ಪ್ರದೇಶದ ರಿಕ್ರಿಯೇಶನ್ ಕ್ಲಬ್ ನಲ್ಲಿ ಅನಧಿಕೃತ ಇಸ್ಪೀಟ್ ಅಡ್ಡೆ ಕಾರ್ಯನಿರ್ವಹಿಸುತ್ತದೆ. ಕೆಲವು ಮನೆಗಳಲ್ಲಿ ಈ ದಂಧೆಯನ್ನು ಪ್ರಾರಂಭಿಸಲಾಗಿದೆ. ತಕ್ಷಣವೇ ಇದನ್ನು ಪತ್ತೆ ಹಚ್ಚಿ ವರದಿ ನೀಡಬೇಕೆಂದು ಸೋಮವಾರಪೇಟೆ ವೃತ್ತ ನೀರೀಕ್ಷಕ ನಂಜುಂಡೇಗೌಡ ಮತ್ತು ಕುಶಾಲ ನಗರ ವೃತ್ತ ನಿರೀಕ್ಷಕ ಕ್ಯಾತೆಗೌಡರಿಗೆ ಶಾಸಕರು ಸೂಚನೆ ನೀಡಿದರು.
ವೇದಿಕೆಯಲ್ಲಿ ತಾ. ಪಂ. ಅಧ್ಯಕ್ಷ. ಪುಷ್ಪರಾಜೇಶ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ತಂಗಮ್ಮ, ತಾ.ಪಂ. ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ಸುನಿಲ್ ಉಪಸ್ಥಿತರಿದ್ದರು.