ಟಿಕೆಟ್ ಆಕಾಂಕ್ಷಿಗಳ ಪೈಪೋಟಿ
Team Udayavani, Feb 4, 2019, 4:26 AM IST
ಮಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯತೊಡಗಿದ್ದು, ಇದಕ್ಕೆ ಮಂಗಳೂರಿನಲ್ಲಿ ರವಿವಾರ ಪಕ್ಷದ ವರಿಷ್ಠರು ಆಗಮಿಸಿದ್ದ ವೇಳೆ ಭೇಟಿಗೆ ಉಂಟಾದ ಪೈಪೋಟಿ ಸನ್ನಿವೇಶವೇ ಸಾಕ್ಷಿ.
ಎಐಸಿಸಿ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯ ಹಾಗೂ ಹಿರಿಯ ನಾಯಕ ಎ.ಕೆ. ಆ್ಯಂಟನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರವಿವಾರ ಮಂಗಳೂರಿಗೆ ಭೇಟಿ ನೀಡಿದ್ದರು. ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ಆ್ಯಂಟನಿ ಹಾಗೂ ವೇಣುಗೋಪಾಲ್ ಕೇಂದ್ರ ಮಟ್ಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಹಿನ್ನೆಲೆಯಲ್ಲಿ ಈ ಜಿಲ್ಲಾ ಭೇಟಿ ಮಹತ್ವ ಪಡೆದಿತ್ತು.
ಆ್ಯಂಟನಿ ಹಾಗೂ ವೇಣುಗೋಪಾಲ್ ಸಕೀಟ್ ಹೌಸ್ನಲ್ಲಿ 2 ತಾಸು ತಂಗಿದ್ದರು. ದಿನೇಶ್ ಗುಂಡೂರಾವ್ ಕೂಡ ಆಗಮಿಸಿದ್ದರು. ಟಿಕೆಟ್ ಆಕಾಂಕ್ಷಿಗಳಾದ ಬಿ. ರಮಾನಾಥ ರೈ, ಐವನ್ ಡಿ’ಸೋಜಾ, ಮಿಥುನ್ ರೈ, ಕಣಚೂರು ಮೋನು, ರಾಜಶೇಖರ ಕೋಟ್ಯಾನ್, ಧನಂಜಯ ಅಡ³ಂಗಾಯ ಆಗಮಿಸಿ ನಾಯಕರನ್ನು ಭೇಟಿಯಾದರು.
ಆದರೆ ಈ ವೇಳೆ ಟಿಕೆಟ್ ಹಂಚಿಕೆ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಇದು ಆಕಾಂಕ್ಷಿಗಳಲ್ಲಿ ನಿರಾಸೆಗೂ ಕಾರಣವಾಯಿತು. ಟಿಕೆಟ್ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಸಕೀಟ್ ಹೌಸ್ ಆಸುಪಾಸು ಅಲ್ಲಲ್ಲಿ ಗುಂಪು ಸೇರಿ ಚರ್ಚಿಸುತ್ತಿದುದು ಕಂಡು ಬಂತು.