ಮೂಲ್ಕಿಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ
Team Udayavani, Nov 19, 2017, 10:51 AM IST
ಮೂಲ್ಕಿ: ಗ್ರಂಥಾಲಯದ ಮೂಲಕ ಪುಸ್ತಕಗಳನ್ನು ಓದಿ, ಸಮಾಜಕ್ಕೆ ಉತ್ತಮ ಮಾಹಿತಿ ನೀಡಲು ಸಾಧ್ಯ ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮೂಲಕ ಮೂಲ್ಕಿ ಗ್ರಂಥಾಲಯ ಶಾಖೆ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ನಗರ ಪಂಚಾಯತ್ನ ಅಧ್ಯಕ್ಷ ಸುನೀಲ್ ಆಳ್ವ ಮಾತನಾಡಿ, ಗ್ರಂಥಾಲಯಗಳ ಮೂಲಕ ಜನರಲ್ಲಿ ಪ್ರಪಂಚದ ಅರಿವು ಮತ್ತು ಪೂರ್ಣಕಾಲಿಕಾ ಜ್ಞಾನ ಸಂಪಾದನೆ ಆಗುತ್ತದೆ. ಅಲ್ಲದೇ ಬದುಕಿನ ಜತೆಗೆ ಓರ್ವ ಮಾರ್ಗದರ್ಶಕನಂತೆ ಕೆಲಸ ಮಾಡುವ ಗ್ರಂಥಗಳ ನಿರ್ವಹಣೆಯ ಕೆಲಸವಾಗುತ್ತಿದೆ. ಮೂಲ್ಕಿ ನಗರ ಪಂಚಾಯತ್ ಗ್ರಂಥಾಲಯ ನಿರ್ಮಾಣ ಕೆಲಸಕ್ಕೆ ಮುಂದಾಗಿದ್ದು, ಪೂರ್ಣಕಾಲಿಕ ಗ್ರಂಥಾಲಯದ ಕಟ್ಟಡ ನಿರ್ಮಿಸುವಲ್ಲಿ ಇಲಾಖೆಯ ಜತೆ ಸಹಕರಿಸಲಿದೆ ಎಂದು ಹೇಳಿದರು.
ಬಿಲ್ಲವ ಸಂಘದ ಅಧ್ಯಕ್ಷ ಸಾಹಿತಿ ಹಾಗೂ ನಿವೃತ್ತ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲ್ಯಾನ್ ಮಾತನಾಡಿ, ಗ್ರಂಥಾಲಯದ ಪುಸ್ತಕಗಳನ್ನು ಓದುವ ಮೂಲಕ ಸಾಹಿತಿಯಾಗುವ ಪ್ರೇರಣೆ ನನಗಾಯಿತು. ಗ್ರಂಥಾಲಯದ ಶಕ್ತಿ ಯಿಂದ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಅನೇಕ ಸಾಹಿತ್ಯಗಳು ಹುಟ್ಟಿ ಬೆಳೆಯುವುದರಲ್ಲಿ ಗ್ರಂಥಾಲಯಗಳ ಕೊಡುಗೆ ಪ್ರಮುಖವಾಗಿದೆ ಎಂದು ಹೇಳಿದರು.
ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷ ಬಾಹುಬಲಿ ಪ್ರಸಾದ್, ಹಳೆಯಂಗಡಿಯ ಸಾಹಿತಿ ಶಕುಂತಳಾ ಭಟ್, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ನಗರ ಪಂಚಾಯತ್ ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್, ಮುಖ್ಯಾಧಿಕಾರಿ ಇಂದು ಎಂ., ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದರು.
ಸಮ್ಮಾನ
ನಾಲ್ಕು ದಶಕಗಳಿಂದ ಮೂಲ್ಕಿ ಗ್ರಂಥಾಲಯಕ್ಕೆ ಉಚಿತವಾಗಿ ಜಾಗವನ್ನು ಒದಗಿಸಿರುವ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸೇವಾ ಮನೋ ಭಾವನೆಯನ್ನು ಗುರುತಿಸಿ ಸಂಘಧ ಅಧ್ಯಕ್ಷ ಗೋಪಿನಾಥ ಪಡಂಗ ಅವರನ್ನು ಶಾಸಕ ಅಭಯಚಂದ್ರ ಸನ್ಮಾನಿಸಿ ಗೌರವಿಸಿದರು. ಗ್ರಾಮ ಪಂಚಾಯತ್ಗಳ ಮೂಲಕ ನಡೆಸಲು ಪಡುವ ಗ್ರಂಥಾಲಯಗಳ ಬೆಳವಣಿಗೆಯಲ್ಲಿ ಮೇಲ್ವಿಚಾರಕಿಯರಾಗಿ ದುಡಿಯುತ್ತಿರುವ ಹಳೆಯಂಗಡಿಯ ನಳಿನಿ ಶೆಣೈ, ಕಡೆಶ್ವಾಲ್ಯದ ಯೋಗಿತಾ, ಅಡ್ಯಾರ್ ನ ಮಲ್ಲಿಕಾ ಮತ್ತು ಅಳಿಕೆಯ ಉಷಾ ಅವರನ್ನು ಸಮಾರಂಭದಲ್ಲಿ ಸಮ್ಮಾನಿಸಿ, ಗೌರವಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಸವಿತಾ ಅವರು ಸ್ವಾಗತಿಸಿದರು. ನಮಿತಾ ಕಾರ್ಯಕ್ರಮ ನಿರ್ವಹಿಸಿದರು. ಹರೀಶ್ ಸುವರ್ಣ ವಂದಿಸಿದರು.
ಅರಿವು ಅಗತ್ಯ
ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ| ಎಸ್. ಆರ್. ರಂಗನಾಥನ್ ಅವರು ಗ್ರಂಥಾಲಯದ ಕಲ್ಪನೆಯನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನದಲ್ಲಿ ಯಶಸ್ಸು ಕಂಡವರು. ಅಂತಹ ಮಹಾನ್ ಸಾಧಕರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಆಗಬೇಕಿದೆ .
ಬಾಹುಬಲಿ ಪ್ರಸಾದ್ ,
ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷ