ಗುರಿಕ್ಕಾರರಿಗೆ ಪಾರಂಪರಿಕ ಗಡಿಬಳೆ ಪ್ರದಾನ
Team Udayavani, Mar 16, 2019, 12:30 AM IST
ಕುಂಬಳೆ: ಕಂಬಾರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಜರಗಿದ ಧಾರ್ಮಿಕ ಸಮಾರಂಭದಲ್ಲಿ ಕುಡಾಲುಮೇರ್ಕಳ ಗ್ರಾಮದ ಶ್ರೀ ಜಟಾಧಾರಿ ದೈವದ ಅನುವಂಶಿಕ ಗಡಿಬಳೆ ಗುರಿಕ್ಕಾರರಾಗಿ ಕುಡಾಲು ಭಂಡಾರಗುತ್ತು ದೇಸಿಂಗ ಬಂಟ ಪರಂಪರೆಯ ಯಜಮಾನ ರಾಮಕೃಷ್ಣ ಭಂಡಾರಿಯವರಿಗೆ ಗಡಿಬಳೆ ಪ್ರದಾನ ಮಾಡಲಾಯಿತು.
ಹಿಂದಿನ ಗುರಿಕ್ಕಾರರಾಗಿದ್ದ ಯಜಮಾನ ಕಾಂತಪ್ಪ ರೈ ಅವರ ನಿಧನ ದಿಂದ ತೆರವಾಗಿದ್ದ ಸ್ಥಾನಕ್ಕೆ ಸಂಪ್ರ ದಾಯದಂತೆ ಭಂಡಾರಗುತ್ತಿನ ನೂತನ ಯಜಮಾನರಾಗಿ ರಾಮಕೃಷ್ಣ ಭಂಡಾರಿ ನಿಯುಕ್ತರಾಗಿದ್ದರು.
ಗಡಿಬಳೆ ಪ್ರದಾನ
ಸಮಾರಂಭದಲ್ಲಿ ಕಂಬಾರು ಕ್ಷೇತ್ರದ ಆಡಳಿತ ಮೊಕ್ತೇಸರ ಬಾಡೂರು ಯಜಮಾನ ಕುಂಞ್ಞಣ್ಣ ಭಂಡಾರಿ ಅವರು ಪಾರಂಪರಿಕ ಗಡಿಬಳೆ ಯನ್ನು ರಾಮಕೃಷ್ಣ ಭಂಡಾರಿಯವರಿಗೆ ತೊಡಿಸಿದರು.
ಕ್ಷೇತ್ರದ ಪ್ರಧಾನ ಅರ್ಚಕ ಬಾಲಕೃಷ್ಣ ಅಡಿಗರು ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.ಬ್ರಹ್ಮಶ್ರೀ ಪ್ರಕಾಶ ಕಡಮಣ್ಣಾಯ ತಂತ್ರಿ, ಕ್ಷೇತ್ರ ಮೊಕ್ತೇಸರರಾದ ನೆರಿಯ ಲಕ್ಷ್ಮೀ ನಾರಾಯಣ ಹೆಗ್ಡೆ ಸೇವಾಸಂಘದ ಅಧ್ಯಕ್ಷ ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡು ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ, ಧಾರ್ಮಿಕ ಪ್ರಮುಖರಾದ ಭಂಡಾರಗುತ್ತು ಸೀತಾರಾಮ ಶೆಟ್ಟಿ, ಅರಿಬೈಲು ಗೋಪಾಲ ಶೆಟ್ಟಿ, ಕುಂಡೇರಿ ಜನಾರ್ದನ ನಾಯಕ್ ಮತ್ತು ಕುಡಾಲು ಬಾಡೂರು ಗ್ರಾಮದ ಪ್ರಮುಖರು ಹಾಗೂ ಕುಡಾಲು ಭಂಡಾರಗುತ್ತು ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.