ಸುರತ್ಕಲ್ ಟೋಲ್ಗೇಟ್ ಹಣ ಮಾಡುವ ಸ್ಕೀಂ!
Team Udayavani, Oct 23, 2018, 9:44 AM IST
ಸುರತ್ಕಲ್: ಕಾನೂನಿಗೆ ವಿರುದ್ಧವಾಗಿ ಸುರತ್ಕಲ್ನಲ್ಲಿ ಟೋಲ್ಗೇಟ್ ನಿರ್ಮಿಸಿ ಹಲವು ವರ್ಷಗಳಿಂದ ಜನರ ಹಣ ಸುಲಿಗೆ ಮಾಡಲಾಗುತ್ತಿದೆ. ಟೋಲ್ಗೇಟ್ ಅಧಿಕಾರಿಗಳಿಗೆ ಹಣ ಮಾಡುವ ಸ್ಕೀಮ್ ಎಂದು ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಹೇಳಿದರು.
ಎನ್ಐಟಿಕೆ ಸಮೀಪ ಇರುವ ಟೋಲ್ಗೇಟ್ನ ಪರವಾನಿಗೆ ನವೀಕರಣ ವಿರೋಧಿಸಿ ಹಾಗೂ ಮುಚ್ಚುವಂತೆ ಆಗ್ರಹಿಸಿ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ನಲ್ಲಿ ಪ್ರಾರಂಭಿಸಿರುವ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಸದರ ಮೌನ ಸಮ್ಮತಿ
ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ರಾಜ್ಯ ಸರಕಾರದ ತೀರ್ಮಾನ ಆಗಿದ್ದರೂ ಟೋಲ್ ಮುಚ್ಚಿಲ್ಲ. ಸಂಸದರು ಹೆದ್ದಾರಿಯಲ್ಲಿ ಪಾದಯಾತ್ರೆ ಮಾಡಿ ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ. ಟೋಲ್ ರದ್ದು ಮಾಡುವ ಬದಲು ನವೀಕರಣಕ್ಕೆ ಮೌನ ಸಮ್ಮತಿ ನೀಡಿದ್ದಾರೆ. ಸ್ಥಳೀಯ ಶಾಸಕರೂ ಜನಾಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ, ಟೋಲ್ ಗೇಟ್ ರದ್ದಾಗುವವರೆಗೆ ಹಗಲು ರಾತ್ರಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಶೇಖರ್ ಹೆಜಮಾಡಿ ಮಾತನಾಡಿ, ಉಡುಪಿ, ಮಂಗಳೂರಿನ ಜಿಲ್ಲಾಧಿಕಾರಿಗಳ ಸಮ್ಮುಖ ಅದೆಷ್ಟೋ ಸಭೆಗಳಾಗಿ ನಿರ್ಣಯಗಳಾದರೂ ಜಾರಿ ಮಾತ್ರ ಆಗುತ್ತಿಲ್ಲ. ಸಂಸದರು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಸಂಸದರು, ಶಾಸಕರ ಸಮ್ಮುಖ ಸಭೆ ನಡೆದು ನಿರ್ಣಯ ಜಾರಿಯಾಗದೆ ಹೋದರೆ ಜನಪ್ರತಿನಿಧಿಗಳ ಮಾತಿಗೆ, ಅಧಿಕಾರಕ್ಕೆ ಬೆಲೆ ಇಲ್ಲವೆ? ಲೋಕಸಭಾ ಚುನಾವಣೆ ಹತ್ತಿರದಲ್ಲೇ ಇದ್ದು ಇದಕ್ಕಾಗಿ ನಾಟಕ ಮಾಡುತ್ತಿದ್ದಾರೆಯೆ? ಎಂದು ಪ್ರಶ್ನಿಸಿದರು.
ಎಂ.ಜಿ. ಹೆಗಡೆ, ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಸದಾಶಿವ ಶೆಟ್ಟಿ, ರೇವತಿ ಪುತ್ರನ್, ಪುರುಷೋತ್ತಮ ಚಿತ್ರಾಪುರ, ದಯಾನಂದ ಶೆಟ್ಟಿ, ಬಿ.ಕೆ. ಇಮಿ¤ಯಾಜ್, ಉಮ್ಮರ್ ಫಾರೂಕ್, ಟಿ.ಎನ್.ರಮೇಶ್, ವೈ. ರಾಘವೇಂದ್ರ ರಾವ್, ಸಂತೋಷ್ ಬಜಾಲ್, ಯಾದವ ಶೆಟ್ಟಿ, ಹಕೀಂ ಕೂಳೂರು, ಪುನೀತ್ ಶೆಟ್ಟಿ, ಹಿಲ್ಡಾ ಆಳ್ವ, ಮೂಸಬ್ಬ ಪಕ್ಷಿಕೆರೆ, ಶ್ರೀನಾಥ್ ಕುಲಾಲ್, ಅಬೂಬಕ್ಕರ್ ಬಾವಾ, ಹುಸೈನ್ ಕಾಟಿಪಳ್ಳ, ಶರೀಫ್ ಚೊಕ್ಕಬೆಟ್ಟು, ಶ್ರೀಕಾಂತ್ ಸಾಲ್ಯಾನ್, ಗಂಗಾಧರ ಬಂಜನ್, ಭರತ್ ಕುಳಾç ಮೊದಲಾದವರು ಉಪಸ್ಥಿತರಿದ್ದರು.
ಸುರತ್ಕಲ್ ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘ, ಕಿನ್ನಿಗೋಳಿ ವಲಯ ಲಾರಿ ಮಾಲಕರ ಸಂಘ, ತ್ರಿಚಕ್ರ ಟೆಂಪೊ ಚಾಲಕರ-ಮಾಲಕರ ಸಂಘ ಸುರತ್ಕಲ್, ಗೂಡ್ಸ್ ಟೆಂಪೊ ಚಾಲಕರ ಸಂಘ ಸುರತ್ಕಲ್, ಸುರತ್ಕಲ್ ಆಟೋ ಚಾಲಕರ ಯೂನಿಯನ್, ಆನ್ಲೈನ್ ಟ್ಯಾಕ್ಸಿ ಓನರ್ಸ್ ಅಸೋಸಿಯೇಶನ್, ನಾಗರಿಕ ಸಮಿತಿ ಕುಳಾç, ಟ್ರಾನ್ಸ್ ಪೋರ್ಟ್ ವರ್ಕರ್ಸ್ ಯೂನಿಯನ್ ಸುರತ್ಕಲ್, ಜಯ-ಕರ್ನಾಟಕ ಸುರತ್ಕಲ್, ಡಿವೈಎಫ್ಐ ಸುರತ್ಕಲ್ ವಲಯ ಬೆಂಬಲ ನೀಡಿವೆ.
ಇರ್ಕಾನ್ ಸರಕಾರದ ಅಧೀನ ಸಂಸ್ಥೆಯಾಗಿದ್ದು ಬಿ.ಸಿ. ರೋಡ್- ಸುರತ್ಕಲ್ ನಡುವೆ ಸಣ್ಣ ರಸ್ತೆಗೆ ಟೋಲ್ ಗೇಟ್ ಅಳವಡಿಸಿರುವುದು, ಪಾಲಿಕೆ ವ್ಯಾಪ್ತಿಯಲ್ಲಿ ಟೋಲ್ ನಿರ್ಮಾಣ ಕಾನೂನು ಬಾಹಿರ. ಅಧಿಕಾರಿಗಳ ಬೇಜವಾಬ್ದಾರಿ ನಿರ್ಧಾರಗಳನ್ನು ರದ್ದು ಮಾಡಲು ಇಂತಹ ಪ್ರತಿಭಟನೆ ಅಗತ್ಯ.
ವಿಜಯ ಕುಮಾರ್ ಶೆಟ್ಟಿ