ಮಾನವೀಯತೆ ಮೆರೆದ ಗಂಗಾವತಿ ಆಟೋ ಚಾಲಕರು
Team Udayavani, Jan 28, 2019, 11:27 AM IST
ಗಂಗಾವತಿ: ದಾರಿ ತಪ್ಪಿಸಿಕೊಂಡು ನಗರಕ್ಕೆ ಆಗಮಿಸಿದ್ದ ಅಂಗವಿಕಲೆ ಅನ್ನಪೂರ್ಣಮ್ಮ ಅವರನ್ನು ಉಪಚರಿಸಿ ಹಿಟ್ನಾಳ ಗ್ರಾಮಕ್ಕೆ ವಾಪಸ್ ಕಳುಹಿಸುವ ಮೂಲಕ ನಗರದ ಆಟೋಚಾಲಕರು ಮಾನವೀಯತೆ ಮೆರೆದಿದ್ದಾರೆ.
ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದ ಅನ್ನಪೂರ್ಣಮ್ಮ ಎಂಬ ಅಂಗವಿಕಲ ಮಹಿಳೆಯೊಬ್ಬರು ಕೊಪ್ಪಳದಿಂದ ಹಿಟ್ನಾಳಗೆ ತೆರಳ ದಾರಿ ತಪ್ಪಿಸಿಕೊಂಡು ಶನಿವಾರ ರಾತ್ರಿ ಗಂಗಾವತಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇಡೀ ರಾತ್ರಿ ಬಸ್ ನಿಲ್ದಾಣದಲ್ಲೇ ಕಾಲ ಕಳೆದಿದ್ದಾಳೆ. ಇದನ್ನು ಗಮನಿಸಿದ ಆಟೋ ಚಾಲಕರು ಅನ್ನಪೂರ್ಣಮ್ಮ ಅವರನ್ನು ವಿಚಾರಿಸಿದಾಗ ದಾರಿ ತಪ್ಪಿ ಬಂದಿದ್ದು ತಿಳಿದಿದೆ. ನಂತರ ಉಪಹಾರ ಕೊಡಿಸಿ, ವಿಳಾಸ ಪತ್ತೆ ಮಾಡಿ ಮನೆಯವರ ಮೊಬೈಲ್ಗೆ ಕರೆ ಮಾಡಿ ಅನ್ನಪೂರ್ಣಮ್ಮ ಅವರನ್ನು ಪುನಃ ಹುಲಿಗಿ ಬಸ್ನಲ್ಲಿ ಕಳುಹಿಸುವ ವ್ಯವಸ್ಥೆ ಮಾಡಿದರು. ಇನ್ನೊಮ್ಮೆ ಹೀಗೆಲ್ಲಾ ಒಬ್ಬಂಟಿಯಾಗಿ ಎಲ್ಲಿಯೂ ಹೋಗದಂತೆ ಮನವರಿಕೆ ಮಾಡಿ ಹಿಟ್ನಾಳ ಬಸ್ ಮೂಲಕ ಕಳುಹಿಸಿದ್ದಾರೆ. ಆಟೋ ಚಾಲಕರ ಈ ಕಾರ್ಯವನ್ನು ಬಸ್ ನಿಲ್ದಾಣದಲ್ಲಿ ಪ್ರಯಾಣಕರು ಶ್ಲಾಘಿಸಿದ್ದಾರೆ.
ಕೊಪ್ಪಳ ಹೋಗಿ ಹಿಟ್ನಾಳ ಸ್ವಗ್ರಾಮಕ್ಕೆ ಆಗಮಿಸುವ ಸಂದರ್ಭದಲ್ಲಿ ದಾರಿ ತಪ್ಪಿ ಗಂಗಾವತಿ ಬಸ್ ನಿಲ್ದಾಣಕ್ಕೆ ಹೋಗಿದ್ದೆ. ಇಡೀ ರಾತ್ರಿ ಚಳಿಯಲ್ಲಿ ಕಾಲ ಕಳೆದೆ. ಬೆಳಗ್ಗೆ ಆಟೋ ಅಣ್ಣನವರು ಆಗಮಿಸಿ ಉಪಹಾರ ಮಾಡಿಸಿ, ವಿಳಾಸ ಕೇಳಿ ನನ್ನನ್ನು ಹಿಟ್ನಾಳ ಗ್ರಾಮಕ್ಕೆ ವಾಪಸ್ ಕಳಿಸಿದ್ದಾರೆ. ಅವರಿಗೆ ಧನ್ಯವಾದಗಳು.
•ಅನ್ನಪೂರ್ಣಮ್ಮ ಹಿಟ್ನಾಳ